'ನಾನು ಮತ್ತು ದೇಶಪಾಂಡೆ ಇಬ್ಬರೂ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದವರು. ಅವನು ನನಗಿಂತ ಕೇವಲ ನಾಲ್ಕು ತಿಂಗಳಷ್ಟೆ ಹಿರಿಯ. ಆದರೆ ನನಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಾನೆ’ ಎಂದು ಏಕವಚನದಲ್ಲೇ ಸಲುಗೆಯಿಂದ ಚಟಾಕಿ ಹಾರಿಸಿದ ಸಿದ್ದರಾಮಯ್ಯ 

ವಿಧಾನಸಭೆ(ಡಿ.29): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಯಸ್ಸು, ಜನ್ಮ ದಿನಾಂಕದ ನೈಜತೆ ಬಗ್ಗೆ ಬುಧವಾರ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ನೈಜತೆ ಪರಿಶೀಲನೆಗೆ ತನಿಖೆ ಆಗಬೇಕು, ಸದನ ಸಮಿತಿ ರಚಿಸಬೇಕೆಂಬ ಒತ್ತಾಯಗಳೂ ಕೇಳಿಬಂದು ಸದನ ನಗೆಗಡಲಲ್ಲಿ ತೇಲುವಂತಾಯಿತು. ಈ ಬಾರಿಯ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ಕಾಂಗ್ರೆಸ್‌ನ ಹಿರಿಯ ಸದಸ್ಯ ಆರ್‌.ವಿ.ದೇಶಪಾಂಡೆ ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು, ‘ನಾನು ಮತ್ತು ದೇಶಪಾಂಡೆ ಇಬ್ಬರೂ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದವರು. ಅವನು ನನಗಿಂತ ಕೇವಲ ನಾಲ್ಕು ತಿಂಗಳಷ್ಟೆ ಹಿರಿಯ. ಆದರೆ ನನಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಾನೆ’ ಎಂದು ಏಕವಚನದಲ್ಲೇ ಸಲುಗೆಯಿಂದ ಚಟಾಕಿ ಹಾರಿಸಿದರು.

Add Asianetnews Kannada as a Preferred SourcegooglePreferred

ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ಕೃಷ್ಣ ಭೈರೇಗೌಡ, ನಿಮಗೆ ಅಷ್ಟುವಯಸ್ಸಾದಂತೆಯೇ ಕಾಣುವುದಿಲ್ಲ. ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ವೇಳೆ ಸಿದ್ದರಾಮಯ್ಯ ಅವರೆ ನಿಮಗೆ 75 ವರ್ಷ ವಯಸ್ಸಾಗಿದೆಯಾ ನಿಜ ಹೇಳಿ ಎಂದಿದ್ದರು. ನಿಮ್ಮ ಆರೋಗ್ಯ, ದೈಹಿಕವಾಗಿ ಉತ್ತಮ ನಿರ್ವಹಣೆ ಬಗ್ಗೆ ಖುಷಿ ಆಗುತ್ತೆ. ಆದರೆ, ನಿಮ್ಮ ಜನನ ಪ್ರಮಾಣದ ನೈಜತೆ ಬಗ್ಗೆ ನಮಗೆ ಅನುಮಾನ ಬರುತ್ತದೆ. ನೈಜತೆ ತನಿಖೆಗೆ ಸ್ಪೀಕರ್‌ ಆದೇಶ ಮಾಡಬೇಕು’ ಎಂದರು. ಆಗ ಸ್ಪೀಕರ್‌ ‘ಈ ಬಗ್ಗೆ ಸದನ ಸಮಿತಿ ರಚಿಸೋಣ ಬಿಡಿ’ ಎಂದರು. ಬಳಿಕ ಮಾತು ಮುಂದುವರೆಸಿದ ಸಿದ್ದರಾಮಯ್ಯ, ‘ನನ್ನನ್ನು ಶಾಲೆಗೆ ದಾಖಲಿಸಿಕೊಂಡ ರಾಜಪ್ಪ ಎಂಬ ಶಿಕ್ಷಕರು ನನ್ನ ಜನ್ಮದಿನಾಂಕವನ್ನು 1947 ಆಗಸ್ಟ್‌ 3 ಎಂದು ದಾಖಲಿಸಿದ್ದಾರೆ. ನಮ್ಮಪ್ಪ ವಿದ್ಯಾವಂತರಲ್ಲ. ಕೃಷಿಕ. ಸರಿಯಾಗಿ ದಾಖಲಿಸದೆ ಇರಬಹುದು. ಆದರೆ, ದೇಶಪಾಂಡೆ ಅವರ ತಂದೆ ಲಾಯರ್‌ ಆಗಿದ್ದವರು. ಸರಿಯಾಗಿ ಜನ್ಮ ದಿನಾಂಕ ದಾಖಲಿಸಿರುತ್ತಾರೆ’ ಎಂದರು.

Karnataka Assembly Elections 2023: ಡಿ.30ರಿಂದ ಜ.16ರವರೆಗೆ ಸಿದ್ದು, ಡಿಕೆಶಿ ಜಂಟಿಯಾತ್ರೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ‘ಎಲ್ಲಾ ಸರಿ.. ನೀವು ದೇಶಪಾಂಡೆ ಅವರನ್ನು ಓವರ್‌ ಟೇಕ್‌ ಮಾಡಿ ಮುಖ್ಯಮಂತ್ರಿ ಆಗ್ಬಿಟ್ರಲ್ಲ’ ಎಂದು ಕಾಲೆಳೆದರು. ಆಗ ಸಿದ್ದರಾಮಯ್ಯ ಅವರು, ‘ದೇಶಪಾಂಡೆ ಕಳೆದ ಚುನಾವಣೆಯಲ್ಲೇ ನಿವೃತ್ತಿ ತೆಗೆದುಕೊಳ್ತೀನಿ ಅಂತಿದ್ದ. ನಾನೇ ಬೇಡಪ್ಪ. ನನ್ನ ಜತೆ ನೀನು ಇರಬೇಕು. ಸ್ಪರ್ಧೆ ಮಾಡು ಎಂದು ಹೇಳಿ ನಿಲ್ಲಿಸಿದ್ದೆ. ಈಗ 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸು. ನಾನೂ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೇನೆ’ ಎಂದರು.