Asianet Suvarna News Asianet Suvarna News

ಅಧಿಕಾರ ಕೊಟ್ಟರೆ ರಾಮರಾಜ್ಯ ನಿರ್ಮಾಣ: ಜೆಡಿಎಸ್‌ ಸಮಾವೇಶದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ

ಐದು ವರ್ಷದ ಅವಧಿಗೆ ನಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಈ ರಾಜ್ಯವನ್ನು ರಾಮರಾಜ್ಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

If we give power to our party we will make this state a utopia says hd kumaraswamy gvd
Author
First Published Mar 8, 2023, 2:58 PM IST

ಬಾದಾಮಿ (ಮಾ.08): ಐದು ವರ್ಷದ ಅವಧಿಗೆ ನಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಈ ರಾಜ್ಯವನ್ನು ರಾಮರಾಜ್ಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ತಾಲೂಕಿನ ಕುಳಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಅಧಿಕಾರ ನೀಡಿದರೆ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮದ ಉಚಿತ ಶಿಕ್ಷಣ. ಪ್ರತಿ ಗ್ರಾಮದಲ್ಲಿ ಉಚಿತ ಆರೋಗ್ಯ, ರೈತರಿಗೆ ಎಕರೆಗೆ 10 ಸಾವಿರ, ಪ್ರತಿ ವರ್ಷ ರೈತರು ಎಲ್ಲಿಯೂ ಸಾಲ ಪಡೆಯಬೇಕಿಲ್ಲ. 

ದಿನಕ್ಕೆ 24 ಗಂಟೆ ಉಚಿತ ವಿದ್ಯುತ್‌ ನೀಡುತ್ತೇವೆ ಎಂದರು. ಈಗಾಗಲೇ ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ಮಾಜಿ ಶಾಸಕರ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನಿಂದ ರೈತರ ಮೇಲೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದರೆ ಆ ಸಹಕಾರಿ ಬ್ಯಾಂಕ್‌ ತನಿಖೆ ಮಾಡಿಸಿ, ಅದನ್ನು ಮುಚ್ಚಿಸುವ ಕೆಲಸ ಮಾಡುತ್ತೇವೆ. ಪ್ರತಿ ಮನೆಗೆ 5 ಸಾವಿರ ಕೊಡುತ್ತೇವೆ. ನದಿ ತೀರದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಮೂಲಭೂತ ಸೌಕರ್ಯ ಒದಗಿಸುತ್ತೇವೆ. ಈ ಬಾರಿ ಹನಮಂತ ಮಾವಿನಮರದಗೆ ಆಶೀರ್ವಾದ ಮಾಡಿ. ಬಾದಾಮಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ, ಕಾಂಕ್ರಿಟ್‌ ರಸ್ತೆ, ಒಳಚರಂಡಿ, ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದರು.

ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂಬ ಇಬ್ರಾಹಿಂ ಹೇಳಿಕೆ ಅಹಂಕಾರದ ಮಾತಲ್ಲ: ಎಚ್‌ಡಿಕೆ

ಚುನಾವಣೆಯಲ್ಲಿ ಮತ ಪಡೆದು ಸಿದ್ದರಾಮಯ್ಯ ಹಾಗೂ ಶ್ರೀರಾಮಲು ಈ ಭಾಗಕ್ಕೆ ಬಂದು ಜನರ ಕಷ್ಟಸುಖ ಕೇಳಲಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜನರ ಕಷ್ಟ ಪರಿಹಾರವಾಗಿಲ್ಲ. ಒಬ್ಬ ಎಂಎಲ್‌ಎ ಮನೆಯಲ್ಲಿ 8 ಕೋಟಿ ಸಿಗುತ್ತೆ ಅಂದ್ರೆ ನೀವು ಯೋಚನೆ ಮಾಡಿ. ಅಂತಹ ದುಡ್ಡಿನಿಂದ ನಿಮಗೆ ಕುಕ್ಕರ್‌ ಹಂಚುತ್ತಾರೆ. ಆಮಿಷಗಳಿಗೆ ಬಲಿಯಾಗಬೇಡಿರಿ ಎಂದು ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು. ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ ಮಾತನಾಡಿ, ಇದೊಂದು ಬಾರಿ ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ ಅಧಿಕಾರ ಕೊಟ್ಟು ನೋಡಿ ಜನಪರ ಕಾರ್ಯಕ್ರಮ ನೀಡುತ್ತೇವೆ ಎಂದು ಹೇಳಿದರು. 

ಬಾದಾಮಿ ಜೆಡಿಎಸ್‌ ಅಭ್ಯರ್ಥಿ ಹನಮಂತ ಮಾವಿನಮರದ ಮಾತನಾಡಿ, ಬಾದಾಮಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಲ್ಲಿ 9 ದಿನಗಳ ಕಾಲ 195 ಕಿಮೀ ಪಾದಯಾತ್ರೆ ಮಾಡಿ ಸಮಸ್ಯೆಗಳನ್ನು ಆಲಿಸಿದ್ದೇನೆ. ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದೊಳಗೆ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಪ್ರಕಾಶ ಗಾಣಿಗೇರ ಮಾತನಾಡಿದರು. ತಾಲೂಕು ಜೆಡಿಎಸ್‌ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು. ಸಮಾವೇಶದಲ್ಲಿ ಮತಕ್ಷೇತ್ರದ ವಿವಿದ ಭಾಗಗಳಿಂದ ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳು, ಯುವಕರು, ಮಹಿಳೆಯರು ಭಾಗವಹಿಸಿದ್ದರು.

ನಿರೀಕ್ಷಿತ ಮಟ್ಟದಲ್ಲಿ ಸಿದ್ದರಾಮಯ್ಯ ಕೆಲಸ ಮಾಡಿಲ್ಲ: ಐತಿಹಾಸಿಕ ಬಾದಾಮಿಯಲ್ಲಿ ಸಮಸ್ಯೆಗಳು ಬಹಳ ಇವೆ. ಆದರೆ, ಸಿದ್ದರಾಮಯ್ಯ ಕಳೆದ ಐದು ವರ್ಷಗಳ ಕಾಲ ಯಾವುದೇ ಕೆಲಸ ಮಾಡಲಿಲ್ಲ. ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿಗೆ ಸಾಕಷ್ಟುಕೆಲಸ ಮಾಡಬಹುದಾಗಿತ್ತು. ಆದರೆ ನಿರೀಕ್ಷಿತ ಮಟ್ಟದದಲ್ಲಿ ಕೆಲಸ ಮಾಡಲಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು. ಕಾಂಗ್ರೆಸ್‌ನವರು ಮನ್ಯಾಗ ಜಗಳ ಹಚ್ಚುವ ಗೃಹಲಕ್ಷ್ಮಿ ಕಾರ್ಯಕ್ರಮ ಮಾಡಿದ್ದಾರೆ. ಚನ್ನಗಿರಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪನ ಪುತ್ರನ ಹತ್ತಿರ 8 ಕೋಟಿ ಇದೆ. 

ನನಗೆ ಟೋಪಿ ಹಾಕಿದವರು ಶೀಘ್ರ ಕಾಂಗ್ರೆಸ್‌ಗೆ: ಎಚ್‌.ಡಿ.ಕುಮಾರಸ್ವಾಮಿ

ಇನ್ನು ಶಾಸಕನ ಮನ್ಯಾಗ ಎಷ್ಟಿರಬೇಕು. ಮುಂಡೇವ್‌ ಎಲ್ಲ ರೊಕ್ಕಾ ಹಾಕೊಂತ ಕುಂತಾವ್‌. ಮಾಜಿ ಪ್ರಧಾನ ದೇವೇಗೌಡರಿಗೆ ನಾಲ್ಕು ಪಂಚೆ, ಧೋತ್ರ ಬಿಟ್ಟರೆ ಏನು ಇಲ್ಲ ಎಂದರು. ಸಿದ್ದುಗೆ ನಿದ್ದೆ ಚಿಂತೆಯಾದ್ರೆ, ಕುಮಾರಣ್ಣನಿಗೆ ರೈತರ ಚಿಂತೆ ಇದೆ. ಹನಮಂತ ಮಾವಿನಮರದ ಅವರನ್ನು ಗೆಲ್ಲಿಸಿ ಅವರು ಬರೀ ಶಾಸಕರಲ್ಲ, ಮಂತ್ರಿ ಆಗಿ ಬರ್ತಾರ. ಜನರ ಉದ್ಧಾರಕ್ಕಾಗಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರ ಬರಬೇಕು. ಈ ಬಾರಿ ಕುಮಾರಸ್ವಾಮಿ ಸಿಎಂ ಆಗೋದು ನೂರಕ್ಕೆ ನೂರು ಸತ್ಯ. ನಮ್ಮ ಚರ್ಮ ತೆಗೆದು ನಿಮ್ಮ ಪಾದುಕೆ ಮಾಡಿದ್ರೂ ನಿಮ್ಮ ಉಪಕಾರ ತೀರಲ್ಲ. ಜನರೇ ಈ ಬಾರಿ ಜೆಡಿಎಸ್‌ ಗೆಲ್ಲಿಸಿ ಎಂದು ಸಿ.ಎಂ ಇಬ್ರಾಹಿಂ ಮತದಾರರಿಗೆ ಮನವಿ ಮಾಡಿದರು.

Follow Us:
Download App:
  • android
  • ios