ಬಳ್ಳಾರಿ ನನ್ನ ಜನ್ಮ ಭೂಮಿಯಾದರೂ ಮೊಳಕಾಲ್ಮುರು ನನ್ನ ಕರ್ಮ ಭೂಮಿ. ರಾಜಕೀಯವಾಗಿ ಪುನರ್ಜನ್ಮ ನೀಡಿದೆ. ಈ ಕ್ಷೇತ್ರವನ್ನು ಯಾವತ್ತು ಮರೆಯೋದಿಲ್ಲ. ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದರು.

ಮೊಳಕಾಲ್ಮುರು (ಫೆ.12) : ಬಳ್ಳಾರಿ ನನ್ನ ಜನ್ಮ ಭೂಮಿಯಾದರೂ ಮೊಳಕಾಲ್ಮುರು ನನ್ನ ಕರ್ಮ ಭೂಮಿ. ರಾಜಕೀಯವಾಗಿ ಪುನರ್ಜನ್ಮ ನೀಡಿದೆ. ಈ ಕ್ಷೇತ್ರವನ್ನು ಯಾವತ್ತು ಮರೆಯೋದಿಲ್ಲ. ಹೀಗೆಂದವರು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu). ಬಳ್ಳಾರಿ(Bellary)ಯಲ್ಲಿದ್ದುಕೊಂಡು ಆಗಿದ್ದಾಂಗ್ಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೊಳಕಾಲ್ಮುರು(Molakalmuru)ವಿಗೆ ಆಗಮಿಸುತ್ತಿರುವ ಬಿ.ಶ್ರೀರಾಮುಲು, ಶನಿವಾರ ಇಂತಹದ್ದೇ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೆರೆದಿದ್ದ ಸಮೂಹದÜ ಮುಂದೆ ಅವರಾಡಿದ ಮಾತುಗಳು ಪೂರ್ಣ ಪ್ರಮಾಣದಲ್ಲಿ ವಿದಾಯದ ಭಾಷಣದಂತಿತ್ತು.

ನೂತನ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀರಾಮುಲು, ಇಲ್ಲಿನ ಜನ ನನ್ನ ಮೇಲೆ ಇಟ್ಟಂತ ನಂಬಿಕೆ ಹುಸಿಗೊಳಿಸದಂತೆ ಕಾರ್ಯನಿರ್ವಹಿಸಿದ್ದೇನೆ. ಜನ ಹಾಗೂ ನನ್ನಲ್ಲಿ ತೃಪ್ತಿ ತಂದಿದೆ ಎಂದರು.

Assembly election: ಬಿಜೆಪಿ ಮುಂದಿನ ಮುಖ್ಯಮಂತ್ರಿಯೂ ಬಸವರಾಜ ಬೊಮ್ಮಾಯಿ: ಸಚಿವ ಶ್ರೀರಾಮುಲು

ಕಾಂಗ್ರೆಸ್‌ (Congress)ಶಾಸಕರಿಂದ ಕ್ಷೇತದಲ್ಲಿ ಅಭಿವೃದ್ಧಿ ಶೂನ್ಯವಾಗಿತ್ತು. ನಾನು ಶಾಸಕನಾದ ನಂತರ ಸರ್ಕಾರದ ಹಲವಾರು ಯೋಜನೆಗಳನ್ನು ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ. ಅಪಪ್ರಚಾರ ಮಾಡುತ್ತಿರುವವರು ಮಾಡುತ್ತಲೇ ಇದ್ದಾರೆ. ಇದಾವುದನ್ನೂ ಲೆಕ್ಕಿಸದೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಬಸ್‌ ನಿಲ್ದಾಣ ನಿರ್ಮಾಣ ಈ ಭಾಗದ ಜನತೆಯ ಬಹು ದಿನದ ಬೇಡಿಕೆಯಾಗಿತ್ತು. ಜನರ ಒತ್ತಾಸೆಯಂತೆ 5 ಕೋಟಿ ರು. ವೆಚ್ಚದಲ್ಲಿ ಬಸ್‌ನಿಲ್ದಾಣ, 8 ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.

ಅಭಿವೃದ್ಧಿ ವರದಿ:

ಕ್ಷೇತ್ರದಲ್ಲಿ 170 ದೇವಸ್ಥಾನ, ಮಿನಿ ವಿಧಾನ ಸೌಧಕ್ಕೆ ಹೆಚ್ಚುವರಿ 2 ಕೋಟಿ, ವಾಲ್ಮೀಕಿ ಭವನಕ್ಕೆ ಹೆಚ್ಚುವರಿ 2 ಕೋಟಿ, ತುಂಗಭದ್ರಾ ಹಿನ್ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಿದ್ದೇನೆ. ಇನ್ನು ಒಂದು ತಿಂಗಳ ಒಳಗಾಗಿ ತಾಲೂಕಿಗೆ ತುಂಗಭದ್ರೆ ಹರಿದು ಬರಲಿದ್ದು, ಪ್ರತಿ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ಕಳೆದ ಐದು ವರ್ಷದ ಅಭಿವೃದ್ಧಿ ವರದಿ ಮಂಡಿಸಿದರು. ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೆ ಅದು ಬಿಜೆಪಿಯಿಂದಲೇ ಸಾಧ್ಯವಿದ್ದು, ಬರುವ ದಿನಗಳಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಬೇಕೆಂದು ರಾಮುಲು ವಿನಂತಿಸಿದರು.

ಕಾದು ಸುಸ್ತಾದ ಸಾರಿಗೆ ಅಧಿಕಾರಿಗಳು:

12 ಗಂಟೆಗೆ ನಿಗದಿಯಾಗಿದ್ದ ಬಸ್‌ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಚಿವ ಬಿ.ಶ್ರೀರಾಮುಲು 2 ಗಂಟೆ ಸುಮಾರಿಗೆ ಆಗಮಿಸಿದರು. ಇದರಿಂದಾಗಿ 10 ಗಂಟೆಗೆ ಆಗಮಿಸಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ಸಚಿವರಿಗಾಗಿ ಸುಸ್ತಾಗಿದ್ದರು. ಸಾರಿಗೆ ಇಲಾಖೆ ಸಿಬ್ಬಂದಿ ವೇದಿಕೆಯಲ್ಲಿ ವಾದ್ಯಗೋಷ್ಟಿಯ ಕಲಾವಿದರೊಂದಿಗೆ ಹಾಡುಗಳನ್ನು ಹಾಡುತ್ತಾ ಕಾಲ ಕಳೆದರು.

ಚಿತ್ರದುರ್ಗ: ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ, ಅಗತ್ಯ ಕ್ರಮಕ್ಕೆ ಸಚಿವ ಶ್ರೀರಾಮುಲು ಸೂಚನೆ

ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಮೋಹನ್‌ ಮೆಣಸಿನಕಾಯಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿಕುಮಾರ್‌, ಮಂಡಳಿ ನಿರ್ದೇಶಕರಾದ ಆರುಂಡಿ ನಾಗರಾಜ, ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಷುಕುಮಾರ್‌, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಜಯಪಾಲಯ್ಯ, ಎತ್ನಟ್ಟಿಗೌಡ, ರಾಮದಾಸ್‌, ಉಪಾಧ್ಯಕ್ಷ ಮಂಜಣ್ಣ ಇದ್ದರು.