ನನ್ನ ಎಲ್ಲ ಸಮಸ್ಯೆ ಬಗೆಹರಿವ ವಿಶ್ವಾಸ: ಸೋಮಣ್ಣ
ಅಮಿತ್ ಶಾ ಅವರ ಭೇಟಿಯಿಂದ ಸಂತೋಷವಾಗಿದೆ. ನಾನು ಎರಡು ಅಥವಾ ಮೂರು ನಿಮಿಷ ಮಾತ್ರ ಭೇಟಿಗೆ ಅವಕಾಶ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆಗೆ ಅವಕಾಶ ನೀಡಿದರು. ನಿಮಗೇನು ಆಗಬೇಕು ಎಂದು ಕೇಳಿದರು. ಪಕ್ಷದಲ್ಲಿ ಕೆಲಸ ಮಾಡಬೇಕು. ನಿಮ್ಮ ನಾಯಕತ್ವದಲ್ಲಿ ಇರಬೇಕು ಎಂದಿದ್ದೇನೆ ಎಂದ ಮಾಜಿ ಸಚಿವ ವಿ.ಸೋಮಣ್ಣ
ಬೆಂಗಳೂರು(ಜ.16): ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಈ ತಿಂಗಳ ಅಂತ್ಯದಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಎಲ್ಲವನ್ನೂ ಬಗೆಹರಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರ ಭೇಟಿಯಿಂದ ಸಂತೋಷವಾಗಿದೆ. ನಾನು ಎರಡು ಅಥವಾ ಮೂರು ನಿಮಿಷ ಮಾತ್ರ ಭೇಟಿಗೆ ಅವಕಾಶ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆಗೆ ಅವಕಾಶ ನೀಡಿದರು. ನಿಮಗೇನು ಆಗಬೇಕು ಎಂದು ಕೇಳಿದರು. ಪಕ್ಷದಲ್ಲಿ ಕೆಲಸ ಮಾಡಬೇಕು. ನಿಮ್ಮ ನಾಯಕತ್ವದಲ್ಲಿ ಇರಬೇಕು ಎಂದಿದ್ದೇನೆ ಎಂದರು.
ಅಮಿತ್ ಶಾ ಬಳಿ ರಾಜ್ಯಸಭೆ ಸ್ಥಾನ, 3 ಕಷ್ಟದ ಕ್ಷೇತ್ರ ಕೇಳಿದ ಸೋಮಣ್ಣ..!
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಪಕ್ಷದ ವರಿಷ್ಠರ ಬಳಿ ಮನವಿ ಮಾಡಿದ್ದೇನೆ. ಪಕ್ಷವು ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ. ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಕುರಿತು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಲ್ಯಾಣ ಕರ್ನಾಟಕ ಐದು, ಕಿತ್ತೂರು ಕರ್ನಾಟಕ ಆರು, ಕರಾವಳಿ ಕರ್ನಾಟಕದಲ್ಲಿ ಮೂರು, ಮಧ್ಯ ಕರ್ನಾಟಕದಲ್ಲಿ ಮೂರು, ಬೆಂಗಳೂರಲ್ಲಿ ಮೂರು, ಹಳೆ ಮೈಸೂರು ಭಾಗದಲ್ಲಿ ಎಂಟು ಸ್ಥಾನಗಳಿವೆ ಎಂಬ ಮಾಹಿತಿಯನ್ನು ನೀಡಿದ್ದೇನೆ. ಫಿಂಗರ್ ಟಿಪ್ನಲ್ಲಿ ಮಾಹಿತಿ ನೀಡಿದ್ದು ಕೇಳಿ ವರಿಷ್ಠರು ಆಶ್ವರ್ಯಗೊಂಡರು ಎಂದು ಹೇಳಿದರು.
ರಾಜ್ಯಸಭೆ ನೀಡುವಂತೆ ಕೇಳುವುದರ ಜತೆಗೆ ಕಠಿಣವಾಗಿರುವ ಮೂರು ಕ್ಷೇತ್ರಗಳ ಹೊಣೆಗಾರಿಕೆ ನೀಡುವಂತೆ ಮನವಿ ಮಾಡಿದ್ದೇನೆ. ಯಾವುದೇ ಮೂರು ಕ್ಷೇತ್ರಗಳನ್ನು ನೀಡಿದರೂ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದೇನೆ ಎಂದರು.