‘ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಿದರೂ ಇಂಡಿಯಾ ಕೂಟ 295ಕ್ಕಿಂತ ಹೆಚ್ಚು ಸ್ಥಾನ ಪಡೆದು ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಇದು ಜನರ ಸಮೀಕ್ಷೆ ಆಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನವದೆಹಲಿ (ಜೂ.2) : ಲೋಕಸಭೆ ಚುನಾವಣೆಯ ಕೊನೆಯ ಹಂತ ಮುಗಿಯುತ್ತಿದ್ದಂತೆಯೇ ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾ ಒಕ್ಕೂಟವು ಶನಿವಾರ ಸಂಜೆ ಮಹತ್ವದ ಸಭೆ ನಡೆದಿದೆ. ‘ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಿದರೂ ಇಂಡಿಯಾ ಕೂಟ 295ಕ್ಕಿಂತ ಹೆಚ್ಚು ಸ್ಥಾನ ಪಡೆದು ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಇದು ಜನರ ಸಮೀಕ್ಷೆ ಆಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದೇ ವೇಳೆ, ಬಿಜೆಪಿ ನೇತೃತ್ವದ ಎನ್‌ಡಿಎ 270 ಸೀಟುಗಳ ಮ್ಯಾಜಿಕ್‌ ಸಂಖ್ಯೆ ದಾಟುವುದಿಲ್ಲ ಎಂಬ ಆಶಾಭಾವನೆಯನ್ನು ಇಂಡಿಯಾ ಕೂಟ ಹೊಂದಿದ್ದು, ಒಗ್ಗಟ್ಟಿನಿಂದ ಮುಂದಿನ ರಣತಂತ್ರ ರೂಪಿಸಲು ನಿರ್ಧರಿಸಿದೆ.

ಪಿಒಕೆ ನಮ್ಮದಲ್ಲ: ಹೈಕೋರ್ಟ್‌ಗೆಪಾಕ್‌ ವಕೀಲರ ಅಚ್ಚರಿ ಮಾಹಿತಿ

ಮತದಾನ ಮುಗಿಯುತ್ತಿದ್ದಂತೆಯೇ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಕೂಟದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಅರವಿಂದ ಕೇಜ್ರಿವಾಲ್‌, ಶರದ್‌ ಪವಾರ್‌, ಅಖಿಲೇಶ್‌ ಯಾದವ್, ಫಾರೂಖ್‌ ಅಬ್ದುಲ್ಲಾ, ಸೀತಾರಾಂ ಯೆಚೂರಿ ಸೇರಿ ಅನೇಕ ನಾಯಕರು ಸಭೆ ನಡೆಸಿದರು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸಭೆಗೆ ಬಂದಿರಲಿಲ್ಲ.

ಈ ವೇಳೆ, ಚುನಾವಣಾ ತಜ್ಞ ಯೋಗೇಂದ್ರ ಯಾದವ್‌ ಅವರು, ಇಡೀ ಎನ್‌ಡಿಎ 270ಕ್ಕಿಂತ ಹೆಚ್ಚು ಸ್ಥಾನ ಗೆಲ್ಲವುದಿಲ್ಲ ಎಂದ ನುಡಿದಿರುವ ಭವಿಷ್ಯದ ಬಗ್ಗೆ ಚರ್ಚಿಸಲಾಯಿತು. ಮೈತ್ರಿಕೂಟಕ್ಕೆ ಸಂಖ್ಯಾಬಲ ಇಲ್ಲದಿದ್ದರೂ ಒಟ್ಟಿಗೆ ಇರಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.

ಅಗ್ನಿವೀರ್ ಯೋಜನೆ ವಿರುದ್ಧ ರಾಷ್ಟ್ರಪತಿಗೆ ರಾಹುಲ್‌ ಗಾಂಧಿ ದೂರು!

ಸಭೆಗೂ ಮುನ್ನ ಟ್ವೀಟ್ ಮಾಡಿದ ಖರ್ಗೆ ಅವರು, ‘ಹೋರಾಟ ಇನ್ನೂ ಮುಗಿದಿಲ್ಲ ಮತ್ತು ಎಲ್ಲಾ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಅತ್ಯಂತ ಜಾಗರೂಕರಾಗಿದ್ದಾರೆ. ನಾವು 2024ರ ಲೋಕಸಭೆ ಚುನಾವಣೆಯನ್ನು ಜತೆಗೂಡಿ ಹೋರಾಡಿದ್ದೇವೆ. ಸಕಾರಾತ್ಮಕ ಫಲಿತಾಂಶದ ಬಗ್ಗೆ ವಿಶ್ವಾಸ ಹೊಂದಿದ್ದೇವೆ’ ಎಂದಿದ್ದಾರೆ.