ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಆಗಲೇ ವಿವಿಧ ಪಕ್ಷದ ನಾಯಕರು ತಮ್ಮ ರಾಜಕೀಯ ನೆಲೆಕಂಡುಕೊಳ್ಳಲು ಪಕ್ಷಾಂತರ ಮಾಡುತ್ತಿದ್ದಾರೆ.  ಅದರಂತೆ ಜೆಡಿಎಸ್‌ನ ಪರಿಷತ್ ಮಾಜಿ ಸದಸ್ಯರೊಬ್ಬರು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ರಾಮನಗರ, (ಆಗಸ್ಟ್13): ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನವಾಗಿದೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮರಿಲಿಂಗೇಗೌಡ ಮತ್ತು ಅವರ ಬೆಂಬಲಿಗರು ಇಂದು (ಶನಿವಾರ) ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರ್ಪಡೆಯಾದರು. 

Add Asianetnews Kannada as a Preferred SourcegooglePreferred

ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ ಎನ್ ಅಶ್ವತ್ಥನಾರಾಯಣ ಸಮ್ಮುಖದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡ ಬಿಜೆಪಿ ಸೇರ್ಪಡೆಯಾದರು.

ಮರಿಲಿಂಗೇಗೌಡರ ಮನೆಯಲ್ಲೇ ಜೈಶಂಕರ್ ಅವರು ಗೌಡರನ್ನು ಸ್ವಾಗತಿಸಿದರು. ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಈರೇಗೌಡ, ಬಮೂಲ್ ಮಾಜಿ ನಿರ್ದೇಶಕ ಮರಿಯಪ್ಪ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಬಿಜೆಪಿ ಸೇರಿದರು.

ಗೌಡರ ಗದ್ದಲದ ಹಿಂದೆ ಒಕ್ಕಲಿಗ ಕೋಟೆ ಗೆಲ್ಲುವ ರೋಚಕ ತಂತ್ರ!

Scroll to load tweet…

ಮರಿಲಿಂಗೇಗೌಡರನ್ನು ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಅಶ್ವತ್ಥ ನಾರಾಯಣ, ಬಿಜೆಪಿ ಮಾತ್ರ ಎಲ್ಲರಿಗೂ ಮುಕ್ತ ಅವಕಾಶ ನೀಡುವ ಪಕ್ಷವಾಗಿದ್ದು, ಸಮಾಜದ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡುವ ಸಂಸ್ಕೃತಿಯನ್ನು ಹೊಂದಿದೆ. ಮರಿಲಿಂಗೇಗೌಡರ ಸೇರ್ಪಡೆಯಿಂದ ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಬಲ ಬಂದಿದೆ ಎಂದು ಹೇಳಿದರು. 

ಕಾಂಗ್ರೆಸ್‌ನ್ನು ದೇಶದ ಜನ ತಿರಸ್ಕರಿಸಿದ್ದಾರೆ. ಜೆಡಿಎಸ್ ಬರೀ ಒಂದು ಕುಟುಂಬಕ್ಕೆ ಜೋತು ಬಿದ್ದಿರುವ ಊಳಿಗಮಾನ್ಯ ಪಕ್ಷವಾಗಿದೆ. ಬಿಜೆಪಿ ಮಾತ್ರ ದೇಶದ ಜನರಲ್ಲಿ ಭರವಸೆ ಹುಟ್ಟಿಸಿದ್ದು, ಅಭಿವೃದ್ಧಿ ಕೇಂದ್ರಿತ ರಾಜಕಾರಣದಲ್ಲಿ ನಂಬಿಕೆ ಹೊಂದಿದೆ ಎಂದರು.

ಇನ್ನು ಮರಿಲಿಂಗೇಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿಯವರ ಜನಪರ ಮತ್ತು ಬದ್ಧತೆಯ ಆಡಳಿತ ಕಂಡು ಬಿಜೆಪಿ ಸೇರುತ್ತಿದ್ದೇನೆ. ದೇಶವನ್ನು ಬಲಿಷ್ಠ ವಾಗಿ ಕಟ್ಟುವುದು ಮತ್ತು ಪ್ರಜಾಪ್ರಭುತ್ವದ ಉಳಿವು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಕಮಲ ಅರಳಿಸಲು ಕಸರತ್ತು
ಜೆಡಿಎಸ್‌ ಭದ್ರಕೋಟೆ ರಾಮನಗರದಲ್ಲಿ ಈ ಬಾರಿ ಕಮಲ ಅರಳಿಸಲು ಸಚಿವ ಅಶ್ವತ್ಥ್ ನಾರಾಯಣ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬಿಜೆಪಿ ಹೈಕಮಾಂಡ್‌ ಸಹ ಹಳೇ ಮೈಸೂರು ಭಾಗದಲ್ಲಿ ಪಕ್ಷವನನ್ನು ಬಲಪಡಿಸಿ ಈ ಬಾರಿ ಹೆಚ್ವು ಸ್ಥಾನ ಗೆಲ್ಲಲು ಸೂಚಿಸಿದ್ದಾರೆ. ಅದರಂತೆ ಅಶ್ವತ್ಥ್ ನಾರಾಯಣ ಅವರು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಡಿಕೆ ಬ್ರದರ್ಸ್‌ ವಿರುದ್ಧ ತೊಡೆತಟ್ಟಿದ್ದಾರೆ. ಕುಮಾರಸ್ವಾಮಿ ಹಾಗೂ ಡಿಕೆ ಬ್ರದರ್ಸ್ ಫೈಟ್ ಮಧ್ಯೆ ಒಕ್ಕಲಿಗ ಕೋಟೆ ಗೆಲ್ಲುವ ರೋಚಕ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನಗರದ ಪ್ರಮುಖ ನಾಯಕರಿಗೆ ಗಾಳ ಹಾಕುತ್ತಿದೆ.