Asianet Suvarna News Asianet Suvarna News

ಬಿಜೆಪಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌: ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್‌ ಕಸರತ್ತು..!

ಬಿಜೆಪಿಯ 21 ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಗದೀಶ ಗುಡಗುಂಟಿ ಮತ್ತು ಡಾ.ಉಮೇಶ ಮಹಾಬಳ ಶೆಟ್ಟಿಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ. 2023ರ ಚುನಾವಣೆಗೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ಇದ್ದು, ಹೈಕಮಾಂಡ್‌ ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳ ಆಂತರಿಕ ಮತದಾನ ಪ್ರಯೋಗ ನಡೆಸಿದೆ.

Huge Demand for BJP Ticket at Jamakhandi in Bagalkot grg
Author
First Published Apr 5, 2023, 8:59 PM IST

ಗುರುರಾಜ ವಾಳ್ವೇಕರ

ಜಮಖಂಡಿ(ಏ.05): ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಜಮಖಂಡಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಿಜೆಪಿಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಬರೋಬ್ಬರಿ 21 ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್‌ ಕೈ ಸೇರಿದ್ದು, ಗೆಲ್ಲುವ ಅಭ್ಯರ್ಥಿ ಆಯ್ಕೆಗೆ ಪಕ್ಷದೊಳಗೆ ಒಂದು ಸುತ್ತಿನ ಆಂತರಿಕ ಮತದಾನ ಪ್ರಕ್ರಿಯೆ ನಡೆದಿದೆ. ಇದನ್ನಾಧರಿಸಿ ಹೈಕಮಾಂಡ್‌ ಆಕಾಂಕ್ಷಿತರ ಪಟ್ಟಿಯನ್ನು ಒಂದಂಕಿಗೆ ಇಳಿಸಿದೆ. ಮೂವರ ಹೆಸರನ್ನು ಮುಂದಿಟ್ಟುಕೊಂಡು ಕವಡೆ ಹಾಕುತ್ತಿದೆ.

2018ರಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಕುಲಕರ್ಣಿ ಪರ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಚಾರ ನಡೆಸಿದರೂ ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ ಗೆಲುವು ಸಾಧಿಸಿದ್ದನ್ನು ಬಿಜೆಪಿ ಹೈಕಮಾಂಡ್‌ ಮರೆತಿಲ್ಲ. ಈಗ ಅವರ ಮಗ ಆನಂದ ನ್ಯಾಮಗೌಡ ವಿರುದ್ಧ ತುಸು ಅಳೆದು ತೂಗಿ ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆದಿದೆ. ಕಾರ್ಯಕರ್ತರ ಮತದಾನದಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿಗಳನ್ನು ಹಾಗೂ ರಾಜ್ಯ ವರಿಷ್ಠರು ಸೂಚಿಸಿದ ಪಟ್ಟಿಎರಡನ್ನೂ ತಾಳೆ ನೋಡಿ ಮೂವರು ಪ್ರಬಲರು ಈಗ ಸಿಕ್ಕಿದ್ದಾರೆ. ಆದರೆ, ಇದರಲ್ಲಿ ಸ್ವತಃ ಹೈಕಮಾಂಡೇ ಸ್ವಲ್ಪ ಗೊಂದಲಕ್ಕೆ ಒಳಗಾಗಿದೆ ಎಂಬ ಮಾತೂ ಕೇಳಿ ಬಂದಿದೆ. ಯಾರನ್ನೇ ಆಯ್ಕೆ ಮಾಡಿದರೂ ಬಂಡಾಯದ ಭೀತಿ ಕಾಡುತ್ತಿದೆ.

ಸಿದ್ದರಾಮಯ್ಯ ಮಾಜಿ ಕ್ಷೇತ್ರದ ಇನ್ ಸೈಡ್ ಸ್ಟೋರಿ..ತ್ರಿಕೋನ ಕದನಕ್ಕೆ ವೇದಿಕೆಯಾಗುತ್ತಾ ಬಾದಾಮಿ ?

ಬಿಜೆಪಿಯ 21 ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಗದೀಶ ಗುಡಗುಂಟಿ ಮತ್ತು ಡಾ.ಉಮೇಶ ಮಹಾಬಳ ಶೆಟ್ಟಿಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿವೆ. 2023ರ ಚುನಾವಣೆಗೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ಇದ್ದು, ಹೈಕಮಾಂಡ್‌ ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳ ಆಂತರಿಕ ಮತದಾನ ಪ್ರಯೋಗ ನಡೆಸಿದೆ.

ಆದರೆ, ಅಭ್ಯರ್ಥಿ ಘೋಷಣೆ ಆಗದಿರುವುದರಿಂದ ಬಿಜೆಪಿ ಪ್ರಚಾರ ಹಿಂದುಳಿದಿದೆ. ಆದರೂ ಈ ಬಾರಿ ಪಕ್ಷದಿಂದ ಯಾರಿಗೇ ಟಿಕೆಟ್‌ ಲಭಿಸಿದರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಗೆಲುವು ತಂದುಕೊಳ್ಳಬೇಕು ಎಂದು ವರಿಷ್ಠರು ಕೂಡ ಸೂಚಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡ ಮೊದಲ ಸುತ್ತಿನ ಪ್ರಚಾರ ಮುಗಿಸಿ 2ನೇ ಸುತ್ತಿನ ಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿ ಕಾರ್ಯಕರ್ತರÜಲ್ಲಿ ಮುಜುಗರ ಉಂಟಾಗುತ್ತಿದೆ.

ಆಣೆ-ಪ್ರಮಾಣ:

ಕಳೆದ ಮೂರು ಚುನಾವಣೆಗಳಲ್ಲಿ ಗುಂಪುಗಾರಿಕೆಯಿಂದಾಗಿಯೇ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಈ ತಪ್ಪು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಆಕಾಂಕ್ಷಿಗಳೆಲ್ಲ ಒಗ್ಗಟ್ಟಾಗಿ ದೇವರ ಮುಂದೆ ಆಣೆ ಪ್ರಮಾಣ ಮಾಡಿದ್ದಾರೆ. ಯಾರಿಗೇ ಟಿಕೆಟ್‌ ಸಿಕ್ಕರೂ ನಾವೆಲ್ಲ ಒಗ್ಗಟ್ಟಾಗಿ ಪಕ್ಷವನ್ನು ಗೆಲ್ಲಿಸುವ ಮಾತುಕತೆ ನಡೆಸಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದೆ.

ಮೋದಿ ಬಂದ್ರೂ ಗೆಲ್ಲಲಿಲ್ಲ ಅಭ್ಯರ್ಥಿ

2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಅಂದಿನ ಕೇಂದ್ರ ಮಾಜಿ ಸಚಿವ ಕಾಂಗ್ರೆಸ್‌ನ ದಿ.ಸಿದ್ದು ನ್ಯಾಮಗೌಡ ಕೂದಲೆಳೆ ಅಂತರದಿಂದ ಗೆಲವು ಸಾಧಿಸಿದ್ದು ಇತಿಹಾಸ. ನಂತರ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಅನುಕಂಪದ ಅಲೆ ಮೇಲೆ ಅವರ ಪುತ್ರ ಆನಂದ ನ್ಯಾಮಗೌಡ ಭಾರೀ ಅಂತರದ ಗೆಲುವು ಸಾಧಿಸಿದ್ದರು.

ನೇರ ಹಣಾಹಣಿ:

ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆಯೇ ನೇರಾ ನೇರ ಹಣಾಹಣಿ. ಕಳೆದ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡ ವಿರುದ್ಧ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಈ ಬಾರಿಯೂ ಬಹುತೇಕ ಇವರಿಬ್ಬರ ಮಧ್ಯೆಯೇ ನೇರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂಬ ಮಾತು ಜನಜನಿತವಾಗಿದೆ.

Karnataka Assembly Elections 2023: ತೇರದಾಳ ಕಾಂಗ್ರೆಸ್‌ ಬಚಾವೋ..ಉಮಾಶ್ರೀ ಹಟಾವೋ..!

21 ಆಕಾಂಕ್ಷಿತರು...

ಬಿಜೆಪಿ 21 ಆಕಾಂಕ್ಷಿಗಳ ಪೈಕಿ ಪೈಕಿ ಪ್ರಮುಖವಾಗಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಉದ್ಯಮಿ ಜಗದೀಶ ಗುಡಗುಂಟಿ, ಡಾ.ಉಮೇಶ ಮಹಾಬಳ ಶೆಟ್ಟಿ, ಬಸವರಾಜ ಸಿಂಧೂರ, ಡಾ.ವಿಜಯಲಕ್ಷ್ಮಿ ತುಂಗಳ, ಡಾ.ರಂಗನಾಥ ಸೋನ್ವಾಲಕರ, ಸಿ.ಟಿ.ಉಪಾಧ್ಯೆ, ಬಸವರಾಜ ಕಲೂತಿ, ಉಮೇಶ ಆಲಮೇಲ್ಕರ, ಆನಂದ ಇಂಗಳಗಾವಿ, ಸದಾಶಿವ ಕವಟಗಿ, ಜಿಪಂ ಮಾಜಿ ಸದಸ್ಯೆ ಮಹಾದೇವಿ ಮೂಲಿಮನಿ, ಶೈಲೇಶ ಅಪ್ಟೆ, ಮೋಹನ ಜಾಧವ, ಜಿ.ಎಸ್‌.ನ್ಯಾಮಗೌಡ, ಜಯಲಕ್ಷ್ಮಿ ಉಕುಮನಾಳ, ಬಸವರಾಜು ಬಿರಾದಾರ್‌, ಸುಜಾತಾ ಸಿಂಧೆ, ಬಾಲಚಂದ್ರ ನಾಗೋಣಿ, ಮಲ್ಲಿಕಾರ್ಜುನ ಬಾಡಗಿ, ರಾಜೂಗೌಡ ಪಾಟೀಲ ಇದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios