ವಂಶಪಾರಂಪರ್ಯ ರಾಜಕೀಯಕ್ಕೆ ಕೊನೆ ಹಾಡಬೇಕೆಂದು ಬಯಸುತ್ತಿರುವ ಪ್ರಧಾನಿ ಮೋದಿಗೆ ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಡೆ ಪರೋಕ್ಷ ಸವಾಲು ಹಾಕಿದ್ದಾರೆ.

ಮುಂಬೈ: ‘ನಾನು ವಂಶಪಾರಂಪರಿಕ ರಾಜಕೀಯದ (Dynastic Politics) ಪ್ರತೀಕ. ನಾನು ಜನರ ಹೃದಯದಲ್ಲಿ ಆಡಳಿತ ನಡೆಸಲು ಬಯಸಿದರೆ ಪ್ರಧಾನಿ ನರೇಂದ್ರ ಮೋದಿಗೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಬಿಜೆಪಿ ಕಾರ‍್ಯದರ್ಶಿ (Secretary) ಮತ್ತು ಮಹಾರಾಷ್ಟ್ರ ಮಾಜಿ ಸಚಿವೆ ಪಂಕಜಾ ಮುಂಡೆ ಹೇಳಿದ್ದಾರೆ. ಈ ಮೂಲಕ ವಂಶಪಾರಂಪರ್ಯ ರಾಜಕೀಯಕ್ಕೆ ಕೊನೆ ಹಾಡಬೇಕೆಂದು ಬಯಸುತ್ತಿರುವ ಮೋದಿಗೆ ಪರೋಕ್ಷ ಸವಾಲು ಹಾಕಿದ್ದಾರೆ. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನ (PM Modi Birthday) ನಡೆದ ಕಾರ‍್ಯಕ್ರಮದಲ್ಲಿ ಪಂಕಜಾ ಮುಂಡೆ ಈ ಮಾತನ್ನು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್‌ (Viral Video) ಆಗಿದ್ದು ಮಹಾರಾಷ್ಟ್ರ ರಾಜ್ಯ ಬಿಜೆಪಿಗೆ ಮುಜುಗರ ಉಂಟುಮಾಡಿದೆ. 

Add Asianetnews Kannada as a Preferred SourcegooglePreferred

ಭಾರತೀಯ ಜನತಾ ಪಕ್ಷದ ಕಾರ್ಯದರ್ಶಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಡೆ ಅವರು ತನ್ನನ್ನು ತಾನು ವಂಶಪಾರಂಪರಿಕ ರಾಜಕೀಯದ ಪ್ರತೀಕ ಎಂದು ಕರೆದುಕೊಂಡರು. ಹಾಗೂ ಜನರ ಹೃದಯದಲ್ಲಿ (Heart) ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ತನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕಿ ಹೇಳಿದ್ದಾರೆ. ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದರು ಎಂದು ತಿಳಿದುಬಂದಿದೆ.

ಇದನ್ನು ಓದಿ: ಬಿಜೆಪಿಗೆ ಬಿಗ್‌ ಶಾಕ್‌: ಕಮಲ ಪಾಳಯಕ್ಕೆ ಪಂಕಜಾ ಮುಂಡೆ ಗುಡ್‌ಬೈ?

ಆದರೆ, ತನ್ನ ಭಾಷಣದ ತುಣುಕು ವೈರಲ್‌ ಆಗುತ್ತಿದ್ದಂತೆ ಪಂಕಜಾ ಮುಂಡೆ ಹಾಗೂ ಮಹಾರಾಷ್ಟ್ರ ಬಿಜೆಪಿ ಸಚಿವರು ಸಮರ್ಥನೆ ಮಾಡಿಕೊಳ್ಳುವ ಯತ್ನ ಮಾಡಿದ್ದು, ಮಾಧ್ಯಮಗಳ ವಿರುದ್ಧವೇ ಗೂಬೆ ಕೂರಿಸಿದ್ದಾರೆ. ಸುದ್ದಿಗಳ ಸಂವೇದನಾಶೀಲತೆ ಎಂದು ಪಂಕಜಾ ಮುಂಡೆ ಮಾಧ್ಯಮದ ವಿರುದ್ಧವೇ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಪಂಕಜಾ ಮುಂಡೆ, "ಮೋದಿಜೀ ವಂಶಾಡಳಿತವನ್ನು ಕೊನೆಗಾಣಿಸಲು ಬಯಸುತ್ತಿದ್ದಾರೆ. ನಾನು ಕೂಡ ವಂಶಾಡಳಿತ ರಾಜಕಾರಣದ ಪ್ರತೀಕ. ಆದರೆ ನಾನು ನಿಮ್ಮ (ಜನರ) ಹೃದಯದಲ್ಲಿ ಇದ್ದರೆ ನನ್ನನ್ನು ಯಾರೂ ಮುಗಿಸಲು ಸಾಧ್ಯವಿಲ್ಲ, ಮೋದಿಜೀ ಕೂಡ." ಎಂದು ಹೇಳಿದ್ದರು. 

ಅಲ್ಲದೆ, ಯಾವುದೇ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳಬೇಕೆಂದು ಬಿಜೆಪಿ ನಾಯಕಿ ಮಕ್ಕಳಿಗೆ ಸಲಹೆ ನೀಡಿದರು ಮತ್ತು ಈ ವೇಳೆ ಪ್ರಧಾನಿ ಮೋದಿಯವರ ಉದಾಹರಣೆಯನ್ನು ನೀಡಿದರು. ಪ್ರಧಾನಿ ಮೋದಿ ಅವರು ತಮ್ಮ ಬಾಲ್ಯದ ಎಲ್ಲಾ ಸವಾಲುಗಳನ್ನು ಜಯಿಸಿದ್ದಾರೆ ಎಂದು ಹೇಳಿದರು. "ಸ್ಕೂಲ್ ಯೂನಿಫಾರ್ಮ್ ಖರೀದಿಸಲು ಸಹ ಅವರ ಬಳಿ ಹಣವಿರಲಿಲ್ಲ. ಆದ್ದರಿಂದ ದೊಡ್ಡ ಕನಸು ಕಾಣುವುದರಲ್ಲಿ ಯಾವುದೇ ತಪ್ಪಿಲ್ಲ’’ ಎಂದು ಪಂಕಜಾ ಮುಂಡೆ ಹೇಳಿದ್ದಾರೆ.

ಇದನ್ನೂ ಓದಿ: ಬಾಂಬ್ ಕಟ್ಟಿ ರಾಹುಲ್ ಅವರನ್ನೂ ಉಡಾಯಸಬೇಕಿತ್ತು: ಪಂಕಜಾ ಮುಂಡೆ!

ಪಂಕಜಾ ಮುಂಡೆ ಅವರ ಹೇಳಿಕೆಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ಬುಧವಾರ ಪಂಕಜಾ ಮುಂಡೆ, "ನನ್ನ ಭಾಷಣವು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಆಚರಿಸಲು ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳ ಭಾಗವಾಗಿತ್ತು. ಪ್ರಧಾನಿ ಮೋದಿಯವರ ಬಗ್ಗೆ ಒಂದೇ ಒಂದು ಸಾಲು ಇದೆ. ಜನರು ಸುದ್ದಿಗಳ 'ಸಂವೇದನಾಶೀಲತೆ'ಯಿಂದ ಸಮಯವನ್ನು ಕಂಡುಕೊಂಡರೆ, ಅವರು ನನ್ನ ಭಾಷಣದ ಸಂಪೂರ್ಣ ವಿಡಿಯೋ ನೋಡಬೇಕು’’ ಎಂದು ಬರೆದುಕೊಂಡಿದ್ದಾರೆ.

ಹಾಗೂ, "ಜಾತಿ ಅಥವಾ ಹಣಬಲವನ್ನು ಬಳಸದೆ ಹೊಸ ಶೈಲಿಯ ರಾಜಕೀಯದಿಂದ ಸಾರ್ವಜನಿಕವಾಗಿ ತಮ್ಮ ಸ್ಥಾನವನ್ನು ಪಡೆದುಕೊಳ್ಳುವಂತೆ ನಾನು ಜನರಿಗೆ ಮನವಿ ಮಾಡಿದ್ದೇನೆ. ನಾವು ಉತ್ತಮ ರಾಜಕೀಯ ಸಂಸ್ಕೃತಿಯ ಅಗತ್ಯವಿದೆ ಎಂದು ನಾನು ಮಕ್ಕಳ ಮುಂದೆ ಹೇಳುತ್ತಿದ್ದೆ ಮತ್ತು ಆ ಸಂದರ್ಭದಲ್ಲಿ ಪ್ರಧಾನಿ ಮೋದಿಜೀ ಅವರ ಹೆಸರು. ಉಲ್ಲೇಖಿಸಲಾಗಿದೆ," ಎಂದೂ ಟ್ವೀಟ್‌ ಮಾಡಿದ್ದಾರೆ.