February 2023 ರಾಜಕೀಯ ಬೆಳವಣಿಗೆ: ಮಾಂಸಾಹಾರ ನಿಷಿದ್ಧ, ಬ್ರಾಹ್ಮಣ ಸಿಎಂ, ತಣ್ಣಗಾದ ಭವಾನಿ ರೇವಣ್ಣ!
ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವಯ ಫೆಬ್ರವರಿ ತಿಂಗಳಲ್ಲಿ ತಾರಕಕ್ಕೆ ಏರುತ್ತಿತ್ತು. ಈ ವೇಳೆ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಮಿತಿಯೇ ಇರಲಿಲ್ಲ. ಕೆಲವು ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ ನೋಡಿ..
ಬೆಂಗಳೂರು (ಡಿ.12): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಚುನಾವಣಾ ಕಾವು ತಾರಕಕ್ಕೆ ಏರುತ್ತಿತ್ತು. ಈ ವೇಳೆ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಮಿತಿಯೇ ಇರಲಿಲ್ಲ. ಎಲ್ಲ ಪಕ್ಷಗಳ ನಾಯಕರ ಬಾಯಲ್ಲೂ ಘೋಷಣೆಗಳು ಹಾಗೂ ಆರೋಪಗಳ ಸುರಿಮಳೆ ಸುರಿದಿದ್ದೇ ಹೆಚ್ಚು. ಅದರಲ್ಲಿ ಜೆಡಿಎಸ್ನಲ್ಲಿ ನಡೆದ ಬೆಳವಣಿಗೆಗಳು ರಾಜ್ಯ ರಾಜಕಾರಣದ ಆಕರ್ಷಣೆಗಳೂ ಆಗಿವೆ. ಇಲ್ಲಿದೆ ಫೆಬ್ರವರಿ 2023ರ ರಾಜಕೀಯ ಬೆಳವಣಿಗೆಗಳ ಮಾಹಿತಿ...
ಬ್ರಾಹ್ಮಣ ಸಿಎಂ ಬಾಂಬ್ ಹಾಕಿದ್ದ ಎಚ್ಡಿಕೆ,
ದೆಹಲಿಯಲ್ಲಿ ನಡೆದ ಆರ್ಎಸ್ಎಸ್ ಪ್ರಮುಖರ ಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡುವ ಚರ್ಚೆ ಆಗಿದೆಯಂತೆ, ಉಳಿದಂತೆ 8 ಮಂದಿ ಉಪಮುಖ್ಯಮಂತ್ರಿ ಆಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಪಾಳಯದಲ್ಲಿ ಪ್ರಳಯ ಸೃಷ್ಟಿಸುವಂತಹ ಹೇಳಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಷಿ ಮುಖ್ಯಮಂತ್ರಿ ಆಗುತ್ತಾರೆಂಬ ಪ್ರಸ್ತಾಪ ಆಗಿದ್ಯಂತೆ. ಪ್ರಹ್ಲಾದ್ ಜೋಷಿ ಸಿಎಂ ಆದರೆ, 8 ಜನ ಇತರೆ ಸಮುದಾಯದ ಮುಖ್ಯಸ್ಥರು ಉಪಮುಖ್ಯಮಂತ್ರಿ ಆಗುತ್ತಾರೆ. ಇಷ್ಟು ದಿನ ಮಾತನಾಡದ ಪ್ರಹ್ಲಾದ್ ಜೋಶಿ ಈಗ ಜೆಡಿಎಸ್ ವಿರುದ್ದ ಪಂಚರತ್ನ ರಥಯಾತ್ರೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.
ಮಾಂಸಾಹಾರ ತ್ಯಜಿಸಿದ್ದ ಘಟನಾನುಘಟಿ ನಾಯಕರು:
ರಾಜ್ಯದಲ್ಲಿ ಮಾಂಸಾಹಾರ ಪ್ರಿಯರಾಗಿದ್ದ ಇಬ್ಬರು ದಿಗ್ಗಜ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸಂಕಲ್ಪದೊಂದಿಗೆ ಮಾಂಸಾಹಾರವನ್ನು ತ್ಯಜಿಸಿದ್ದರು. ಈ ಮೂಲಕ ಸಂಪೂರ್ಣ ಸಸ್ಯಾಹಾರಿಗಳಾಗಿ ಬದಲಾಗಿದ್ದರು. ಮಾಂಸಹಾರ ಸೇವಿಸುವುದನ್ನು ಬಿಟ್ಟಿರುವ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ಎನ್ನುವುದು ಮತ್ತೊಂದು ವಿಶೇಷವಾಗಿದೆ. ಮಾಂಸಹಾರ ಬೇಡವೇ ಬೇಡ ಅಂತ ಶಪಥ ಮಾಡಿದ್ದು, ಈಗಾಗಲೇ ಒಂದುವರೆ ತಿಂಗಳು ಕಳೆದಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಒಂದೂವರೆ ತಿಂಗಳಿಂದ ಮಾಂಸಹಾರ ಸೇವನೆ ಮಾಡಿಲ್ಲ. ಇನ್ನು ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಕಳೆದ ಎರಡು ತಿಂಗಳಿಂದ ನಾನ್ ವೆಜ್ ನಿಂದ ದೂರವಿದ್ದಾರೆ. ಇವರಿಬ್ಬರೂ ಈಗ ಸಸ್ಯಾಹಾರಿಗಳಾಗಿ ಬದಲಾಗಿದ್ದರು.
January 2023 ಕರ್ನಾಟಕ ರಾಜಕೀಯ ಬೆಳವಣಿಗೆಗಳು: ಮಾಜಿ ಸಿಎಂ ರಾಜಕೀಯ ನಿವೃತ್ತಿ, ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಬಾಂಬ್!
ನ್ಯಾಯಾಧೀಶ ಹುದ್ದೆ ತೊರೆದು ರಾಜಕೀಯಕ್ಕೆ ಬಂದು ಸೋಲುಂಡ ಸುಭಾಷ್ ಚಂದ್ರ:
ಪ್ರಧಾನ ಸಿವಿನ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುಭಾಷ್ ಚಂದ್ರ ರಾಠೋಡ್ ಅವರು ತಮ್ಮ ಉನ್ನತ ಹುದ್ದಿಗೆ ರಾಜೀನಾಮೆ ನೀಡಿ ರಾಜಕೀಯ ರಂಗ ಪ್ರವೇಶಸಿದ್ದರು.ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಲೂಕಿನ ಸಂಕನಾಳ್ ತಾಂಡಾದವರಾಗಿರೋ ಸುಭಾಚಂದ್ರ ಕಳೆದ ಆರು ತಿಂಗಳಿಂದ ಗದಗ ಜಿಲ್ಲೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿದ್ದರು. ಚಿತ್ತಾಪುರದತ್ತ ಚಿತ್ತ ನೆಟ್ಟ ಸುಭಾಷ್ ಚಂದ್ರ ಅವರು ರಾಜಕೀಯ ಪ್ರವೇಶ ಮಾಡುವ ಉದ್ದೇಶದಿಂದ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿದ್ದು, ಜನವರಿ 18 ನೇ ತಾರೀಕು ರಾಜೀನಾಮೆ ಅಂಗೀಕಾರವಾಗಿತ್ತು. ಚಿತ್ತಾಪುರದಿಂದ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದ ಇವರು ಸೋಲುಂಡಿದ್ದಾರೆ.
ಪುತ್ತೂರು ಸಹಕಾರ ಸಮಾವೇಶದಲ್ಲಿ ಅಮಿತ್ ಶಾ ಭಾಗಿ:
ಪುತ್ತೂರು ನಗರದಲ್ಲಿ ಅಯೋಜನೆ ಮಾಡಿದ್ದ ಕ್ಯಾಂಪ್ಕೋ ಲಿ. ಸುವರ್ಣ ಮೋಹತ್ಸವ ಕಾರ್ಯಕ್ರಮ ಉದ್ಘಾಟನೆ ಹಾಗೂ ಆಗ್ರೋ ಮಾಲ್ ನಿರ್ಮಾಣಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಬಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ವೇಳೆ ರಾಜಕೀಯ ಭಾಷಣ ಮಾಡಿದ ಅಮಿತ್ ಶಾ, 'ರಾಜ್ಯದಲ್ಲಿ ಟಿಪ್ಪು ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಓಟ್ ಕೊಡ್ತೀರಾ ಅಥವಾ ರಾಣಿ ಅಬ್ಬಕ್ಕ ಹೆಸರಿನಲ್ಲಿ ಬಿಜೆಪಿಗೆ ಓಟ್ ಕೊಡ್ತೀರಾ..? ನೀವು ಬಿಜೆಪಿಗೆ ಮತವನ್ನು ಹಾಕಿದರೆ ದೇಶ ಮತ್ತು ಕರ್ನಾಟಕದ ಅಭಿವೃದ್ಧಿಗೆ ಓಟ್ ಹಾಕಿದಂತೆ' ಎಂದು ಹೇಳಿದ್ದರು. ಕ್ಯಾಂಪ್ಕೋ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್ ಷಾ ಅವರು ಸುಬ್ರಾಯ ಭಟ್ ಅವರ ದೂರದೃಷ್ಟಿಯ ಪರಿಣಾಮದಿಂದ ಕ್ಯಾಂಪ್ಕೋ ರಚನೆ ಆಗಿದೆ. ಕೇವಲ 3 ಸಾವಿರ ಸದಸ್ಯರಿಂದ 1 ಲಕ್ಷಕ್ಕೂ ಹೆಚ್ಚು ಸದಸ್ಯರು ಈಗ ಇದ್ದಾರೆ. ಇದು ದೊಡ್ಡ ಸಾಧನೆಯಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಸಹಕಾರ ಸಂಘ ಸ್ಥಾಪನೆ ಉದ್ದೇಶ ಇದೆ ಎಂದಿದ್ದರು.
ಗಾಣಿಗ, ಈಡಿಗ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ ಬಿಜೆಪಿ ಸರ್ಕಾರ:
ಬೆಂಗಳೂರು (ಫೆ.20): ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಗಾಣಿಗ ಸಮುದಾಯಕ್ಕೆ ಅನುಕೂಲ ಆಗುವಂತೆ ರಾಜ್ಯ ಸರ್ಕಾರದಿಂದ ಇಂದು 'ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಿ ಜಾರಿಗೆ ತರಲಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮಸಂಖ್ಯೆ 78(ಎ)ಯಿಂದ (ಇ)ವರೆಗೆ ಬರುವ ಗಾಣಿಗ, ತೇಲಿ, ಗಾಂಡ್ಲ, ವನಿಯನ್ ಹಾಗೂ ಜ್ಯೋತಿನಗರ, ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದೇಶಿಸಲಾಗಿದೆ.
ಈಡಿಗರಿಗೂ ಗುಡ್ ನ್ಯೂಸ್ ನೀಡಿದ್ದ ಸರ್ಕಾರ: ಈಗಾಗಲೇ ಬಿಲ್ಲವ - ಈಡಿಗ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಸರ್ಕಾರದ ಆದೇಶದಲ್ಲಿ ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ ಅನುಚ್ಛೇದ 15/4ರ ಅನ್ವಯ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಚ್ಚೇದ 16/4ರ ಅನ್ವಯ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲು ಹಿಂದುಳಿದ ವರ್ಗಗಳನ್ನು ಗುರುತಿಸಿ ಜಾತಿ ಪಟ್ಟಿಯನ್ನು ಹಿರಡಿಸಲಾಗಿರುತ್ತದೆ. ಅದರನ್ವಯ ಸದರಿ ಜಾತಿ ಪಟ್ಟಿಯಲ್ಲಿ ಪ್ರವರ್ಗ 2ಎ ಕ್ರಮಸಂಖ್ಯೆ 4a ಯಿಂದ zವರೆಗೆ ನಮೂದಾಗಿರುವ ಈಡಿಗ ಸೇರಿದಂತೆ ಒಟ್ಟು 26 ಜಾತಿಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಚಾಲಕ ರಹಿತ ನಮ್ಮ ಮೆಟ್ರೋ ರೈಲು ಆರಂಭಕ್ಕೆ ತಯಾರಿ, ಚೀನಾದ ಎಂಜಿನೀಯರ್ಸ್ಗೆ ಭಾರತ ವೀಸಾ!
ಚುನಾವಣೆಗೆ ಹೆಚ್ಚಾಯ್ತು ಹೆಲಿಕಾಪ್ಟರ್ ಬಾಡಿಗೆ ಪಡೆವ ಕಸರತ್ತು:
ಬೆಂಗಳೂರು(ಫೆ.22): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಹೆಲಿಕಾಪ್ಟರ್ಗಳಿಗೆ ಭಾರೀ ಬೇಡಿಕೆ ಶುರುವಾಗಿದೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಒಂದು ತಿಂಗಳ ಅವಧಿಗೆ ಬಾಡಿಗೆಗೆ ಹೆಲಿಕಾಪ್ಟರ್ಗಳನ್ನು ಬುಕ್ ಮಾಡುತ್ತಿದ್ದಾರೆ.
ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂಬಂಧ ಶೀಘ್ರದಲ್ಲೇ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಸಾಧ್ಯತೆಯಿದೆ. ನೀತಿ ಸಂಹಿತೆ ಘೋಷಣೆಯಾದ ಬಳಿಕ ಮೂರೂ ಪಕ್ಷಗಳ ಪ್ರಮುಖ ನಾಯಕರು ರಾಜ್ಯದ ವಿವಿಧೆಡೆ ನಡೆಯುವ ಪಕ್ಷದ ಬಹಿರಂಗ ಸಮಾವೇಶಗಳು, ಪಕ್ಷದ ಕಾರ್ಯಕ್ರಮಗಳು, ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಾರೆ. ಹೀಗಾಗಿ ತಮ್ಮ ಪ್ರಯಾಣಕ್ಕಾಗಿ ಖಾಸಗಿ ಕಂಪನಿಗಳ ಹೆಲಿಕಾಪ್ಟರ್ಗಳನ್ನು ಬಾಡಿಗೆಗೆ ಮುಂಗಡ ಬುಕಿಂಗ್ ಮಾಡಲು ಮುಗಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನ ಜೆಡಿಎಸ್ ಟಿಕೆಟ್ಗಾಗಿ ಫೈಟ್ ಮಾಡಿ ತಣ್ಣಗಾದ ಭವಾನಿ ರೇವಣ್ಣ:
ಚಿಕ್ಕಮಗಳೂರು (ಫೆ.26): ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ಭವಾನಿ ರೇವಣ್ಣ ಅವರು ಭರ್ಜರಿ ಫೈಟ್ ಮಾಡಿದ್ದರು. ಕೆಲವು ಕಾರ್ಯಕ್ರಮಗಳಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಕೂಡ ಹೇಳಿಕೊಂಡಿದ್ದರು. ಆದರೆ, ಎಷ್ಟೇ ಕಸರತ್ತು ಮಾಡಿದರೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತ್ರ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಟಿಕೆಟ್ ಕೊಡಲಾಗುತ್ತಿದ್ದು, ನಮ್ಮ ಮನೆಯವರಿಗೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ದರು. ಅದರಂತೆ, ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಹಲವು ಸುತ್ಇನ ಚರ್ಚೆ ಮಾಡಿದ ನಂತರ ಹಾಸನದ ಕಾರ್ಯಕರ್ತ ಸ್ವರೂಪ್ ಪ್ರಕಾಶ್ ಅವರಿಗೆ ಟಿಕೆಟ್ ನೀಡುವುದಕ್ಕೆ ನಿರ್ಧಾರ ಮಾಡಿದ್ದರು.