ದೇವರ ಮೇಲಾದ್ರೂ ಆಣೆ ಮಾಡ್ತೇನೆ, ನಾನು ಏಕಪತ್ನಿವ್ರತಸ್ಥ ಎಂದ ಶಾಸಕ
ಆರೋಗ್ಯ ಸಚಿವ ಸುಧಾಕರ್ ಏಕಪತ್ನಿವ್ರತಸ್ಥ ಓಪನ್ ಚಾಲೆಂಜ್ ಹಾಕಿರುವುದಕ್ಕೆ ಆಕ್ರೋಶ ಹೊರ ಹಾಕಿರುವ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರು, (ಮಾ.24): ಮಾಜಿ ಸಚಿವರ ರಾಸಲೀಲೆ ಸಿ.ಡಿ ಪ್ರಕರಣ ಸೇರಿದಂತೆ ಕೋರ್ಟ್ಗೆ ತೆರಳಿರುವ 6 ಸಚಿವರ ರಾಜೀನಾಮೆ ಆಗ್ರಹಿಸಿ ಸದನದಲ್ಲಿ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಆರೋಗ್ಯ ಸಚಿವ ಸುಧಾಕರ್ ಏಕಪತ್ನಿವ್ರತಸ್ಥ ಓಪನ್ ಚಾಲೆಂಜ್ ಹಾಕಿದ್ದಾರೆ.
ಅಲ್ಲದೇ ಎಲ್ಲಾ ನಾಯಕರ ಮೇಲೆ ತನಿಖೆ ಆಗಲಿ ಎಂದು ಹೇಳಿದ್ದಾರೆ. ಇದಕ್ಕೆ ಸಚಿವ ಬಿ.ಸಿ. ಪಾಟೀಲ್ ಧ್ವನಿಗೂಡಿಸಿದ್ರೆ, ಇನ್ನೂ ಕೆಲ ಶಾಸಕರು ಸುಧಾಕರ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕಪತ್ನಿ ವ್ರತಸ್ಥ: ತಪ್ಪೊಪ್ಪಿಕೊಂಡ ಮಾಜಿ ಸಿಎಂ ಕುಮಾರಸ್ವಾಮಿ
ನಾಯಕರ ಚಾರಿತ್ರ್ಯ ಬಗ್ಗೆ ಸವಾಲು ಹಾಕಿದ್ದ ಆರೋಗ್ಯ ಸಚಿವ ಸುಧಾಕರ್ ಅವರ ಹೇಳಿಕೆಗೆ ಆಕ್ರೋಶ ಹೊರ ಹಾಕಿರುವ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ದೇವರ ಮೇಲಾದ್ರೂ ಆಣೆ ಮಾಡ್ತೇನೆ ನಾನು ಏಕಪತ್ನಿವ್ರತಸ್ಥ ಎಂದು ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಲಿಂಗೇಗೌಡ, ನಾನು ಯಾವ ದೇವರ ಮೇಲಾದ್ರೂ ಆಣೆ ಮಾಡ್ತೇನೆ. ನನಗೆ ಒಬ್ಬಳೇ ಹೆಂಡತಿ, ನಾನು ಯಾವ ಅನೈತಿಕ ಸಂಬಂಧವನ್ನೂ ಇಟ್ಟುಕೊಂಡಿಲ್ಲ. ಅವರ ಹೇಳಿಕೆ ತಪ್ಪು, ನೂರಕ್ಕೆ ನೂರು ನಾವು ಏಕ ಪತ್ನಿ ವೃತಸ್ಥರೇ ಎಂದರು.
ಸಚಿವ ಸುಧಾಕರ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಾಗಾದ್ರೆ ಇವರು ಇನ್ನು ಸಂಬಂಧ ಇಟ್ಟುಕೊಂಡಿದ್ದಾರಾ..? ಹೀಗೆ ಮಾತನಾಡಬಾರದು, ಅದು ತಪ್ಪಾಗುತ್ತೆ. ಅವರನ್ನೂ ಸೇರಿಸಿಕೊಂಡು ಅವರು ಹೇಳಿದ್ದಾರೆ ಎಂದರೇ ಯಾರ ಮೇಲೆ ಅನುಮಾನ ಮಾಡೋದು ಎಂದು ಪ್ರಶ್ನಿಸಿದರು.