Asianet Suvarna News Asianet Suvarna News

Ramanagara: ಕಾಂಗ್ರೆಸ್‌ ಅಭ್ಯ​ರ್ಥಿ​ಗಳ ಆಯ್ಕೆ ಕುರಿತು ಚುನಾ​ವಣಾ ಸಮಿತಿ ಸಭೆ

2023ರ ವಿಧಾ​ನ​ಸಭಾ ಚುನಾ​ವ​ಣೆಗೆ ಟಿಕೆಟ್‌ ಆಕಾಂಕ್ಷಿ​ಗ​ಳಿಂದ ಅರ್ಜಿ ಆಹ್ವಾ​ನಿ​ಸಿದ್ದ ಕಾಂಗ್ರೆಸ್‌ ಪಕ್ಷ ಬುಧವಾರ ಜಿಲ್ಲೆಯ ನಾಲ್ಕು ಕ್ಷೇತ್ರ​ಗಳ ಅಭ್ಯ​ರ್ಥಿ​ಗಳ ಆಯ್ಕೆ ಕುರಿ​ತಂತೆ ಕೆಪಿ​ಸಿಸಿ ವೀಕ್ಷ​ಕರ ಮೂಲಕ ಚುನಾ​ವಣಾ ಸಮಿತಿ ಸಭೆ ನಡೆಸಿ ಅಭಿ​ಪ್ರಾಯ ಸಂಗ್ರ​ಹಿ​ಸಿತು. 
 

Karnataka Assembly Election 2023 Election Committee meeting on selection of Congress candidates at Ramanagara gvd
Author
First Published Dec 29, 2022, 9:47 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ (ಡಿ.29): 2023ರ ವಿಧಾ​ನ​ಸಭಾ ಚುನಾ​ವ​ಣೆಗೆ ಟಿಕೆಟ್‌ ಆಕಾಂಕ್ಷಿ​ಗ​ಳಿಂದ ಅರ್ಜಿ ಆಹ್ವಾ​ನಿ​ಸಿದ್ದ ಕಾಂಗ್ರೆಸ್‌ ಪಕ್ಷ ಬುಧವಾರ ಜಿಲ್ಲೆಯ ನಾಲ್ಕು ಕ್ಷೇತ್ರ​ಗಳ ಅಭ್ಯ​ರ್ಥಿ​ಗಳ ಆಯ್ಕೆ ಕುರಿ​ತಂತೆ ಕೆಪಿ​ಸಿಸಿ ವೀಕ್ಷ​ಕರ ಮೂಲಕ ಚುನಾ​ವಣಾ ಸಮಿತಿ ಸಭೆ ನಡೆಸಿ ಅಭಿ​ಪ್ರಾಯ ಸಂಗ್ರ​ಹಿ​ಸಿತು. ಕಾಂಗ್ರೆಸ್‌ ಪಕ್ಷ ಈ ಬಾರಿ ಚುನಾ​ವಣಾ ಸ್ಪರ್ಧೆಗೆ ಅರ್ಜಿ ಆಹ್ವಾನ ಮಾಡಿತ್ತು. ಅದ​ರಂತೆ ಒಂದೊಂದು ಕ್ಷೇತ್ರ​ದಲ್ಲಿ ಮೂರ್ನಾಲ್ಕು ಹಾಗೂ ಏಳೆಂಟು ಅರ್ಜಿ​ಗಳೂ ಸಲ್ಲಿ​ಕೆ​ಯಾ​ಗಿವೆ. ಜಿಲ್ಲಾ ಸಮಿ​ತಿ​ಗ​ಳಿಗೆ ಆ ಅರ್ಜಿ​ಗ​ಳನ್ನು ವಾಪಸ್‌ ಕಳು​ಹಿಸಿ ಪ್ರತಿ ಕ್ಷೇತ್ರ​ದಿಂದ ಗೆಲ್ಲು​ವಂತಹ ಇಬ್ಬರು ಅಭ್ಯ​ರ್ಥಿ​ಗಳ ಹೆಸ​ರನ್ನು ಅಂತಿಮ ಮಾಡಿ ಕಳು​ಹಿ​ಸಲು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಸೂಚನೆ ನೀಡಿ​ದ್ದ​ರು.

ಈ ಹಿನ್ನೆ​ಲೆ​ಯಲ್ಲಿ ರಾಮನಗ​ರದ ಹೊರ ವಲ​ಯದ ರೆಸಾರ್ಚ್‌ನಲ್ಲಿ ಕೆಪಿ​ಸಿಸಿ ಚುನಾ​ವಣಾ ಸಮಿತಿ ಸದಸ್ಯೆ ಮಾಜಿ ಸಚಿವೆ ಉಮಾಶ್ರೀ ಅಧ್ಯ​ಕ್ಷ​ತೆ​ಯಲ್ಲಿ ಟಿಕೆಟ್‌ ಆಕಾಂಕ್ಷಿ​ತರ ಅರ್ಜಿ ವಿಲೇ​ವಾರಿ ಮಾಡುವ ಸಲು​ವಾ​ಗಿಯೇ ರಾಮ​ನ​ಗರ ಜಿಲ್ಲಾ ಚುನಾ​ವಣಾ ಸಮಿತಿ ಸಭೆ ನಡೆಯಿತು. ರಾಮ​ನ​ಗರ, ಮಾಗಡಿ, ಚನ್ನ​ಪ​ಟ್ಟಣ ಹಾಗೂ ಕನ​ಕ​ಪುರ ವಿಧಾ​ನ​ಸಭಾ ಕ್ಷೇತ್ರ​ಗಳ ಆಕಾಂಕ್ಷಿತ ಅಭ್ಯ​ರ್ಥಿ​ಗಳ ಆಯ್ಕೆ ಕುರಿತು ಪಕ್ಷದ ಹಿರಿಯ ಮುಖಂಡರು, ಜನ​ಪ್ರ​ತಿ​ನಿ​ಧಿ​ಗಳು ಹಾಗೂ ವಿವಿಧ ಘಟ​ಕ​ಗಳ ಪದಾ​ಧಿ​ಕಾ​ರಿ​ಗ​ಳೊಂದಿಗೆ ವೀಕ್ಷ​ಕರು ಸುಧೀ​ರ್ಘ​ವಾಗಿ ಸಮಾ​ಲೋ​ಚನೆ ನಡೆ​ಸಿ​ದ​ರು.

ಜೆಡಿ​ಎಸ್‌ ಅಧಿ​ಕಾ​ರಕ್ಕೆ ಬಂದಲ್ಲಿ ಪಂಚ​ರತ್ನ ಜಾರಿಗೆ: ನಿಖಿಲ್‌ ಕುಮಾ​ರ​ಸ್ವಾ​ಮಿ

ಈ ಸಭೆ​ಯಲ್ಲಿ ಆಕಾಂಕ್ಷಿತ ಅಭ್ಯ​ರ್ಥಿ​ಗಳ ಬಗ್ಗೆ ಇರುವ ಅಭಿ​ಪ್ರಾಯ ಹಾಗೂ ಗೆಲ್ಲುವ ಸಾಮ​ಥ್ಯ​ರ್‍ಗಳ ಕುರಿತು ಚರ್ಚೆ ನಡೆಸಿ​ರುವ ವೀಕ್ಷ​ಕರು, ಯಾವುದೇ ಅಭ್ಯ​ರ್ಥಿಯ ಹೆಸ​ರನ್ನು ಅಂತಿ​ಮ​ಗೊ​ಳಿ​ಸದೇ ಪಟ್ಟಿಸಿದ್ಧ​ಪ​ಡಿಸಿ ಸ್ಕ್ರೀನಿಂಗ್‌ ಕಮಿ​ಟಿಗೆ ಕಳು​ಹಿ​ಸಿ​ಕೊ​ಡಲಿ​ದ್ದಾ​ರೆ. ಈಗಾಗಲೇ ಕಾಂಗ್ರೆಸ್‌ ಪಕ್ಷದ ವತಿಯಿಂದ ವೀಕ್ಷಕರನ್ನು ಕಳುಹಿಸಿ ಜಿಲ್ಲಾ ಹಾಗೂ ತಾಲೂಕು ಘಟಕಗಳಿಂದ ಟಿಕೆಟ್‌ ಆಕಾಂಕ್ಷಿಗಳ ಮಾಹಿತಿ ಸಂಗ್ರಹಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಕೂಡ ಪ್ರತ್ಯೇಕ ಸಮೀಕ್ಷೆ ನಡೆಸಿದ್ದಾರೆ. ಆ ಮೂಲಕ ಆಯಾಯ ಕ್ಷೇತ್ರಗಳು ಹಾಗೂ ಆಕಾಂಕ್ಷಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.

ಈಗಾಗಲೇ ಜಿಲ್ಲೆಯ ನಾಲ್ಕು ಕ್ಷೇತ್ರ​ಗ​ಳಿಗೆ 11 ಆಕಾಂಕ್ಷಿ​ಗಳು ಅರ್ಜಿ ಸಲ್ಲಿಸಿದ್ದು, ಚನ್ನ​ಪ​ಟ್ಟಣ ಕ್ಷೇತ್ರದಲ್ಲಿ 8 ಮಂದಿ ಟಿಕೆಟ್‌ ಬಯ​ಸಿ​ದ್ದಾರೆ. ಪ್ರತಿಯೊಬ್ಬ ಆಕಾಂಕ್ಷಿಯ ಬಗ್ಗೆ ಕ್ಷೇತ್ರದಲ್ಲಿರುವ ಅಭಿಪ್ರಾಯ, ಜಾತಿ ಲೆಕ್ಕಾಚಾರ, ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯ ಸೋಲಿನ ಅಂತರ, ಹಾಲಿ ಶಾಸಕರ ಬಗ್ಗೆ ಕ್ಷೇತ್ರದಲ್ಲಿರುವ ಅಭಿಪ್ರಾಯ, ಹೊಸ ಮುಖಗಳ ಬಗ್ಗೆ ಇರುವ ಮಾಹಿತಿ ಎಲ್ಲವೂ ಸ್ಕ್ರೀನಿಂಗ್‌ ಕಮಿ​ಟಿ​ಯಲ್ಲಿ ಚರ್ಚೆಯಾಗಲಿದೆ. ಅಭ್ಯರ್ಥಿಗಳಿಗೆ ಇರುವ ಗೆಲ್ಲುವ ಶಕ್ತಿ ಹಾಗೂ ಅವರ ಬಗ್ಗೆ ಸಮೀಕ್ಷೆಗಳಲ್ಲಿ ಬಂದಿರುವ ಮಾಹಿತಿಯ ಬಗ್ಗೆ ಸಮಾಲೋಚನೆ ನಡೆಸಿದ ತರು​ವಾಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಚನ್ನ​ಪಟ್ಟಣ ಕ್ಷೇತ್ರ ​ಅಭ್ಯ​ರ್ಥಿ​ ಆಯ್ಕೆ ಕಗ್ಗಂಟು: ರಾಮ​ನ​ಗರ, ಮಾಗಡಿ, ಕನ​ಕ​ಪುರ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿತ ಅಭ್ಯ​ರ್ಥಿ​ಗಳ ಹೆಸರು ಅಂತಿ​ಮ​ಗೊಂಡರೆ, ಚನ್ನ​ಪ​ಟ್ಟಣ ಕ್ಷೇತ್ರದ ಆಕಾಂಕ್ಷಿ​ತ ಅಭ್ಯರ್ಥಿಗಳ ಆಯ್ಕೆಯೂ ಕಗ್ಗಂಟಾ​ಗಿಯೇ ಉಳಿ​ಯಿತು. ಚುನಾ​ವಣಾ ಸಮಿತಿ ಸಭೆ​ಯಲ್ಲಿ ರಾಮನಗರ ಕ್ಷೇತ್ರ​ದಿಂದ ಇಕ್ಬಾಲ್‌ ಹುಸೇನ್‌, ಮಾಗಡಿ ಕ್ಷೇತ್ರ​ದಿಂದ ಬಾಲ​ಕೃಷ್ಣ ಹಾಗೂ ಕನ​ಕ​ಪುರ ಕ್ಷೇತ್ರ​ದಿಂದ ಡಿ.ಕೆ.​ಶಿ​ವ​ಕು​ಮಾರ್‌ ಅಭ್ಯ​ರ್ಥಿ​ಗಳೆಂದು ಅಂತಿ​ಮ​ಗೊ​ಳಿಸಲು ಸಹ​ಮತ ವ್ಯಕ್ತ​ವಾ​ಯಿತು. ಮೊದಲು ಪಕ್ಷದ ಹಿರಿಯ ಮುಖಂಡ​ರೊಂದಿಗೆ ಚರ್ಚೆ ನಡೆ​ಸಿದ ಕೆಪಿ​ಸಿಸಿ ವೀಕ್ಷ​ಕರು ಆನಂತರ ಆಕಾಂಕ್ಷಿತ ಅಭ್ಯ​ರ್ಥಿ​ಗ​ಳೊಂದಿಗೆ ಪ್ರತ್ಯೇ​ಕ​ವಾಗಿ ಸಮಾ​ಲೋ​ಚನೆ ನಡೆ​ಸಿ​ದರು. 

ಅಲ್ಲದೆ, ಪಕ್ಷದ ವಿವಿಧ ಘಟ​ಕ​ಗಳ ಅಧ್ಯ​ಕ್ಷರು, ಪದಾ​ಧಿ​ಕಾ​ರ​ಗ​ಳಿಂದಲೂ ಆಕಾಂಕ್ಷಿತ ಅಭ್ಯ​ರ್ಥಿ​ಗಳ ಬಗ್ಗೆ ಅಭಿ​ಪ್ರಾಯ ಸಂಗ್ರ​ಹಿಸಿದ್ದರು ಎನ್ನ​ಲಾ​ಗಿದೆ. ಸಭೆ​ಯಲ್ಲಿ ರಾಮ​ನ​ಗರ ಕ್ಷೇತ್ರ ಅಭ್ಯರ್ಥಿ ವಿಚಾ​ರ​ವಾಗಿ ಒಂದಿ​ಬ್ಬರು ಮುಖಂಡರು ಡಿ.ಕೆ.​ಶಿ​ವ​ಕು​ಮಾರ್‌ ಅಥವಾ ಡಿ.ಕೆ.​ಸು​ರೇಶ್‌ ಸ್ಪರ್ಧೆ ಮಾಡ​ಬೇಕು. ಇಲ್ಲಿಂದ ಗೆದ್ದ​ವರು ಮುಖ್ಯ​ಮಂತ್ರಿ ಆಗು​ತ್ತಾ​ರೆಂದು ಸಲಹೆ ನೀಡಿ​ದರು. ಇದಕ್ಕೆ ಖಾರ​ವಾ​ಗಿ​ಯೇ ಪ್ರತಿ​ಕ್ರಿ​ಯಿ​ಸಿದ ಡಿ.ಕೆ.​ಸು​ರೇಶ್‌, ಇಕ್ಬಾಲ್‌ ಹುಸೇನ್‌ ಅವರೇ ಅಭ್ಯ​ರ್ಥಿಯಾಗ​ಲಿದ್ದು, ಇದ​ರಲ್ಲಿ ಯಾವ ಅನು​ಮಾ​ನವೂ ಬೇಡ. ರಾಮ​ನ​ಗರ ಮಾತ್ರ​ವಲ್ಲ ಮಂಡ್ಯ, ಮೈಸೂರು ಜಿಲ್ಲೆ​ಗ​ಳಲ್ಲಿ ಗೆದ್ದ​ವರು ಮುಖ್ಯ​ಮಂತ್ರಿ ಆಗಿ​ದ್ದಾರೆ ಎಂದು ಹೇಳಿ ಬಾಯಿ ಮುಚ್ಚಿ​ಸಿದರು. ಕಳೆದ ಚುನಾ​ವ​ಣೆ​ಯಲ್ಲಿ ಸೋತರೂ ಇಕ್ಬಾಲ್‌ ಕ್ಷೇತ್ರ​ದಲ್ಲಿ ಜನರ ಕಷ್ಟಸುಖ​ಗಳನ್ನು ಆಲಿ​ಸು​ತ್ತಿ​ದ್ದಾರೆ. ಇಕ್ಬಾಲ್‌ ರವರು ಅರ್ಜಿ ಸಲ್ಲಿ​ಸು​ತ್ತಾರೆ ಅಷ್ಟೆ. 

Ramanagara: ರಾಗಿ ಬೆಂಬಲ ಬೆಲೆ ನೋಂದ​ಣಿ​ಯಲ್ಲಿ ಕುಸಿತ!

ಡಿ.ಕೆ.​ಶಿ​ವ​ಕು​ಮಾರ್‌ ಅವರೇ ಅಭ್ಯ​ರ್ಥಿ​ಯೆಂದು ಭಾವಿಸಿ ಕೆಲಸ ಮಾಡ​ಬೇಕು. ಜೆಡಿ​ಎಸ್‌ನಿಂದ ಯಾರೇ ಅಭ್ಯ​ರ್ಥಿ​ಯಾ​ದರು ಕುಮಾ​ರ​ಸ್ವಾ​ಮಿ​ರ​ವರೇ ಎದು​ರಾ​ಳಿ​ಯೆಂದು ತಿಳಿದು ಹೋರಾಟ ನಡೆ​ಸ​ಬೇಕು ಎಂದು ಕಿವಿ​ಮಾತು ಹೇಳಿ​ದ​ರೆಂದು ತಿಳಿ​ದು ಬಂದಿ​ದೆ. ಮಾಗಡಿ ಕ್ಷೇತ್ರದಿಂದ ಬಾಲ​ಕೃಷ್ಣ ಹಾಗೂ ಕನ​ಕ​ಪುರ ಕ್ಷೇತ್ರ​ದಿಂದ ಡಿ.ಕೆ.​ಶಿ​ವ​ಕು​ಮಾರ್‌ ಪರ ಒಲವು ವ್ಯಕ್ತ​ವಾ​ಯಿತು. ಇನ್ನು ಚನ್ನ​ಪ​ಟ್ಟಣ ಕ್ಷೇತ್ರ​ದಲ್ಲಿ 8 ಮಂದಿ ಆಕಾಂಕ್ಷಿ​ತರು ಇದ್ದಿ​ದ್ದ​ರಿಂದ ಅವ​ರೆ​ಲ್ಲರ ಅಭಿ​ಪ್ರಾ​ಯ​ಗ​ಳನ್ನು ವೀಕ್ಷ​ಕರು ಪಡೆ​ದು​ಕೊಂಡರು. ಕೆಪಿ​ಸಿಸಿ ಉಪಾ​ಧ್ಯಕ್ಷ​ರಾದ ಮಾಜಿ ಸಚಿವ ನರೇಂದ್ರ​ಸ್ವಾಮಿ , ಪ್ರಧಾನ ಕಾರ್ಯ​ದರ್ಶಿ ಸೈಯದ್‌ ಜಿಯಾ​ವುಲ್ಲಾ , ಸಂಸದ ಡಿ.ಕೆ.​ಸು​ರೇಶ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಂಗಾ​ಧರ್‌ ಉಪ​ಸ್ಥಿ​ತ​ರಿ​ದ್ದರು.

Follow Us:
Download App:
  • android
  • ios