ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ನಿಮ್ಮ ಹೆಸರು ಕೇಳಿ ಬರುತ್ತದೆ. ಅದೆಲ್ಲಾ ಏನೂ ಮಹತ್ವ ಅಲ್ಲ, ನಾನೇನು ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ: ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ
ಹಾವೇರಿ(ಜ.24): ನಾನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬಂದಿದೆ ಎನ್ನುವ ಕುರಿತು ಕೇಳಿದ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ನಿಮ್ಮ ಹೆಸರು ಕೇಳಿ ಬರುತ್ತದೆ. ಅದೆಲ್ಲಾ ಏನೂ ಮಹತ್ವ ಅಲ್ಲ, ನಾನೇನು ಆಕಾಂಕ್ಷಿ ಅಲ್ಲ. ಪಕ್ಷವನ್ನು ಒಂದೂಗೂಡಿಸುವುದರಲ್ಲಿ ಮುಂದಾಗುವೆ ಎಂದರು. ಪಕ್ಷ ಸಂಘಟನೆಯಲ್ಲಿ ಎಲ್ಲರಿಗೂ ಶಕ್ತಿಯಿದೆ. ಎಲ್ಲರೂ ಕೂಡಿದಾಗಲೇ ಒಗ್ಗಟ್ಟಿನ ಶಕ್ತಿ ಆಗುತ್ತದೆ. ಒಬ್ಬಂಟಿಯಾಗಿ ಪಕ್ಷ ಕಟ್ಟುವ ಭ್ರಮೆ ನಮ್ಮಲ್ಲಿ ಇಲ್ಲ. ಎಲ್ಲರೂ ಸೇರಿ ಮಾಡಿದಾಗ ಶಕ್ತಿ ಬರುತ್ತದೆ. ಬಿಜೆಪಿ ಜನಮಾನಸದಲ್ಲಿ ಇರುವ ಪಕ. ಅದಕ್ಕಾಗಿ ಒಮ್ಮೊಮ್ಮೆ ಪೈಪೋಟಿ ಇರುತ್ತದೆ. ಇಂತಹ ಸಮಯದಲ್ಲಿ ಸೌಹಾರ್ದತೆಯಿಂದ ಪಕ್ಷದ ಹಿರಿಯರು ಮಾರ್ಗದರ್ಶನ ಮಾಡುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗುತ್ತದೆ. ಮೇಲಿಂದ ಶಿವರಾಜ ಸಿಂಗ್ ಚೌಹಾಣ್ ಬರುತ್ತಾರೆ. ಅವರಮಾರ್ಗದರ್ಶನದಲ್ಲಿ ಸೌಹಾರ್ದತೆಯಿಂದ ಚುನಾವಣೆ ಆಗುತ್ತದೆ ಎಂದು ಹೇಳಿದರು.
ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಬಸವರಾಜ ಬೊಮ್ಮಾಯಿ
ಸೌಹಾರ್ದಯತ ಬಗೆಹರಿಸುವ ಪ್ರಯತ್ನ
ಮಾಜಿ ಸಚಿವ ಶ್ರೀರಾಮೂಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವೆ ನಡೆಯುತ್ತಿರುವ ವಾಕ್ ಸಮರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಮುಲು ಹಾಗೂ ರೆಡ್ಡಿ ಅವರು ನಮಗಿಂತ ನಿಮಗಿಂತಾ ಹಳೆಯ, ಆತ್ಮೀಯ ಸ್ನೇಹಿತರು. ನಮ್ಮ ಆತ್ಮೀಯ ಸ್ನೇಹಿತರಲ್ಲಿ ಒಮ್ಮೊಮ್ಮೆ ಗ್ಯಾಪ್ ಬರುತ್ತದೆ. ಸ್ನೇಹ ಅಂತಿಮವಾಗಿ ಗೆಲ್ಲುತ್ತದೆ. ಇದೆಲ್ಲಾ ಸರಿಯಾಗುತ್ತದೆ. ಜನಾರ್ದನ ರೆಡ್ಡಿ ಹತ್ತಿರ ಮಾತನಾಡುವೆ. ಪಕ್ಷದ ದೃಷ್ಟಿಯಿಂದ ಇಬ್ಬರ ಹತ್ತಿರ ಸೌಹಾರ್ದ ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ ಎಂದು ಹೇಳಿದರು.
ಯಲ್ಲಾಪುರ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಬೊಮ್ಮಾಯಿ ಸಾಂತ್ವನ
ಸವಣೂರು: ಯಲ್ಲಾಪುರ ಸಮೀಪ ಅರಬೈಲ್ ಘಾಟ್ ಹತ್ತಿರ ಟ್ರಕ್ ಪಲ್ಟಿಯಾಗಿ ಭೀಕರ ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಬೀದಿ ಬದಿ ವ್ಯಾಪಾರಸ್ಪರ ಕುಟುಂಬಸ್ಥರ ಮನೆಗೆ ಗುರುವಾರ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಅಪಘಾತದಲ್ಲಿ ಮೃತಪಟ್ಟ ಸವಣೂರ ಪಟ್ಟಣದ ಮಂಗಳವಾರ ಪೇಟೆಯ ನಿವಾಸಿ ಫಯಾಜ್ ಜಮಖಂಡಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೇರಿದ್ದ ಅಪಘಾತದಲ್ಲಿ ಮೃತಪಟ್ಟ ಸರ್ವ ಕುಟುಂಬಸ್ಥರಿಗೆ ನಿಮ್ಮ ಜೊತೆಗೆ ಸದಾ ನಾನೀದ್ದೇನೆ. ಧೈರ್ಯ ತಂದುಕೊಳ್ಳಿ ಎಂದು ಸಾಂತ್ವನ ಹೇಳಿದರು.
ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರು ತೀರಾ ಕಡು ಬಡವರು. ದುಡಿಮೆಗೆ ಬೇರೆ ದಾರಿ ಇಲ್ಲದೇ ಅವರು ಊರು ಊರಿಗೆ ಹೋಗಿ ಸಂತೆ ವ್ಯಾಪಾರ ಮಾಡಿ ಅಲ್ಪಸ್ವಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಎದುರಿಗೆ ತಮ್ಮ ಗೋಳನ್ನು ತೋಡಿಕೊಂಡ ಸ್ಥಳೀಯ ಬೀದಿಬದಿ ವ್ಯಾಪಾರಸ್ಥರು, ಸವಣೂರ ಪಟ್ಟಣದಲ್ಲಿ ಬಹುತೇಕರು ಸಣ್ಣಪುಟ್ಟ ವ್ಯಾಪಾರಕ್ಕಾಗಿ ಊರು ಊರಿಗೆ ಹೋಗುವದನ್ನು ತಪ್ಪಿಸಲು ಕ್ಷೇತ್ರದಲ್ಲಿ ಬಡ ಕುಟುಂಬಗಳಿಗೆ ಉದ್ಯೋಗ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕುರ್ಚಿ ಭದ್ರತೆಗೆ ಕಾಂಗ್ರೆಸ್ ನಾಯಕರ ಆಟ: ಸಂಸದ ಬೊಮ್ಮಾಯಿ ಆರೋಪ
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ. ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಬೀದಿಬದಿ ವ್ಯಾಪಾರಸ್ಥರು, ಶುಕ್ರವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ಸವಣೂರಿನಿಂದ ಖಾನಕೊಣ, ಗೋವಾಕ್ಕೆ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಖಾನಕೊಣ, ಕಾರವಾರ, ಬಂಕಾಪುರ, ಸವಣೂರಿಗೆ ಬರಲು ಬಸ್ ವ್ಯವಸ್ಥೆ ಕಲಿಸಬೇಕು ಎಂದು ಕೋರಿಕೊಂಡರು.
ಬಿಜೆಪಿ ಮಹಿಳಾ ರಾಜ್ಯ ಕಾರ್ಯದರ್ಶಿ ಡಾ. ಶೋಭಾ ನಿಮಗೌಡ್ರ, ಸವಣೂರ ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಪ್ರಮುಖರಾದ ನಿಂಗಪ್ಪ ಮರಗಪನವರ, ಸಂಗಪ್ಪ ಯರೇಶೀಮಿ,ಚನ್ನಬಸಯ್ಯ ಪ್ರಭಯ್ಯನವರಮಠ ಬಿ.ಎಸ್.ಕೊಪ್ಪದ, ಶ್ರೀಕಾಂತ ಲಕ್ಷ್ಮೀಶ್ವರ, ಶ್ರೀಪಾದಗೌಡ ಪಾಟೀಲ, ಧರಿಯಪಗೌಡ ಪಾಟೀಲ, ಬಸವರಾಜ ಸವೂರ, ಭಾಷಾ ಗೋಳಸಂಗಿ, ಸುಲೇಮಾನ ಮುರಡಿ, ಅಬ್ದುಲನಿ ನದಾಫ, ಯೂನಿಸಖಾನ ಅಳ್ತಾವರ ಹಾಗೂ ಇತರರು ಇದ್ದರು. ಇದಕ್ಕೂ ಮೊದಲು ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು. ತದನಂತರ ಕುಟುಂಬದ ಸದಸ್ಯರೊಡನೆ ಮಾತನಾಡಿದರು. ಈ ಸಂದರ್ಭದಲ್ಲಿ ಕಿಮ್ ನಿರ್ದೇಶಕರಾದ ಡಾ. ಕಮ್ಮಾರ ಉಪಸ್ಥಿತರಿದ್ದರು.
