ಜೆಡಿಎಸ್‌ ಬರೀ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯದ ಜನರ ಒಲವು ಜೆಡಿಎಸ್ ಮೇಲಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಬಸವನಬಾಗೇವಾಡಿ (ಜು.16): ಜೆಡಿಎಸ್‌ ಬರೀ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯದ ಜನರ ಒಲವು ಜೆಡಿಎಸ್ ಮೇಲಿದೆ. ಮುಂಬರುವ ವಿಧಾನಸಭೆಯಲ್ಲಿ ಮಂಡ್ಯ, ಮ್ಯೆಸೂರು, ಬೆಂಗಳೂರು ಭಾಗದಲ್ಲಿ ಶಾಸಕರು ಆಯ್ಕೆಯಾಗುತ್ತಾರೆ. ಹಾಗೆಯೇ ವಿಜಯಪುರ ಜಿಲ್ಲೆಯಲ್ಲಿ ಕೂಡ ಆಯ್ಕೆ ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಎಂ.ಜಿ.ಕೋರಿ ಡಾ.ಬಿ.ಜಿ ಬ್ಯಾಕೋಡ ಪ.ಪೂ. ಮಹಾವಿದ್ಯಾಲಯದಲ್ಲಿ ಮಂಗಳವಾರ ಸಂಜೆ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬರೀ ಕಾಗದದಲ್ಲಿ ಅಭಿವೃದ್ಧಿಯಾಗುತ್ತಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಘೋಷಣೆ ಮಾಡಿದ್ದಾರೆ. ಅದು ಅನುಷ್ಠಾನಗೊಳ್ಳಬೇಕು ಎಂದರು.

ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜ‌ನರಿಗೆ ತಲುಪುತ್ತಿಲ್ಲ. ಕನ್ನಡಿಗರಿಗೆ ತೆರಿಗೆ ಮೂಲಕ ಕತ್ತರಿ ಹಾಕಿ ದುಡ್ಡು ಹಾಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಉಪ ಚುನಾವಣೆಯಲ್ಲಿ, ಎಂಪಿ ಚುನಾವಣೆಯಲ್ಲಿ ದುಡ್ಡು ಹಾಕಿದರು. ಮುಂದೆ ಟಿಪಿ, ಜಿಪಂ ಚುನಾವಣೆಯಲ್ಲಿ ಹಾಕಬಹುದು. ಕಾಂಗ್ರೆಸ್ ಪಕ್ಷದ ಶಾಸಕರೇ ಅಸಹಾಯಕತೆ ಹೊರಹಾಕುತ್ತಿದ್ದಾರೆ. ಬಿ.ಆರ್.ಪಾಟೀಲ ಶಾಸಕರಿಗೆ ಆಶ್ರಯ ಮನೆಗಳನ್ನು ರದ್ದು ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ತಂದಿರುವುದು ತಪ್ಪಲ್ಲ. ಆದರೆ ರಾಜ್ಯದ ಬಜೆಟ್‌ ಆರ್ಥಿಕ ಪರಿಸ್ಥಿತಿ ಏನಿದೆ ಎಂಬುದು ಅರಿತುಕೊಂಡು ನಡೆಯಿರಿ. ನಿಮಗೆ ಶ್ವೇತಪತ್ರ ಹೊರಡಿಸಲು ಸಾಧ್ಯವೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ವಾಸ್ತವ ಪರಿಸ್ಥಿತಿ ತೆರೆದಿಡಲಿ ಎಂದು ಸವಾಲು ಹಾಕಿದರು.

20 ತಿಂಗಳಲ್ಲಿ ಕುಮಾರಸ್ವಾಮಿ ಅವರು ಜನಪರ ಆಡಳಿತ ನಡೆಸಿದರು. 2018ರಲ್ಲಿ‌ ಮತ್ತೆ ಸಿಎಂ ಆದಾಗಲು ರೈತ ಪರ ಕೆಲಸ ಮಾಡಿ ₹25 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಜನರೊಂದಿಗೆ ಜನತಾದಳ ಕಾರ್ಯಕ್ರಮ ರಾಜ್ಯದಲ್ಲಿ ವಿವಿಧೆಡೆ 50 ಲಕ್ಷ ನೋಂದಣಿ ಮಾಡಿ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದೆ ಎಂದು ಹೇಳಿದರು. ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆ ಅಭಿವೃದ್ಧಿ ಶೂನ್ಯವಾಗಿದೆ. ಬಸವರಾಜ ರಾಯರೆಡ್ಡಿ ಅವರು ಕೂಡ ಗ್ಯಾರಂಟಿ ಯೋಜನೆ ವಿರುದ್ಧ ಧ್ವನಿ ಎತ್ತಿದ್ದರು ಎಂದರು.