ಜೈ ಶ್ರೀರಾಮ್ ಎಂದು ಕೂಗುವವರು ಬಿಕಾರಿಗಳು ಇದ್ದಹಾಗೆ, ಅವರ ಲೆವೆಲ್‌ಗೆ ನಾನು ಇಳಿಯೋದಕ್ಕೆ ಆಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿ (ಮೇ 02): ಬಿಜೆಪಿಯವರು ಪ್ರತಿ ಸಮಾವೇಶದಲ್ಲಿ ಹಾಗೂ ರೋಡ್ ಶೋನಲ್ಲಿ 'ಜೈ ಶ್ರೀರಾಮ್, ಜೈ ಶ್ರೀರಾಮ್' ಎಂದು ಕೂಗುತ್ತಾರೆ. ಇಂಥದ್ದೆಲ್ಲವನ್ನು ನಾನು 40 ವರ್ಷಗಳ ಹಿಂದೆಯೇ ಮಾಡಿದ್ದೇನೆ. ಜೈ ಶ್ರೀರಾಮ ಘೋಷಣೆ ಕೂಗುವವರಿಗೆ ನಾನು ಉತ್ತರ ಕೊಡಲು ಸಮರ್ಥವಾಗಿದ್ದೇನೆ. ಅವರು ಗತಿ ಇಲ್ಲದ ಭಿಕಾರ್ ಛೋಟ್ (ಗತಿ ಇಲ್ಲದ ಭಿಕಾರಿ) ಇದ್ದಾರಂತ ನಾವು ಆ ಲೆವೆಲ್‌ಗೆ ಇಳಿಯೋದಕ್ಕೆ ಆಗೊಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದರು.

Add Asianetnews Kannada as a Preferred SourcegooglePreferred

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಕೈಗೊಂಡಿರುವ ಕೈ ನಾಯಕ ರಾಜು ಕಾಗೆ ಅವರು ಬಿಜೆಪಿಯ ಹಿಂದೂ ಕಾರ್ಯಕರ್ತರ ಮೇಲೆ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸತ್ತರೆ ನಿಮ್ಮಲ್ಲಿ ಮತ್ಯಾರು ಪ್ರಧಾನಿ ಆಗೋರಿದ್ದಾರೆ ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಈಗ ಪುನಃ ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೊಲ್ಲೇನು? ನಾಲಗೆ ಹರಿಬಿಟ್ಟ ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, ಕೇಂದ್ರದಲ್ಲಿ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಬಿಟ್ಟು ರಾಮಮಂದಿರ ನಿರ್ಮಾಣ ಮಾಡುತ್ತಾರೆ. ಕೇವಲ ಗುಡಿಗಳನ್ನು ಕಟ್ಟುವುದರಿಂದ ಸವರ್ಣೀಯರಾಗುತ್ತೇವೆ ಎಂದರೆ ನಾವು ಕೂಡ ನಿರಂತರವಾಗಿ ಗುಡಿಗಳನ್ನು ಕಟ್ಟುತ್ತೇವೆ. ನಾವು ನಮ್ಮಲ್ಲಿರುವ ವ್ಯವಸ್ಥೆಗಳ ಬಗ್ಗೆ ವಿಚಾರ ಮಾಡಬೇಕು. ಅದೆಲ್ಲವನ್ನು ಬಿಟ್ಟು ಬಿಜೆಪಿಯವರು ಬಂದ ತಕ್ಷಣ ಜೈ ರಾಮ್, ಜೈ ರಾಮ್ ಎಂದು ಕೂಗುತ್ತಾ ಹೋಗುತ್ತಾರೆ. ಇಂಥದ್ದೆಲ್ಲವನ್ನು 40 ವರ್ಷಗಳ ಹಿಂದೆಯೇ ಮಾಡಿ ಬಂದಿದ್ದೇನೆ. ಇವರೇನು ಹೊಸದನ್ನು ಮಾಡುತ್ತಿಲ್ಲ ಎಂದು ಹೇಳಿದರು.

ಜೈ ಶ್ರೀರಾಮ್ ಎಂದು ಕೂಗುತ್ತಾ ಹೋಗುವವರಿಗೆ ಉತ್ತರ ಕೊಡುವುದಕ್ಕೆ ನಾನು ತುಂಬಾ ಸಮರ್ಥವಾಗಿದ್ದೇನೆ. ಆದರೆ, ಅವರಿಗೆ ಉತ್ತರ ಕೊಡುವಂತಹದ್ದು, ನನ್ನ ಲೆವೆಲ್ ಅಲ್ಲ. ಅವರೇನೋ ಭಿಕಾರ್ ಚೋಟ್ ಇದ್ದಾರಂತ ನಾವು ಅದೇ ಲೆವೆಲ್‌ಗೆ ಇಳಿಯೋದಕ್ಕಾಗಲ್ಲ. ಅದ್ದರಿಂದ ಇದಕ್ಕೆಲ್ಲಾ ತಕ್ಕ ಉತ್ತರವನ್ನು ನೀಡಬೇಕೆಂದರೆ ನಮ್ಮ ಪಕ್ಷಕ್ಕೆ ನೀವು ಮತ ಹಾಕಬೇಕು. ಅಭಿವೃದ್ಧಿಯನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರವನ್ನು ಮುನ್ನಡೆಸುತ್ತೇವೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೋದಿಲ್ಲವೇ ಎಂದಿದ್ದ ರಾಜು ಕಾಗೆ!
ಚಿಕ್ಕೋಡಿ (ಮೇ.1):
ಪ್ರಧಾನಿ ನರೇಂದ್ರ ಮೋದಿ ಸತ್ತರೆ, ಈ ದೇಶದಲ್ಲಿ ಮುಂದೆ ಯಾರೂ ಪಿಎಂ ಆಗುವುದಿಲ್ಲವೇ? ಮೋದಿ ತೀರಿಕೊಂಡರೆ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಶಾಸಕ ರಾಜು ಕಾಗೆ ನಾಲಿಗೆ ಹರಿಬಿಟ್ಟಿದ್ದರು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಮದಾಪೂರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಶಾಸಕ, ಈಗಿನ ಯುವಕರು ಮಾತೆತ್ತಿದ್ದರೆ ಮೋದಿ ಮೋದಿ ಅನ್ನುತ್ತಾರೆ, ಮೋದಿನ ತಗೊಂಡು ನೆಕ್ಕುತ್ತೀರೇನು? ಎಂದು ಹೇಳಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕಡಿಮೆ ಕೊಟ್ರೆ ಕರೆಂಟ್ ಕೊಡಲ್ಲ; ಮತದಾರರಿಗೆ ಬೆದರಿಕೆ ಹಾಕಿದ ಶಾಸಕ ರಾಜು ಕಾಗೆ

ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇಕು ಅಂತಾರೆ. ಇಲ್ಲಿ ಏನಾದರೂ ಸಮಸ್ಯೆ ಆದರೆ ಮೋದಿ ಬರೋದಿಲ್ಲ. ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿ ಹತ್ರ ಮೂರು ಸಾವಿರ ಕೋಟಿ ವಿಮಾನ ಇದೆ. ನಾಲ್ಕು ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ಳುತ್ತಾರೆ. ಇಂಥವರನ್ನು ತಗೊಂಡು ಏನು ಮಾಡ್ತೀರಿ ಎಂದು ವಾಗ್ದಾಳಿ ನಡೆಸಿದ್ದರು.