Asianet Suvarna News Asianet Suvarna News

ನಾನು ರಾಮನಗರವನ್ನು ಮರೆಯಲ್ಲ, ರಾಜ್ಯವನ್ನೂ ಮರೆಯೋಲ್ಲ: ಎಚ್‌ಡಿಕೆ

ನಾನು ರಾಮನಗರವನ್ನು ಮರೆಯೋಲ್ಲ, ರಾಜ್ಯವನ್ನೂ ಮರೆಯಲ್ಲ. ಭಗವಂತ ನನ್ನನ್ನು ಉಳಿಸಿರುವುದೇ ರಾಜ್ಯದ ಜನರ ಸೇವೆಗಾಗಿ ಎಂದು ಕೇಂದ್ರ ಉಕ್ಕು ಮತ್ತು ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

I will not forget Ramanagara and aso karnataka state says union minister hd kumaraswamy rav
Author
First Published Jul 15, 2024, 8:47 AM IST | Last Updated Jul 15, 2024, 8:55 AM IST

ಮಂಡ್ಯ (ಜು.15): ನಾನು ರಾಮನಗರವನ್ನು ಮರೆಯೋಲ್ಲ, ರಾಜ್ಯವನ್ನೂ ಮರೆಯಲ್ಲ. ಭಗವಂತ ನನ್ನನ್ನು ಉಳಿಸಿರುವುದೇ ರಾಜ್ಯದ ಜನರ ಸೇವೆಗಾಗಿ ಎಂದು ಕೇಂದ್ರ ಉಕ್ಕು ಮತ್ತು ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದ ಎದುರು ಜೆಡಿಎಸ್‌ ತಾಲೂಕು ಘಟಕದಿಂದ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸ್ವಾಭಿಮಾನಕ್ಕೆ ಹೆಸರಾಗಿರುವುದು ಮಂಡ್ಯ ಜಿಲ್ಲೆ. ಇದನ್ನು ಹಲವಾರು ಬಾರಿ ಜಿಲ್ಲೆಯ ಜನರು ನಿರೂಪಿಸಿದ್ದಾರೆ. ಪೇಪರ್ ಪೆನ್ನು ಕೇಳಿದವರಿಗೂ ಮಂಡ್ಯ ಜನ 6 ಸ್ಥಾನ ಕೊಟ್ಟರು. ಈಗ ಏನಾಗಿದೆ, ಕಿಕ್ ಬ್ಯಾಕ್ ತೆಗೆದುಕೊಳ್ಳುವುದಕ್ಕೆ ಅಧಿಕಾರವನ್ನು ಉಪಯೋಗ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಮೃತನ ಹೆಸರಲ್ಲಿ ಮುಡಾ ಜಾಗ ಡಿನೋಟಿಫೈ: ಎಚ್ ಡಿ.ಕುಮಾರಸ್ವಾಮಿ

ನೀವು ನನಗೆ ಕೊಟ್ಟ ಶಕ್ತಿ ರಾಜ್ಯದ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದೇನೆ. ನನಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಬೇಡ.

ಜನರ ಋಣ ತೀರಿಸಿ ಮಣ್ಣಲ್ಲಿ ಮಣ್ಣಾಗುತ್ತೇನೆ. ಅಲ್ಲಿಯವರೆಗೆ ರಾಜಕೀಯವಾಗಿ ನನ್ನನ್ನು ಅಷ್ಟು ಸುಲಭಕ್ಕೆ ತೆಗೆಯಲಾಗುವುದಿಲ್ಲ ಎಂದ ಅವರು, ಜನಪರವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಒಂದು ಕ್ಷಣವೂ ವ್ಯರ್ಥ ಮಾಡದೆ ಕೆಲಸ ಮಾಡುತ್ತಿದ್ದೇನೆ. ಒಕ್ಕಲಿಗ ಸಮಾಜ‌ ಕೊಟ್ಟ ಶಕ್ತಿಯನ್ನ ರಾಜ್ಯದ ಎಲ್ಲ ಜನರ ಅಭಿವೃದ್ಧಿಗೆ ಬಳಸುತ್ತೇನೆ ಎಂದು ಭರವಸೆ ನೀಡಿದರು.

ರಾಜಕೀಯವಾಗಿ ನನಗೆ ಎರಡನೇ ಬದುಕು ಕೊಟ್ಟಿದ್ದು ಮಂಡ್ಯ ಜನರು. ಅವರಿಗೆ ಗೌರವ ತರುವ ಕೆಲಸ ಮಾಡುವುದು ನನ್ನ ಕರ್ತವ್ಯ. ವಾರದಲ್ಲಿ ಒಂದು ದಿನವಾದರೂ ಮಂಡ್ಯದಲ್ಲಿ ಇರುತ್ತೇನೆ. ಕುಮಾರಣ್ಣ ಕೈಗೆ ಸಿಗಲಿಲ್ಲ‌ ಎಂಬ ದೋಷ ಬರಬಾರದು. ಸದಾ ಮಂಡ್ಯ ಜನರ ಸಮಸ್ಯೆಗೆ ಸ್ಪಂದಿಸಲು ನಿಖಿಲ್‌ಗೆ ಹೇಳಿದ್ದೇನೆ. ಹೆದರುವ ಅವಶ್ಯಕತೆ ಇಲ್ಲ ಎಂದರು.

15 ಸಾವಿರ ಕಿಕ್‌ ಬ್ಯಾಕ್‌: ಎಚ್‌ಡಿಕೆ ಆರೋಪ

ಪಾಂಡವಪುರ : ಬೆಂಗಳೂರಿನಲ್ಲಿ‌ ಕಸ ಎತ್ತಲು ಕಪ್ಪುಪಟ್ಟಿಯಲ್ಲಿರುವ ಗುತ್ತಿಗೆದಾರನಿಗೆ ಟೆಂಡರ್ ಕೊಟ್ಟು 15 ಸಾವಿರ ಕೋಟಿ ರು. ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಸ ಎತ್ತುವುದಕ್ಕೆ 30 ವರ್ಷ ಗುತ್ತಿಗೆ ನೀಡಿದ್ದಾರೆ. 45 ಸಾವಿರ ಕೋಟಿ ರು.ಗೆ ಟೆಂಡರ್‌ ಕೊಟ್ಟು ಅದರಲ್ಲೂ 15 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲು ಪೆನ್ನು ಪೇಪರ್ ಪಡೆದವರು ಮುಂದಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರೇಳದೆ ಟೀಕಿಸಿದರು.

ರಾಜ್ಯಾಧ್ಯಕ್ಷನಾಗಲು ಆತುರ ಇಲ್ಲ: ನಾನು ಏನು ಅಂತ ತೋರಿಸುವ ಛಲ ಇದೆ, ನಿಖಿಲ್ ಕುಮಾರಸ್ವಾಮಿ

ಸಮಸ್ಯೆಗಳನ್ನ ಕೇಳಲು ಅಧಿಕಾರಿಗಳನ್ನ ಕಳುಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತದೆ. ನಾನೇ ಹೇಗೆ ಅಧಿಕಾರಿಗಳ ಬಳಿ ಸಮಸ್ಯೆ ಕೇಳಲಿ. ನಾನು ಅಲ್ಲಿಗೆ (ಸರ್ವಪಕ್ಷ ಸಭೆ)ಹೋಗಬೇಕಾ?, ರಾಜ್ಯಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದೆ. ಆದರೆ, ಸರ್ಕಾರ ಅಧಿಕಾರಿಗಳನ್ನು ಕಳುಹಿಸದೆ ದ್ವೇಷದ ರಾಜಕಾರಣ ಮಾಡುತ್ತಿದೆ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರಸಚಿವ

Latest Videos
Follow Us:
Download App:
  • android
  • ios