* ಅಡ್ಡಮತ: ಇಬ್ಬರು ಶಾಸಕರ ಉಚ್ಚಾಟನೆಗೆ ದಳ ನಿರ್ಧಾರ* ಶ್ರೀನಿವಾಸಗೌಡ, ಶ್ರೀನಿವಾಸ್‌ಗೆ ಸಂಕಷ್ಟ* ಸ್ಪೀಕರ್‌ಗೆ ದೂರು, ನೋಟಿಸ್‌: ಇಬ್ರಾಹಿಂ

Add Asianetnews Kannada as a Preferred SourcegooglePreferred

ಬೆಂಗಳೂರು(ಜೂ. 12): ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲು ಜೆಡಿಎಸ್‌ ತೀರ್ಮಾನಿಸಿದ್ದು, ನೊಟೀಸ್‌ ನೀಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.

ಶನಿವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಮತ್ತು ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ ಅವರನ್ನು ಉಚ್ಚಾಟಿಸಲು ಪಕ್ಷವು ನಿರ್ಧರಿಸಿದೆ. ಅವರಿಬ್ಬರ ಸದಸ್ಯತ್ವ ರದ್ದು ಮಾಡುವಂತೆ ಸಭಾಧ್ಯಕ್ಷರಿಗೆ ನಾವು ಮನವಿ ಮಾಡುತ್ತೇವೆ. ನ್ಯಾಯಾಲಯಕ್ಕೂ ನಾವು ಹೋಗುತ್ತೇವೆ ಎಂದು ಹೇಳಿದರು.

ಸ್ವಯಂ ರಾಜೀನಾಮೆ:

ಇಬ್ಬರು ಶಾಸಕರ ಮನೆ ಮುಂದೆ ಜನ ಪ್ರತಿಭಟನೆ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಅವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್‌ ವಿರುದ್ಧ ಭಾನುವಾರ ಫ್ರೀಡಂ ಪಾರ್ಕ್ನಲ್ಲಿ ಮೌನ ಪ್ರತಿಭಟನೆ ಮಾಡುತ್ತೇವೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬಿಜೆಪಿ ಬಿ ಟೀಂ ಎನ್ನುವುದು ಗೊತ್ತಾಗಿದೆ. ಕಾಂಗ್ರೆಸ್‌ನವರು ಡೀಲ್‌ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಸಿ.ಟಿ.ರವಿ ಕಾಂಗ್ರೆಸ್‌ ಕಚೇರಿಗೆ ಹೋಗಿ ಧನ್ಯವಾದ ಹೇಳಿದ್ದಾರೆ. ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಯಾವ ಮುಖ ಇಟ್ಟುಕೊಂಡು ಮಾತನಾಡುತ್ತಾರೆ? ಮನ್ಸೂರ್‌ ಅಲಿಖಾನ್‌ ಅವರನ್ನು ನಿಲ್ಲಿಸಿ ಹೀಗೆ ಸೋಲಿಸಿದಿರಲ್ಲ, ಇದರಿಂದ ಏನು ಲಾಭ? ಎರಡನೇ ಪ್ರಾಶಸ್ತ್ಯ ಮತ ಹಾಕಿದ್ದರೂ ನಮ್ಮ ಅಭ್ಯರ್ಥಿ ಗೆಲ್ಲುತ್ತಿದ್ದರು. ಈ ಚುನಾವಣೆಯಲ್ಲಿ ನೂರಾರು ಕೋಟಿ ರು. ವ್ಯವಹಾರ ನಡೆದಿದೆ ಎಂದು ಹೇಳಿದ ಅವರು, 2023ರ ವಿಧಾನಸಭೆ ಚುನಾವಣೆಯಲ್ಲಿ ಜನ ನಮಗೆ ಮತ ಹಾಕುತ್ತಾರೆ. ದೊಡ್ಡ ಶಕ್ತಿಯಾಗಿ ಜೆಡಿಎಸ್‌ ಹೊರಹೊಮ್ಮಲಿದೆ. 30 ಜನರನ್ನು ಇಟ್ಟುಕೊಂಡಿದ್ದೇವೆ, ಬಡತನದ ಪಕ್ಷ ಇದು. ಆದರೂ ನಮಗೆ ಗೌರವ ಇದೆ. ಪ್ರಜಾಪ್ರಭುತ್ವದ ಸಿದ್ಧಾಂತವನ್ನು ನಮ್ಮ ಶಾಸಕರು ಎತ್ತಿ ಹಿಡಿದಿದ್ದಾರೆ. ಅಲ್ಪಸಂಖ್ಯಾತರಿಗೆ ಗೊತ್ತಾಗಿದೆ. ನನ್ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅಲ್ಪಸಂಖ್ಯಾತ, ರೈತರ ಮಕ್ಕಳಿಗೆ ಜೆಡಿಎಸ್‌ ಏನು ಮಾಡುತ್ತಿದೆ ಎಂದು ಜನರಿಗೆ ಗೊತ್ತಾಗಿದೆ ಎಂದರು.

ಸಿದ್ದು ಬೆತ್ತಲೆಯಾಗಿದ್ದಾರೆ:

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಇಬ್ರಾಹಿಂ, ಸಿದ್ದರಾಮಯ್ಯ ಅವರೇ ನೀವು ಮಾತನಾಡದೇ ಇರುವುದು ಒಳ್ಳೆಯದು. ನೀವು ಮಾಡಿದ ಕೆಲಸ ಒಳ್ಳೆಯದಲ್ಲ. ಜನರ ಮುಂದೆ ಬೆತ್ತಲೆ ಆಗಿದ್ದೀರಿ. ಎರಡನೇ ಪ್ರಾಶಸ್ತ್ಯ ದ ಮತ ಹಾಕುವುದಕ್ಕೆ ಏನಾಗಿತ್ತು? ಶ್ರೀನಿವಾಸಗೌಡ ಅವರನ್ನು ಯಾಕೆ ಕರೆದುಕೊಂಡು ಹೋದಿರಿ ಎಂದು ವಾಗ್ದಾಳಿ ನಡೆಸಿದರು.