Asianet Suvarna News Asianet Suvarna News

ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂಬ ಇಬ್ರಾಹಿಂ ಹೇಳಿಕೆ ಅಹಂಕಾರದ ಮಾತಲ್ಲ: ಎಚ್‌ಡಿಕೆ

ನಾನು ಮುಖ್ಯಮಂತ್ರಿ ಆಗ್ತೀನಿ ಅಂತ ಸಿ.ಎಂ.ಇಬ್ರಾಹಿಂ ಹೇಳಿರುವುದು ಅಹಂಕಾರದ ಮಾತಲ್ಲ, ಅದು ಸದ್ಯದ ಜನರ ಭಾವನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. 

Former CM HD Kumaraswamy Talks About CM Ibrahim At Bagalkote gvd
Author
First Published Mar 7, 2023, 2:40 AM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಮಾ.07): ನಾನು ಮುಖ್ಯಮಂತ್ರಿ ಆಗ್ತೀನಿ ಅಂತ ಸಿ.ಎಂ.ಇಬ್ರಾಹಿಂ ಹೇಳಿರುವುದು ಅಹಂಕಾರದ ಮಾತಲ್ಲ, ಅದು ಸದ್ಯದ ಜನರ ಭಾವನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಕುಳಗೇರಿ ಕ್ರಾಸ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಹಣಮಂತ ಮಾವಿನಮರದ ಅವರ ಪ್ರವಾಹ ಪೀಡಿತ ಮಲಪ್ರಭಾ ನದಿ ತೀರದ ಗ್ರಾಮಗಳ ಪಾದಯಾತ್ರೆ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. 

ಇವತ್ತು ರಾಜ್ಯದಲ್ಲಿ ಜನರ ಭಾವನೆ  ಕೂಡ ಇಬ್ರಾಹಿಂ ಅವರಂತೆ ಇದೆ. ನನಗೆ ಜಾತಿ ಧರ್ಮದ ಸೋಂಕಿಲ್ಲ. ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಪಂಚರತ್ನ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಬಾದಾಮಿ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದಲ್ಲಿ ಮಾವಿನಮರದ ಶಾಸಕರಷ್ಟೆ ಅಲ್ಲ, ಈ ಭಾಗದ ಮಂತ್ರಿಯಾಗಿ ಸೇವೆ ಮಾಡುವ ಅವಕಾಶ ಸಿಗಲಿದೆ ಎಂದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಬಾದಾಮಿ, ಐಹೊಳೆ ಸೇರಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಇದರಿಂದ ಉದ್ಯೋಗ ಹೆಚ್ಚುತ್ತೆ ಎಂದರು. ಕಳೆದ ಬಾರಿ ಸಿದ್ದರಾಮಯ್ಯ, ರಾಮುಲು ಸ್ಪರ್ಧೆ  ನಂತರ ಇಲ್ಲಿಗೆ ಬಂದು ಟಾಟಾ ಮಾಡಿ ಹೋದರು. 

ದೇಶದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ತಬ್ಬಲಿ: ಬಿ.ಎಸ್‌.ಯಡಿಯೂರಪ್ಪ

ಆದರೆ ಹನಮಂತ ಮಾವಿನಮರದ ಹಾಗಲ್ಲ, ಅವರಿಗೆ ಒಂದು ಅವಕಾಶ ಕೊಡಿ. ದುಡ್ಡಿಗಾಗಿ ನೀವು  ಮರಳಾಗಬೇಡಿ ಎಂದು ಮನವಿ ಮಾಡಿದರು. ರಾಜ್ಯದ ಜನರಿಗೆ ಒಳ್ಳೆಯ ಕಾರ್ಯಕ್ರಮ ಕೊಡೋದು ಯಾತ್ರೆ ಉದ್ದೇಶವಾಗಿದೆ. ಮೇ 8 ಅಥವಾ 9 ಕ್ಕೆ ಚುನಾವಣೆ ನಡೆಯುತ್ತದೆ. ಜೆಡಿಎಸ್‌ನ ಹನಮಂತ ಮಾವಿನಮರದ ಅವರನ್ನ ಬೆಂಬಲಿಸಿ. ಮುಂದಿನ ಯುಗಾದಿಯೊಳಗೆ ಎಲ್ಲಾ ಸೌಲಭ್ಯ ಮಾಡಿಕೊಡೋದು ನಮ್ಮ ಜವಾಬ್ದಾರಿ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿಎಂ ಇಬ್ರಾಹಿಂ, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ , ಬಾದಾಮಿ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವೈಎಸ್‌ವಿ ದತ್ತಾ ವಿರುದ್ಧ ವಾಗ್ದಾಳಿ: ವೈ.ಎಸ್‌.ವಿ.ದತ್ತ ಎಂಬ ವ್ಯಕ್ತಿ ದೇವೇಗೌಡರಿಂದ ಎಲ್ಲಾ ಅನುಕೂಲ ಪಡೆದುಕೊಂಡು ಪಕ್ಷಕ್ಕೆ ದ್ರೋಹ ಬಗೆದು ಹೋದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಕಡೂರು ಮೂಲದವರಾದ ಕಾಂಗ್ರೆಸ್‌ ಪಕ್ಷದ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಲಿಂಗಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಕುಮಾರಸ್ವಾಮಿ, ನಮ್ಮಿಂದ ಎಲ್ಲಾ ಉಪಕಾರ ಪಡೆದರು. ದೇವೇಗೌಡರ ಮಾನಸ ಪುತ್ರ ಎಂದು ಹೇಳಿಕೊಂಡು ಓಡಾಡಿದರು. 

ಕರ್ನಾಟಕದಲ್ಲಿ ಕಾಂಗ್ರೆಸ್‌ ಐಸಿಯೂನಲ್ಲಿದೆ: ಜಗದೀಶ್‌ ಶೆಟ್ಟರ್‌ ಲೇವಡಿ

ಆ ವ್ಯಕ್ತಿಗೆ ಟಿಕೆಟ್‌ ಕೊಟ್ಟ ವೇಳೆ ದೇವೇಗೌಡರು ನಿನಗೆ ವಿಧಾನಸಭೆಯಲ್ಲಿ ನೆರವಾಗುತ್ತಾರೆ ಎಂದು ನನಗೆ ಹೇಳಿದ್ದರು. ಆದರೆ, ಈ ಆಸಾಮಿ ನನಗೆ ಯಾವಾಗ ನೆರವಾಗಿದ್ದರೋ ನನಗಂತೂ ನೆನಪಿಲ್ಲ ಎಂದು ಟಾಂಗ್‌ ನೀಡಿದರು. ಈ ಆಸಾಮಿ ದೇವೇಗೌಡರನ್ನೇ ಮರಳು ಮಾಡಿ ಕಡೂರು ಟಿಕೆಟ್‌ ಪಡೆದುಕೊಂಡರು. ಆದರೆ ಟಿಕೆಟ್‌ ನಿರಾಕರಿಸಲ್ಪಟ್ಟಧರ್ಮೇಗೌಡರು ಹಾಗೂ ಭೋಜೇಗೌಡರು ಪಕ್ಷಕ್ಕೆ ನಿಷ್ಠರಾಗಿ ಒಟ್ಟಿಗೆ ಗೆದ್ದು ವಿಧಾನ ಪರಿಷತ್‌ಗೆ ಬಂದರು. ದೇವರು ಅವರನ್ನು ಕೈ ಬಿಡಲಿಲ್ಲ. ಆದರೆ ಉಪಕಾರ ಸ್ಮರಣೆ ಮರೆತ ಆ ವ್ಯಕ್ತಿ ಕಾಂಗ್ರೆಸ್‌ ಸೇರಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios