ಸೊರಬ ವಿಧಾನಸಭಾ ಚುನಾವಣೆ ಅತ್ಯಂತ ಕುತೂಹಲದ ಅಖಾಡವಾಗಿದ್ದು, ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ಮತ್ತು ಕಾಂಗ್ರೆಸ್‌ ಹುರಿ​ಯಾಳು ಮಧು ಬಂಗಾರಪ್ಪ ಅವರ ನಡುವಿನ ಹಣಾಹಣಿ ಗಮನ ಸೆಳೆ​ದಿದೆ. ಈ ಇಬ್ಬರ ಸ್ಪರ್ಧೆ ಮಧ್ಯೆ ಜೆಡಿ​ಎಸ್‌ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವ​ರು ಸಹೋದರರ ಗೆಲವಿಗೆ ಸವಾಲೊಡ್ಡುತ್ತಿದ್ದಾರೆ.

ಎಚ್‌.ಕೆ.ಬಿ. ಸ್ವಾಮಿ

ಸೊರಬ (ಏ.27) : ಸೊರಬ ವಿಧಾನಸಭಾ ಚುನಾವಣೆ ಅತ್ಯಂತ ಕುತೂಹಲದ ಅಖಾಡವಾಗಿದ್ದು, ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ಮತ್ತು ಕಾಂಗ್ರೆಸ್‌ ಹುರಿ​ಯಾಳು ಮಧು ಬಂಗಾರಪ್ಪ ಅವರ ನಡುವಿನ ಹಣಾಹಣಿ ಗಮನ ಸೆಳೆ​ದಿದೆ. ಈ ಇಬ್ಬರ ಸ್ಪರ್ಧೆ ಮಧ್ಯೆ ಜೆಡಿ​ಎಸ್‌ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಅವ​ರು ಸಹೋದರರ ಗೆಲವಿಗೆ ಸವಾಲೊಡ್ಡುತ್ತಿದ್ದಾರೆ.

ಸೊರಬ ಕ್ಷೇತ್ರ(Soraba assembly constituency) ಎಂದಾಕ್ಷಣ ರಾಜಕೀಯವಾಗಿ ತಟ್ಟನೆ ನೆನಪಾಗುವುದು ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ(S Bangarappa) ಮತ್ತು ಅವರ ಕುಟುಂಬ ರಾಜಕಾರಣ. ಅಭಿವೃದ್ಧಿಯ ದೃಷ್ಠಿಯಿಂದ ಜೇವರ್ಗಿ ನಂತರ ಸೊರಬ ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಿಕೊಂಡಿದೆ. ಕ್ಷೇತ್ರಕ್ಕೆ 56 ವರ್ಷಗಳ ಇತಿಹಾಸವಿದ್ದರೂ 1967ರಿಂದ 1994 ರವರೆಗೆ ದಿ

ರಕ್ತಕ್ರಾಂತಿ ಹೆಸರಿನಲ್ಲಿ ಶಾಂತಿ ಕದಡುತ್ತಿರುವ ಮಧು ಬಂಗಾರಪ್ಪ: ಕುಮಾರ ಬಂಗಾರಪ್ಪ ವಾಗ್ದಾಳಿ

ಎಸ್‌.ಬಂಗಾರಪ್ಪ ಶಾಸಕರಾಗಿ ಆರಿಸಿ ಬರುವ ಮೂಲಕ ‘ಸೋಲಿಲ್ಲದ ಸರದಾರ’ ಎಂಬ ಬಿರುದು ಹೊತ್ತಿದ್ದರು.

ಸಹೋ​ದ​ರರ ಮಧ್ಯೆ ಸ್ಪರ್ಧೆ:

2008ರ ಚುನಾವಣೆಯಲ್ಲಿ ಎಸ್‌.ಬಂಗಾರಪ್ಪ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಮಧು ಬಂಗಾರಪ್ಪ(Madhu bangarappa) ಮತ್ತು ಕುಮಾರ ಬಂಗಾರಪ್ಪ(Kumara bangarappa) ಅವರ ನಡುವೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಚ್‌.ಹಾಲಪ್ಪ ಜಯ ಸಾಧಿಸುವುದರೊಂದಿಗೆ ಎಸ್‌.ಬಂಗಾರಪ್ಪ ಅವರ ಕುಟುಂಬ ರಾಜಕಾರಣಕ್ಕೆ ಬ್ರೇಕ್‌ ಬೀಳುವಂತೆ ಮಾಡಿದರು. 2013ರ ಚುನಾವಣೆಯಲ್ಲಿ ಸತತ ಎರಡು ಸೋಲುಗಳ ನಂತರ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಮಧು ಬಂಗಾರಪ್ಪ ಕಾಂಗ್ರೆಸ್‌ನ ಕುಮಾರ ಬಂಗಾರಪ್ಪ ಮತ್ತು ಕೆಜೆಪಿ ವತಿಯಿಂದ ಸ್ಪರ್ಧೆ ಮಾಡಿದ್ದ ಎಚ್‌. ಹಾಲಪ್ಪ ಅವರನ್ನು ಮಣಿಸುವ ಮೂಲಕ ಸೇಡು ತೀರಿಸಿಕೊಂಡಿದ್ದೂ ಅಲ್ಲದೇ, ಕೈತಪ್ಪಿ ಹೋಗಿದ್ದ ಕುಟುಂಬ ರಾಜಕಾರಣವನ್ನು ಪುನಃ ತಮ್ಮ ವಶಕ್ಕೆ ಪಡೆದಿದ್ದು ಇತಿಹಾಸ. 2004 ರಲ್ಲಿ ಗೆದ್ದಿದ್ದ ಕುಮಾರ್‌ ಪುನಃ ಮತ್ತೆ ಗೆಲುವು ಕಾಣಲು 2018 ರವರೆಗೆ ಕಾಯಬೇಕಾದ ಸಂದರ್ಭ ಬಂದಿದ್ದು, ಇದೀಗ ಪುನಃ ಕುಮಾರ್‌ ಬಂಗಾರಪ್ಪ ಚುನಾವಣಾ ಕಣದಲ್ಲಿ ಮಧು ವಿರುದ್ಧ ಸೆಣಸಾಡಬೇಕಿದೆ.

ಬಗ​ರ್‌​ಹುಕುಂ ಹೋರಾಟ ಬಲ:

ಕುಮಾರ ಬಂಗಾರಪ್ಪ ಅವರ ವರ್ತನೆ ಬಗ್ಗೆ ಮುನಿಸಿಕೊಂಡು ನಮೋ ವೇದಿಕೆಯನ್ನು ಹುಟ್ಟುಹಾಕಿ, ಬಂಡಾಯ ಅಭ್ಯರ್ಥಿ ನಿಲ್ಲಿಸುವ ಬೆದರಿಕೆ ಹಾಕುತ್ತಲೇ ಇದ್ದ ಮೂಲ ಬಿಜೆಪಿಗರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಹಾಗೆಂದು ಬಂಡಾಯ ಶಮನವೂ ಆಗಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಪಣ ತೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರು ಫೀಲ್ಡಿಂಗ್‌ಗೆ ಇಳಿದರೆ ಕುಮಾರ್‌ ಬಂಗಾರಪ್ಪ ಬಲ ವೃದ್ಧಿಗೊಳ್ಳಬಹುದು. ಈ ಕ್ಷೇತ್ರದಲ್ಲಿ ಲಿಂಗಾಯಿತ ಮತ್ತು ಮಡಿವಾಳ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿವೆ. ಕಾಂಗ್ರೆಸ್‌ ಅಭ್ಯರ್ಥಿಗೆ ಪಕ್ಷದಲ್ಲಿನ ಒಡಕು ಅಥವಾ ಮುಖಂಡರಲ್ಲಿನ ಗೊಂದಲುಗಳು ಸಧ್ಯದ ಮಟ್ಟಿಗೆ ಇಲ್ಲದಿರುವುದರಿಂದ ಮಧು ಬಂಗಾರಪ್ಪ ನಿರಾಳರಾಗಿದ್ದಾರೆ. ಅವರ ಪರವಾಗಿ ಎಸ್‌.ಬಂಗಾರಪ್ಪ ಅವರ ಇಡೀ ಕುಟುಂಬ ಬೆಂಬಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಮತ್ತು ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಮಧು ನಿಂತಿರುವುದು ಸಹಜವಾಗಿಯೇ ಆನೆಬಲ ತಂದಿದೆ.

2023ರ ಚುನಾವಣೆ ಎಸ್‌. ಬಂಗಾರಪ್ಪ ಅವರ ಪುತ್ರದ್ವಯರಲ್ಲಿ ಯಾರೇ ಪರಾಜಿತರಾದರೂ ರಾಜಕೀಯ ನೇಪಥ್ಯಕ್ಕೆ ಸರಿಯಲಿದ್ದಾರೆ ಎನ್ನುವ ಮಾತುಗಳು ಕುಮಾರ್‌ ಮತ್ತು ಮಧು ಅಭಿಮಾನಿ ವಲಯದಲ್ಲಿ ಸುಳಿದಾಡುತ್ತಿದೆ. ಹಾಗಂತ ಇಬ್ಬರೂ ಚುನಾವಣಾ ಪ್ರಚಾರ ಸಮಯದಲ್ಲಿ ಹೇಳಿಕೊಂಡು ತಿರುಗುತ್ತಿರುವುದು ಸಾಮಾನ್ಯವಾಗಿದೆ. ಈ ಮೂಲಕ ಗೆಲ್ಲುವ ಶತಾಯಗತಾಯ ಪ್ರಯತ್ನಗಳು ಸಾಗಿವೆ.

ಜೆಡಿಎಸ್‌ ಅಭ್ಯರ್ಥಿ ಗುದ್ದು ಯಾರಿಗೆ?

ಜೆಡಿಎಸ್‌ನಿಂದ ಸ್ಪರ್ಧೆ ಮಾಡಿರುವ ಬಾಸೂರು ಚಂದ್ರೇಗೌಡ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಪುತ್ರದ್ವಯರ ಗೆಲುವಿಗೆ ಅಡ್ಡಗಾಲಾಗಿ, ಠಕ್ಕರ್‌ ನೀಡುತ್ತಾರೆ ಎನ್ನುವ ಮಾತು ತಾಲೂಕಿನಲ್ಲಿ ಕೇಳಿಬರುತ್ತಿದೆ. 1994ರ ಚುನಾವಣೆಯಲ್ಲಿ ಎಸ್‌.ಬಂಗಾರಪ್ಪ ಕೆಸಿಪಿ ವತಿಯಿಂದ ಸ್ಪರ್ಧೆ ಮಾಡಿದ್ದ ಸಂದರ್ಭ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಬಾಸೂರು ಚಂದ್ರೇಗೌಡ ಸ್ಪರ್ಧಿಸಿ 2ನೇ ಸ್ಥಾನದಲ್ಲಿದ್ದರು. ಆ ಚುನಾವಣೆಯಲ್ಲಿ ಎಸ್‌.ಬಂಗಾರಪ್ಪ 45,641 ಮತಗಳನ್ನು ಗಳಿಸಿದರೆ ಚಂದ್ರೇಗೌಡ 27,171 ಮತಗಳನ್ನು ಪಡೆದು ಎಸ್‌.ಬಂಗಾರಪ್ಪ ಅವರ ಎದೆ ನಡುಗಿಸಿದ್ದರು. ಅದೇ ರೀತಿಯ ವಾತಾವರಣ ನಿರ್ಮಾಣಕ್ಕೆ ವೇದಿಕೆ ಸಜ್ಜುಗೊಂಡಿದೆ. ಏಕೆಂದರೆ ಕುಮಾರ ಬಂಗಾರಪ್ಪ ಅವರ ವಿರುದ್ಧ ಸಿಡಿದೆದಿದ್ದ ಬಿಜೆಪಿಗರು ಬಾಸೂರು ಚಂದ್ರೇಗೌಡರನ್ನು ಬೆಂಬಲಿಸಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ ಲಿಂಗಾಯತ, ಅಲ್ಪಸಂಖ್ಯಾತರು, ಒಕ್ಕಲಿಗರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅದು ಮತವಾಗಿ ಪರಿವರ್ತನೆಯಾದರೆ ಎಸ್‌.ಬಂಗಾರಪ್ಪ ಕುಟುಂಬ ರಾಜಕಾರಣಕ್ಕೆ ಮತ್ತೊಮ್ಮೆ ಕಡಿವಾಣ ಬೀಳಲಿದೆ ಎಂಬ ಚರ್ಚೆ ನಡೆಯುತ್ತಿದೆ.

ಸೊರ​ಬ​ದಲ್ಲಿ ಕುಮಾರ್‌ ಬಂಗಾರಪ್ಪ ಗೆಲ್ಲಿಸಿ: ಬಿ.ಎಸ್‌.ಯಡಿ​ಯೂ​ರ​ಪ್ಪ

ಒಟ್ಟಾರೆ ತಾಲೂಕಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗೆಲುವು ಯಾರ ಕೊರಳಿಗೆ ಎಂದು ಕಾದು ನೋಡಬೇಕಷ್ಟೆ.

ಒಟ್ಟು ಮತದಾರರು

1.93 ಲಕ್ಷ, ಈಡಿಗರು - 65 ಸಾವಿರ, ಲಿಂಗಾಯತರು - 45 ಸಾವಿರ, ಹಿಂದುಳಿದ ಜಾತಿ/ಪಂಗಡ - 40 ಸಾವಿರ, ಮಡಿವಾಳರು- 18 ಸಾವಿರ, ಅಲ್ಪಸಂಖ್ಯಾತರು- 12 ಸಾವಿರ, ಬ್ರಾಹ್ಮಣರು - 9 ಸಾವಿರ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.