ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಮೈಗಂಟಿಸಿಕೊಂಡಿಲ್ಲ. ಪ್ರಸ್ತುತ ಸಿಎಂ ಬದಲಾವಣೆ ವಿಚಾರವೂ ಇಲ್ಲ. ಆದರೂ ಯಾರ್‍ಯಾರೋ ಸಿಎಂ ಆಗುತ್ತೇನೆ ಎಂದರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಶಾಸಕ ರಾಜು ಕಾಗೆ

ಕಾಗವಾಡ(ಸೆ.15): ನಾನೂ ಕೂಡ ಹಿರಿಯ ಶಾಸಕ 5 ಬಾರಿ ಆಯ್ಕೆಯಾಗಿದ್ದೇನೆ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಹಾಗಂತ ಅದು ಸಾಧ್ಯಾನಾ ಎಂದು ಹೇಳುವ ಮೂಲಕ ಕಾಗವಾಡ ಶಾಸಕ ರಾಜು ಕಾಗೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಕಾಲೆಳೆದಿದ್ದಾರೆ.

ಗುಂಡೇವಾಡಿ ಗ್ರಾಮದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಮೈಗಂಟಿಸಿಕೊಂಡಿಲ್ಲ. ಪ್ರಸ್ತುತ ಸಿಎಂ ಬದಲಾವಣೆ ವಿಚಾರವೂ ಇಲ್ಲ. ಆದರೂ ಯಾರ್‍ಯಾರೋ ಸಿಎಂ ಆಗುತ್ತೇನೆ ಎಂದರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪಂಚಮಸಾಲಿ ಮೀಸಲಾತಿಗಾಗಿ ರಾಜೀನಾಮೆಗೂ ಸಿದ್ಧ: ಕಾಂಗ್ರೆಸ್‌ ಶಾಸಕ ರಾಜು ಕಾಗೆ

ಮುಡಾ ಪ್ರಕರಣ ನ್ಯಾಯಾಲಯಲ್ಲಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಯಾವುದೇ ತೀರ್ಪು ಬಂದಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರವಿಲ್ಲ. ಕೋರ್ಟ್‌ನಲ್ಲಿ ನ್ಯಾಯ ಸಿಗುವ ಭರವಸೆ ಇದೆ. ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎನ್ನುವುದರಲ್ಲಿ ಹುರುಳಿಲ್ಲ. ಆ ಬಗ್ಗೆ ಚರ್ಚೆಯೂ ಆಗಿಲ್ಲ. ಅದು ಈ ಸಂದರ್ಭದಲ್ಲಿ ಅಪ್ರಸ್ತುತ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮುಖಂಡರಾದ ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಗೂಳಪ್ಪ ಜತ್ತಿ, ಮುಖಂಡರಾದ ಡಾ.ಅರವಿಂದರಾವ್ ಕಾರ್ಚಿ, ಶಿವಾನಂದ ಗೊಲಬಾವಿ, ಶಿದರಾಯ ತೇಲಿ, ಪಂಡಿತ ವಡ್ಡರ, ರಾಜು ಕಾಂಬಳೆ, ರವಿ ಕಾಂಬಳೆ, ಮಲ್ಲಿಕಾರ್ಜುನ ದಳವಾಯಿ, ಪೂರ್ಣಿಮಾ ಕಾಂಬಳೆ ಇತರರು ಇದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಹೈ ಕಮಾಂಡಿದೆ, ಶಾಸಕರಿದ್ದಾರೆ, ಅವರು ನಿರ್ಧಾರ ಮಾಡಬೇಕು. ಸುಮ್ಮನೆ ಎಲ್ಲಿ ಬೇಕೋ ಅಲ್ಲಿ ಮಾತನಾಡುವುದಲ್ಲ. ಅಲ್ಲದೆ, ಸಿಎಂ ಬದಲಾವಣೆ ವಿಚಾರ ಬಂದೇ ಇಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.