ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್‌ ಸರ್ಕಾರದ ಬೆಂಗಳೂರು ಆಡಳಿತ ವಿರುದ್ಧ ತೀವ್ರ ವಾಗ್ದಾಳಿ  ಬಿಬಿಎಂಪಿಯನ್ನು 'ಜಿಬಿಎ' (ಗಾರ್ಬೇಜ್‌, ಬ್ಯಾಡ್‌ ರೋಡ್‌, ಎ ಖಾತಾ ಸ್ಕ್ಯಾಮ್‌) ಎಂದು ಜರಿದರು.

ಬೆಂಗಳೂರು (ಏ.12): ಬಿಬಿಎಂಪಿ ಹೆಸರನ್ನು ಜಿಬಿಎ ಎಂದು ಬದಲಿಸಿದ್ದೇ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಾಧನೆ. ‘ಜಿ’ ಎಂದರೆ ಗಾರ್ಬೇಜ್‌, ‘ಬಿ’ ಎಂದರೆ ಬ್ಯಾಡ್‌ ರೋಡ್‌, ‘ಎ’ ಎಂದರೆ ಎ ಖಾತಾ ಸ್ಕ್ಯಾಮ್‌ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಹೊರವಲಯದ ಕೊಮ್ಮಘಟ್ಟ ನೈಸ್‌ ಮೈದಾನದಲ್ಲಿ ಶನಿವಾರ ನಡೆದ ಜೆಡಿಎಸ್‌ ಜನತಾ ಸಮಾವೇಶ-ಬೆಳ್ಳಿ ಹಬ್ಬದಲ್ಲಿ ಮಾತನಾಡಿ, ಈ ಕಾಂಗ್ರೆಸ್‌ ಸರ್ಕಾರದಲ್ಲಿ ಬೆಂಗಳೂರು ಜನತೆ ಅಭಿವೃದ್ಧಿ ವಂಚಿತರಾಗಿದ್ದಾರೆ. ಎಚ್‌.ಡಿ.ದೇವೇಗೌಡರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದರು ಎಂದರು.

ಗೌಡರ ನಿರ್ಣಯಗಳಿಂದ ನಗರಕ್ಕೆ ಖ್ಯಾತಿ:

ಬೆಂಗಳೂರು ಅಭಿವೃದ್ಧಿಗೆ ಮಾಜಿ ಪ್ರಧಾನಿ ದೇವೇಗೌಡರು ತೆಗೆದುಕೊಂಡ‌ ಐತಿಹಾಸಿಕ ನಿರ್ಣಯಗಳು ಜನರ ಮನಸ್ಸಿನಲ್ಲಿ ಉಳಿದಿವೆ. ಸಿಂಗಾಪುರ ಸರ್ಕಾರದ ಜೊತೆ ಮಾತಾಡಿ ವೈಟ್‌22ಫೀಲ್ಡ್‌ನಲ್ಲಿ 40 ಸಾವಿರ ಉದ್ಯೋಗ ನೀಡುವ ಕಂಪನಿ ಆರಂಭಿಸಿದರು. ಬೆಂಗಳೂರು ವಿಶ್ವವಿಖ್ಯಾತಿ ಪಡೆಯಲು ಅಂದು ದೇವೇಗೌಡರು ಕೈಗೊಂಡ ಫ್ಲೈ ಓವರ್‌ಗಳು, ಐಟಿ-ಬಿಟಿ ಕ್ಷೇತ್ರಕ್ಕೆ ಟ್ಯಾಕ್ಸ್‌ ಹಾಲಿಡೇ, ಕಾವೇರಿ 4ನೇ ಹಂತ ಕುಡಿಯುವ ನೀರು ಯೋಜನೆಯಂಥ ಐತಿಹಾಸಿಕ ನಿರ್ಧಾರಗಳು ಕಾರಣ ಎಂದು ಸ್ಮರಿಸಿದರು.

ಡಿಸಿಎಂ ಪ್ರಯೋಜವಿಲ್ಲ:

ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅನೇಕ ಯೋಜನೆ ಜಾರಿಗೆ ತಂದರು. ಮೆಟ್ರೋಗೆ ಹಸಿರು ನಿಶಾನೆ ತೋರಿದರು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಇವತ್ತು ಅಭಿವೃದ್ಧಿ ಕುಸಿಯುತ್ತಿದೆ. ಇಲ್ಲಿ ಯಾವುದೇ ಕಂಪನಿ ಬರುತ್ತಿಲ್ಲ. ಆಂಧ್ರಪ್ರದೇಶಕ್ಕೆ ಹೋಗುತ್ತಿವೆ. ಇಲ್ಲಿ ಡಿಸಿಎಂ ಎಂಬ ಮಹಾನ್ ನಾಯಕರು ಇದ್ದಾರೆ. ಅವರಿಂದ ಬೆಂಗಳೂರಿಗೆ ಏನು ಪ್ರಯೋಜನ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

ರಸ್ತೆ ಗುಂಡಿಗೆ ಅಮಾಯಕರು ಬಲಿ

ನಗರದಲ್ಲಿ ಟ್ರಾಫಿಕ್‌ ಸಮಸ್ಯೆ, ಕಸದ ಸಮಸ್ಯೆ ಬಿಗಡಾಯಿಸಿದೆ. ರಸ್ತೆಗಳ ಸ್ಥಿತಿ ದೇವರೇ ಬಲ್ಲ. ನಗರದಲ್ಲಿ ಎಲ್ಲಿ ನೋಡಿದರೋ ಗುಂಡಿಗಳೇ. ಗುಂಡಿ ಮುಚ್ಚಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ವೈಟ್‌ ಟಾಪಿಂಗ್‌ ಎಲ್ಲಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಗುಂಡಿಗಳಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಇ ಖಾತಾ ಹೆಸರಿನಲ್ಲಿ ಅಧಿಕಾರಿಗಳು ಸಣ್ಣ ತಪ್ಪುಗಳನ್ನು ಹುಡುಕಿ ಲಂಚ ಪಡೆಯುತ್ತಿದ್ದಾರೆ. ಆಸ್ತಿ ತೆರಿಗೆ ಹಾಕುತ್ತಿದ್ದಾರೆ. ಕುಡಿಯವ ನೀರಿಗೂ ತೆರಿಗೆ ಹೆಚ್ಚಳ ಮಾಡುವುದಾಗಿ ಹೇಳುತ್ತಿದ್ದಾರೆ. ಪ್ರತಿ ದಿನ ಜನರ ಲೂಟಿ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಹರಿಹಾಯ್ದರು.