ಮ.ಪ್ರದೇಶ ಕಾಂಗ್ರೆಸ್‌ ಶಾಸಕ ರಾಜೀನಾಮೆ| ಶಾಸಕ ಸ್ಥಾನಕ್ಕೆ ಹರ್‌ದೀಪ್‌ ಸಿಂಗ್‌ ಡಂಗ್‌ ರಾಜೀನಾಮೆ| ಬಿಜೆಪಿಯಿಂದ 14 ಶಾಸಕರ ಅಪಹರಣ: ಸುರ್ಜೇವಾಲಾ| ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಢವಢವ

ಭೋಪಾಲ್‌[ಮಾ.06]: ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿರುವ ಮಧ್ಯಪ್ರದೇಶದಲ್ಲಿ, ಕಾಂಗ್ರೆಸ್‌ ಶಾಸಕ ಹರದೀಪ್‌ಸಿಂಗ್‌ ಡಂಗ್‌ ಗುರುವಾರ ತಮ್ಮ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಪತನದ ಭೀತಿ ಎದುರಿಸುತ್ತಿರುವ ಮುಖ್ಯಮಂತ್ರಿ ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಢವಢವ ಆರಂಭವಾಗಿದೆ.

Add Asianetnews Kannada as a Preferred SourcegooglePreferred

ಹರದೀಪ್‌ ಸೇರಿದಂತೆ ಕಾಂಗ್ರೆಸ್‌ನ ಮೂವರು ಮತ್ತು ಓರ್ವ ಪಕ್ಷೇತರ ಶಾಸಕ ಬುಧವಾರ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿತ್ತು. ಅದರ ಬೆನ್ನಲ್ಲೇ, ಗುರುವಾರ ಹರದೀಪ್‌ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತ ಪತ್ರವನ್ನು ಅವರು ಮುಖ್ಯಮಂತ್ರಿ ಕಮಲ್‌ನಾಥ್‌ ಮತ್ತು ವಿಧಾನಸಭೆಯ ಸ್ಪೀಕರ್‌ಗೆ ರವಾನಿಸಿದ್ದಾರೆ.

ಈ ನಡುವೆ ಮಧ್ಯಪ್ರದೇಶದ 14 ಶಾಸಕರನ್ನು ಬಿಜೆಪಿ ಅಪಹರಿಸಿದೆ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ರಣದೀಪ್‌ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ಬುಧವಾರ ಬಂಡಾಯ ಬಣದಲ್ಲಿ ಕಾಣಿಸಿಕೊಂಡು ಬಳಿಕ ಹರ್ಯಾಣದಿಂದ ಭೋಪಾಲ್‌ಗೆ ಮರಳಿದ್ದ ಬಿಎಸ್‌ಪಿ ಮತ್ತು ಎಸ್‌ಪಿ ಶಾಸಕರಾದ ರಮಾಭಾಯಿ, ಸಂಜೀವ್‌ ಸಿಂಗ್‌ ಹಾಗೂ ರಾಜೇಶ್‌ ಶುಕ್ಲಾ ಗುರುವಾರ ಪ್ರತಿಕ್ರಿಯೆ ನೀಡಿದ್ದು, ತಮ್ಮನ್ನು ಯಾರೂ ಅಪಹರಣ ಮಾಡಿರಲಿಲ್ಲ. ಅಲ್ಲದೆ ಯಾವುದೇ ಕುದುರೆ ವ್ಯಾಪಾರ ನಡೆದಿಲ್ಲ. ನಮ್ಮ ಜೊತೆ ಯಾವುದೇ ಬಿಜೆಪಿ ನಾಯಕರೂ ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.