Asianet Suvarna News Asianet Suvarna News

ದೇವೇಗೌಡರು ಜಿಲ್ಲಾ ರಾಜಕಾರಣಕ್ಕೆ ಮತ್ತೆ ಬಂದಲ್ಲಿ ಅವರ ಗೆಲುವಿಗೆ ಶ್ರಮಿಸುವೆ: ಪ್ರಜ್ವಲ್‌ ರೇವಣ್ಣ

ದೇವೇಗೌಡರು ಎಂಬ ದೊಡ್ಡ ಆಲದಮರದ ನೆರಳಿನಲ್ಲಿ ಹುಟ್ಟಿ ಅವರ ಆಶೀರ್ವಾದದಲ್ಲಿ ಬೆಳೆದು, ಅವರು ಕಳೆದ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟ ಕಾರಣದಿಂದ ಇಂದು ನಾನು ಸಂಸದನಾಗಿ ರಾಜಕೀಯ ಮಾಡುತ್ತಿದ್ದೇನೆ. 
 

If DeveGowda comes back to district politics I will work hard for his victory Says Prajwal Revanna gvd
Author
First Published Dec 2, 2023, 1:39 PM IST

ಹೊಳೆನರಸೀಪುರ (ಡಿ.02): ದೇವೇಗೌಡರು ಎಂಬ ದೊಡ್ಡ ಆಲದಮರದ ನೆರಳಿನಲ್ಲಿ ಹುಟ್ಟಿ ಅವರ ಆಶೀರ್ವಾದದಲ್ಲಿ ಬೆಳೆದು, ಅವರು ಕಳೆದ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟ ಕಾರಣದಿಂದ ಇಂದು ನಾನು ಸಂಸದನಾಗಿ ರಾಜಕೀಯ ಮಾಡುತ್ತಿದ್ದೇನೆ. ದೊಡ್ಡವರು(ದೇವೇಗೌಡರು) ಜಿಲ್ಲಾ ರಾಜಕಾರಣಕ್ಕೆ ಮತ್ತೆ ಬಂದಲ್ಲಿ ಅವರ ಗೆಲುವಿಗಾಗಿ ಹಗಲು-ರಾತ್ರಿ ಶ್ರಮಿಸಲಾಗುವುದು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಶ್ರೀ ರಾಮದೇವರಕಟ್ಟೆ ಆವರಣದಲ್ಲಿ ಶುಕ್ರವಾರ ಆಯೋಜನೆ ಮಾಡಿದ್ದ ಜೆಡಿಎಸ್ ಚುನಾಯಿತ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅವರು ಜಿಲ್ಲೆಗೆ ಬಂದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಈ ಹಿಂದೆ ನಾನು ಪಡೆದ ಮತಗಳಿಗಿಂತ ಹೆಚ್ಚಿನ ಮತಗಳಿಂದ ಜಯಗಳಿಸುವಂತೆ ಮಾಡಿ ದೊಡ್ಡವರ (ದೇವೇಗೌಡರು) ಗೆಲುವಿಗೆ ತನ್ನ ಅಳಿಲು ಸೇವೆ ಮಾಡುವುದಾಗಿ ಪ್ರಜ್ವಲ್ ಹೇಳಿದರು.

ಹಾಸನಕ್ಕೆ ಪ್ರಜ್ವಲ್ ರೇವಣ್ಣ ಲೋಕಸಭಾ ಅಭ್ಯರ್ಥಿ: ಎಚ್.ಡಿ.ದೇವೇಗೌಡ

ಚುನಾವಣೆ ಮತ್ತು ಚುನಾಯಿತ ಜನಪ್ರತಿನಿಧಿಗಳು ರಾಜಕೀಯ ಹೊರತಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕಿದ್ದು, ರಾಜ್ಯದಲ್ಲಿ ರೈತರು ಪ್ರಮುಖವಾಗಿ ನಾಲ್ಕು ಸಂಕಷ್ಟಗಳಲ್ಲಿ ಸಿಲುಕಿದ್ದು, ತೀವ್ರ ಬರಗಾಲ, ವಿದ್ಯುತ್ ಪೂರೈಕೆ ಇಲ್ಲ, ಟಿಸಿಗಾಗಿ ಹಣ ಕಟ್ಟಿದ್ದರೂ ಟಿಸಿ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಕಂದಾಯ ಇಲಾಖೆಯಲ್ಲಿ ದುರಸ್ತಿ ದೊರೆಯದೇ ಅವರದೇ ಜಮೀನಿಗೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

೧.೫೭ ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಿದ ರೈತರು ತೀವ್ರ ಬರಗಾಲದಿಂದ ಫಸಲು ಕೈ ಸೇರದೇ ೩ ಸಾವಿರ ಕೋಟಿ ರು. ನಷ್ಟ ಅನುಭವಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೩೫೭ ಗ್ರಾಮ ಪಂಚಾಯತಿಗಳಲ್ಲಿ ೨೧೭ ಗ್ರಾ.ಪಂ.ಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆಗಳ ಕುರಿತು ಅವರಲ್ಲಿ ಚರ್ಚಿಸಿದಾಗ ೨೦ ಸಾವಿರ ರು. ಕಟ್ಟಿ ವರ್ಷಗಳು ಕಳೆದರೂ ಇನ್ನೂ ಟಿಸಿಗಳನ್ನು ಸರ್ಕಾರ ಪೂರೈಸಿಲ್ಲ. ಈ ರೀತಿಯ ಸಮಸ್ಯೆಗಳ ಕುರಿತಂತೆ ಸ್ಪಂದಿಸುವಂತೆ ಒತ್ತಾಯ ಮಾಡಿದರೆ, ಸರ್ಕಾರದಲ್ಲಿ ಬಜೆಟ್ ಇಲ್ಲವೆಂದು ಕೇಂದ್ರ ಸರ್ಕಾರದ ಬಗ್ಗೆ ಬೆಟ್ಟು ಮಾಡಿ ತೋರಿಸುವ ಸರ್ಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಕೈಚೆಲ್ಲಿ ಕುಳಿತಿರುವ ಸರ್ಕಾರದ ಬಗ್ಗೆ ಗ್ರಾ.ಪಂ.ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರ ಕಷ್ಟಕಂಡು ಹೊಟ್ಟೆ ಉರಿಯುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಗ್ಯಾರಂಟಿ ಯೋಜನೆಯ ೨ ಸಾವಿರ ರು. ನೀಡುತ್ತೇವೆ ಎಂದಿದ್ದ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಹಲವಾರು ಮಹಿಳೆಯರಿಗೆ ಹಣ ನೀಡಿಲ್ಲ. ಆದರೆ ಬಿತ್ತನೆ ಮಾಡಿ ೩ ಸಾವಿರ ಕೋಟಿ ರು. ನಷ್ಟ ಅನುಭವಿಸಿರುವ ರೈತರ ವಿಷಯದಲ್ಲಿ ಹೋರಾಟ ಮಾಡಬೇಕಾಗಿದೆ. ರೈತರಿಂದಲೇ ಹುಟ್ಟಿ, ರೈತರಿಂದಲ್ಲೇ ಬೆಳೆಯುತ್ತಿರುವ ಜೆಡಿಎಸ್ ಪಕ್ಷವು ರೈತರು ತೀವ್ರ ಬರಗಾಲದಿಂದ ಅನುಭವಿಸುತ್ತಿರುವ ಬೆಳೆ ನಷ್ಟದ ಸಂಪೂರ್ಣ ಪರಿಹಾರದ ಅನುದಾನವನ್ನು ಬಿಡುಗಡೆ ಮಾಡದೇ ಇದ್ದಲ್ಲಿ ಮುಂದಿನ ಅಧಿವೇಶನದಲ್ಲಿ ಹೋರಾಟ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಬಂಗಾರಪ್ಪರನ್ನ ನೆನೆಸಿಕೊಳ್ಳಿ: ರೈತರ ಪ್ರಶ್ನೆಗೆ ಗರಂ ಆದ ಸಂಸದ ಡಿ.ಕೆ.ಸುರೇಶ್

ಜನಪ್ರತಿನಿಧಿಗೆ ರಾಜಕೀಯ ಒಂದೆಡೆಯಾದರೇ ದೊರೆತ ಅವಕಾಶವನ್ನು ಬಳಸಿಕೊಂಡು ರೈತರ ಸಮಸ್ಯೆಗೆ ಸ್ಪಂದಿಸುವ ಮತ್ತು ಜಿಲ್ಲೆಯ ಪ್ರಗತಿಗೆ ಕೈಗೊಳ್ಳಬೇಕಾದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಅತ್ಯವಶ್ಯವೆಂದು ತಿಳಿಸಿ, ಶಾಸಕ ಎಚ್.ಡಿ. ರೇವಣ್ಣ ಅವರ ಅಧಿಕಾರದ ಅವಧಿಯಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ ಮತ್ತು ಕೋವಿಡ್ ಭೀಕರತೆ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಿಂದಾದ ಪ್ರಯೋಜನ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಜನರು ಅನುಭವಿಸಿದ ಕಷ್ಟ ಮತ್ತು ಹಣ ವ್ಯಯದ ಬಗ್ಗೆ ಮತ್ತು ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ವ್ಯಾಸಂಗದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಪ್ರತಿಯೊಬ್ಬರ ಜೀವನವನ್ನು ವೈಯಕ್ತಿಕವಾಗಿ ಬದಲಾವಣೆ ಮಾಡಲು ಸಾಧ್ಯವಾಗದಿದ್ದರೂ ಬಡವರು ಹಾಗೂ ಮಧ್ಯಮ ವರ್ಗದ ಜನರ ಮಕ್ಕಳ ಕಲಿತು ಜೀವನ ರೂಪಿಸಿಕೊಂಡಾಗ ಅವರಲ್ಲಿ ಕಾಣುವ ನೆಮ್ಮದಿಯಿಂದ ನಾವು ನಿಶ್ಚಿಂತೆಯಿಂದ ಊಟ ಮತ್ತು ನಿದ್ದೆ ಮಾಡಲು ಸಾಧ್ಯವಾಗಿದೆ ಎಂದರು.

Follow Us:
Download App:
  • android
  • ios