ಜೆಡಿಎಸ್‌ 5 ಯೋಜನೆಗಳ ಅನುಷ್ಠಾನದ ಭರವಸೆಯೊಂದಿಗೆ ಪಂಚರತ್ನ ಯಾತ್ರೆ ಆರಂಭಿಸಿದೆ. ಕಾರ್ಯಕರ್ತರು ರ್‍ಯಾಲಿ ಉದ್ದಕ್ಕೂ ಹೊಸದೊಂದು ಟ್ರೆಂಡ್ ಹುಟ್ಟು ಹಾಕ್ತಿದ್ದಾರೆ. ಜೆಡಿಎಸ್ ಭದ್ರಕೋಟಿ ಮಂಡ್ಯದಲ್ಲಿ ಸಂಚರಿಸುತ್ತಿರುವ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

ಮಂಡ್ಯ (ಡಿ.22): ಚುನಾವಣೆ ಸಮೀಪಿಸುತ್ತಿದೆ ಮತದಾರರ ಮನಗೆಲ್ಲಲ್ಲು ಎಲ್ಲಾ ಪಕ್ಷಗಳು ಈಗಾಗಲೇ ತಯಾರಿ ಆರಂಭ ಮಾಡಿವೆ. ಜೆಡಿಎಸ್‌ 5 ಯೋಜನೆಗಳ ಅನುಷ್ಠಾನದ ಭರವಸೆಯೊಂದಿಗೆ ಪಂಚರತ್ನ ಯಾತ್ರೆ ಆರಂಭಿಸಿದೆ. ಕಾರ್ಯಕರ್ತರು ರ್‍ಯಾಲಿ ಉದ್ದಕ್ಕೂ ಹೊಸದೊಂದು ಟ್ರೆಂಡ್ ಹುಟ್ಟು ಹಾಕ್ತಿದ್ದಾರೆ. ಜೆಡಿಎಸ್ ಭದ್ರಕೋಟಿ ಮಂಡ್ಯದಲ್ಲಿ ಸಂಚರಿಸುತ್ತಿರುವ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಸ್ವಾಗತ ನೀಡುವ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನ ವ್ಯಕ್ತಪಡಿಸುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿಗೆ ವಿಶಿಷ್ಟ ಹಾರಗಳನ್ನು ಹಾಕುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಪಂಚರತ್ನ ರಥಯಾತ್ರೆ ಹೋದಲ್ಲೆಲ್ಲ ಅಭೂತಪೂರ್ವ ಸ್ವಾಗತ
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆರಂಭವಾಗಿರುವ ಪಂಚರತ್ನ ರಥಯಾತ್ರೆ ಸದ್ಯ ಮಂಡ್ಯ ಜಿಲ್ಲೆಯಲ್ಲಿ ಸಾಗುತ್ತಿದೆ. ಕುಮಾರಸ್ವಾಮಿ ಅವರ ಮೇಲಿನ ಅಭಿಮಾನವನ್ನು ವೆರೈಟಿ ಹಾರ ಹಾಕುವ ಮೂಲಕ ಮುಖಂಡರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದು, ಈವರೆಗೆ ಕರ್ಬೂಜಾ, ಗೋಡಂಬಿ, ದಪ್ಪ ಮೆಣಸಿನಕಾಯಿ, ಅನಾನಸ್, ಬಾಳೆ ಹಣ್ಣು, ದಾಳಿಂಬೆ, ಕಿತ್ತಳೆ ಹಣ್ಣು, ಮೋಸಂಬಿ, ಕಡಲೆ ಕಾಯಿ, ಹೂ ಕೋಸ್, ವೀಳ್ಯದೆಲೆ ಗೊಂಬೆ ಹಾರ, ಬೆಲ್ಲ, ರಾಗಿ ತೆನೆ ಹಾರ, ಸೇಬು, ಸೇವಂತಿಗೆ, ರೋಜ್ ಹಾರ, ಕೊಬ್ಬರಿ ಹಾರ ಸೇರಿದಂತೆ 350ಕ್ಕೂ ಬಗೆಯ ವಿಭಿನ್ನ ಹಾರಗಳನ್ನ ಹಾಕಿದ್ದಾರೆ. 

ನಿನ್ನೆ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ಸಾಗುವಾಗ ಬೃಹತ್ ಕಬ್ಬಿನ ಹಾರ ಹಾಕಿದ್ರು. ಇಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಹಳೇ ಬೂದನೂರು ಗ್ರಾಮದಲ್ಲಿ ಸೀಬೆ ಹಣ್ಣಿನ ಹಾರ ಹಾಕುವ ಮೂಲಕ ಡಿಫರೆಂಟಾಗಿ ವೆಲ್ ಕಮ್ ಮಾಡಿಕೊಳ್ಳಲಾಯಿತು. ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ಬೆಲ್ಲ ಕೊಬ್ಬರಿ ಹಾರ, ಮಲ್ಲಿಗೆ ಹೂವಿನ ಹಾರ ಹಾಗೂ ನಂದ ಸರ್ಕಲ್ ನಲ್ಲಿ ತುಳಸಿ ಹಾಗೂ ಕಬ್ಬಿನ ಹಾರಲನ್ನು ಹಾಕಿ ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಪರವಾಗಿ ಜಯ ಘೋಷ ಮೊಳಗಿಸಿದ್ರು.

ಗೆಜ್ಜಲಗೆರೆ ಬಳಿ ಎಚ್‌ಡಿಕೆಗೆ ಮಹಿಳೆಯರ ದೂರು
ಮದ್ದೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಸಮಯದಲ್ಲಿ ಗ್ರಾಮೀಣ ಜನರು ಸಂಚರಿಸುವ ರಸ್ತೆಯನ್ನೇ ಮುಚ್ಚಿದ್ದಾರೆ ಎಂದು ಗೆಜ್ಜಲಗೆರೆ ಸಮೀಪದ ಬಸವನಪುರ ಮಹಿಳೆಯರು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಎದುರು ಅಳಲು ವ್ಯಕ್ತಪಡಿಸಿದರು. ಹೆದ್ದಾರಿ ನಿರ್ಮಾಣದಿಂದ ರಸ್ತೆಯ ಆಚೆ-ಈಚೆ ದಾಟಲು ಆಗುತ್ತಿಲ್ಲ. ಹಳ್ಳ ಒಡೆದು ರಸ್ತೆ ದಾಟದಂತೆ ಮಾಡಿದ್ದಾರೆ ಎಂದು ಒಡೆದಿರುವ ಹಳ್ಳವನ್ನು ತೋರಿಸಿದರು. ಹೆದ್ದಾರಿ ಪ್ರಾಧಿಕಾರದವರ ಕ್ರಮವನ್ನು ಕಂಡು ಕುಮಾರಸ್ವಾಮಿ ಅವರು ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

Ramanagara: ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕೂಡಲೇ ಹಳ್ಳ ಮುಚ್ಚಿ ಗ್ರಾಮೀಣ ಜನರ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದರು. ಸ್ಮಶಾನಕ್ಕೆ ಹೋಗಲೂ ಕೂಡ ರಸ್ತೆ ಇಲ್ಲ ಎಂದು ಕಣ್ಣೀರಿಟ್ಟರು.

Assembly election: ಚುನಾವಣೆಯಲ್ಲಿ ಕಾಂಗ್ರೆಸ್‌ 60-70, ಬಿಜೆಪಿ 50 ಸ್ಥಾನ ಮಾತ್ರ ಗೆಲ್ಲುತ್ತೆ!

ರಸ್ತೆಯಲ್ಲಿ ನಿಂತಿದ್ದ ಮಹಿಳೆಯರಲ್ಲಿ ಹತ್ತು ಮಂದಿ ಮಹಿಳೆಯರನ್ನು ಪಂಚರತ್ನ ರಥದ ಮೇಲೆಕ್ಕೆ ಕರೆಸಿಕೊಂಡು ಅಹವಾಲು ಆಲಿಸಿದರು. ರಸ್ತೆ ಸಮಸ್ಯೆ ಹಾಗೂ ಸ್ಮಶಾನಕ್ಕೆ ಹೋಗಲು ರಸ್ತೆ ಸೌಲಭ್ಯ ಕಲ್ಪಿಸುವಂತೆ ಮಹಿಳೆಯರು ಮನವಿ ಮಾಡಿದರು. ಈ ಕುರಿತಂತೆ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಿದ ಬಳಿಕ ಮಹಿಳೆಯರು ಸಮಾಧಾನದಿಂದ ಹಿಂತಿರುಗಿದರು.