ಕುಮಾರಸ್ವಾಮಿ ವಿರುದ್ಧ ಹೋರಾಡಿದವರೇ ನಮ್ಮ ಬಳಿ ಬಂದ್ರು: HDD ಹೇಳಿದ್ಯಾರಿಗೆ?
2018ರ ವಿಧಾನಸಭಾ ಚುನಾವಣೆ ವೇಳೆ ‘ಎ’ ಟೀಂ, ‘ಬಿ’ ಟೀಂ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನವನ್ನು ಮೂಡಿಸಿತ್ತು. ಇದೀಗ ಅದಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು, (ಜ.17): ನಾವು ಯಾವುದೇ ‘ಎ’ ಟೀಂ, ‘ಬಿ’ ಟೀಂ ಅಲ್ಲ. ನಾನು ನಿಮ್ಮ ಟೀಂ ಅನ್ನೋದನ್ನ ತಿಳಿದುಕೊಳ್ಳಿ. ಕುಮಾರಸ್ವಾಮಿ ವಿರುದ್ಧ ಹೋರಾಡಿದವರೇ ನಮ್ಮ ಬಳಿ ಬಂದ್ರು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಕಾಂಗ್ರೆಸ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು [ಶುಕ್ರವಾರ] ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಮುಸ್ಲಿಮರು ತಾಜ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆಸಿಲ್ಲ. ಆದರೆ ಇನ್ನೂ ನಮ್ಮ ದೇಶದ ಮುಸ್ಲಿಮರನ್ನ ದೂಷಣೆ ಮಾಡಲಾಗುತ್ತಿದೆ. ನಾನು ಹಿಂದೂ ಧರ್ಮೀಯನಾದ್ರೂ ಚರ್ಚ್, ದರ್ಗಾ ಎಲ್ಲಾ ಕಡೆ ಹೋಗ್ತೀನಿ ಎಂದು ಹೇಳಿದರು.
ಗೌಡರ ಆಟ ಬಲ್ಲವರಾರು?: ಮಗನೊಂದಿಗೆ ಮಾತುಕತೆ ಜೋರು!
ನಾನು ಹತ್ತು ತಿಂಗಳು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದೆ. ಅಧಿಕಾರ ಕಳೆದುಕೊಳ್ಳುವಾಗ ವಾಜಪೇಯಿ ಅವರು ಸರ್ಕಾರ ಉಳಿಸುತ್ತೇನೆ ಅಂದಿದ್ರು. ಆದರೆ, ಎಂದೂ ನಾನು ಅಧಿಕಾರಕ್ಕಾಗಿ ಆಸೆ ಪಡುವ ರಾಜಕಾರಣಿಯಲ್ಲ. ಅದನ್ನ ಎದೆ ಬಗೆದು ತೋರಿಸಬೇಕಾ ಎಂದರು.
ನನಗೆ ಈಗ 86 ವರ್ಷ ವಯಸ್ಸಾಗಿದೆ. ಮನೆಯಲ್ಲಿ ಕುಳಿತಕೊಳ್ಳಬಹುದು. ಯಾವುದೋ ಒಂದು ಶಕ್ತಿ ನನ್ನನ್ನ ಪ್ರೇರೆಪಿಸುತ್ತಿದೆ. ಹೋಗು ಕೆಲಸ ಮಾಡೋದಿದೆ ಎಂದು ಹೇಳುತ್ತಿದೆ. ಹಾಗಾಗಿ ನಾನು ಪಕ್ಷ ಸಂಘಟನೆ ಮಾಡೋಕೆ ಬಂದಿದ್ದೇನೆ ಎಂದು ಹೇಳಿದರು.