ಎಸ್ಡಿಪಿಐ ಬೆಂಬಲಿತ ಕಾಂಗ್ರೆಸ್ ಸರ್ಕಾರದಲ್ಲಿ ಜನ ಸುರಕ್ಷತೆವೇ?: ಅಮಿತ್ ಶಾ
ಎಸ್ ಡಿಪಿಐ ಪಕ್ಷದ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆ ಪಕ್ಷ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಅನ್ನು ಬೆಂಬಲ ನೀಡಿರುವ ಮಾಹಿತಿ ಬಂದಿದೆ. ಈ ಬಗ್ಗೆ ಮತದಾರರೂ ಆಲೋಚನೆ ಮಾಡಬೇಕು. ಇದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕೆಂದು ಪರೋಕ್ಷವಾಗಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
![How People Safety in SDPI Supported Congress Government Says Amit Shah grg How People Safety in SDPI Supported Congress Government Says Amit Shah grg](https://static-ai.asianetnews.com/images/01hsf8scseygc6a7y83f6z7gkm/AMIT-SHAH-BJP-1710983263022_363x203xt.jpg)
ಚನ್ನಪಟ್ಟಣ(ಏ.03): ಲೋಕಸಭಾ ಚುನಾವಣೆಗಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ)ದವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಮಾತು ನಿಜವಾಗಿದ್ದರೆ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಕರ್ನಾಟಕದ ಜನರು ಸುರಕ್ಷತೆಯಿಂದ ಇರಲು ಸಾಧ್ಯವೇ? ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು. ಕಾಂಗ್ರೆಸ್ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೊಂಬೆನಾಡು ಚನ್ನಪಟ್ಟಣದಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಮಂಗಳವಾರ ಸಂಜೆ ಭರ್ಜರಿ ರೋಡ್ ಶೋ ಮಾಡುವ ಮೂಲಕ ಮತಬೇಟೆ ನಡೆಸಿದರು.
ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ , ಜೆಡಿಎಸ್ ನಾಯಕ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಅಮಿತ್ ಶಾ ತೆರೆದ ವಾಹನದಲ್ಲಿ ೧ ಕಿಮೀ ರೋಡ್ ಶೋ ನಡೆಸಿ ಮತದಾರರನ್ನು ಸೆಳೆದರು.
ಚನ್ನಪಟ್ಟಣದಲ್ಲಿ ಬೈ ಎಲೆಕ್ಷನ್ ಆದ್ರೂ ಯೋಗೇಶ್ವರ್ಗೇನು ಟಿಕೆಟ್ ಸಿಗಲ್ಲ: ಬಾಲಕೃಷ್ಣ
ನಂತರ ನಗರದ ಗಾಂಧಿ ಭವನ ವೃತ್ತದಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್ ಡಿಪಿಐ ಪಕ್ಷದ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆ ಪಕ್ಷ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಅನ್ನು ಬೆಂಬಲ ನೀಡಿರುವ ಮಾಹಿತಿ ಬಂದಿದೆ. ಈ ಬಗ್ಗೆ ಮತದಾರರೂ ಆಲೋಚನೆ ಮಾಡಬೇಕು. ಇದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕೆಂದು ಪರೋಕ್ಷವಾಗಿ ಹೇಳಿದರು.
ಪ್ರಧಾನಿ ಮೋದಿಯವರು 10 ವರ್ಷಗಳಲ್ಲಿ ದೇಶವನ್ನು ಸುರಕ್ಷತೆಯಿಂದ ಕಾಪಾಡುವ ಜೊತೆಗೆ ಭಾರತದ ಆರ್ಥಿಕತೆಯನ್ನು 11 ರಿಂದ 5 ನೇ ಸ್ಥಾನಕ್ಕೆ ತರುವ ಕೆಲಸ ಮಾಡಿದ್ದಾರೆ. ಮೋದಿ ಅವರನ್ನು 3ನೇ ಬಾರಿ ಪ್ರಧಾನಿ ಮಾಡಿದರೆ ದೇಶದ ಅರ್ಥ ವ್ಯವಸ್ಥೆಯನ್ನು 5ರಿಂದ 3ನೇ ಸ್ಥಾನಕ್ಕೆ ತರುತ್ತಾರೆ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.
ಮೋದಿಯವರು 23 ವರ್ಷ ಮುಖ್ಯಮಂತ್ರಿಯಾಗಿ, 10 ವರ್ಷ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಮೇಲೆ 1 ರುಪಾಯಿಯ ಭ್ರಷ್ಟಾಚಾರದ ಆರೋಪ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷ 12 ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28ಕ್ಕೆ 28 ಸ್ಥಾನಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸವನ್ನು ಮತದಾರರು ಮಾಡಬೇಕು. ನೀವು ರೈತ ಮಹಿಳೆ ಅಥವಾ ಕಮಲಕ್ಕೆ ವೋಟು ಹಾಕಿದರೂ ಆ ಮತ ಮೋದಿಯವರಿಗೆ ಚಲಾಯಿಸಿದಂತೆ ಆಗುತ್ತದೆ. ಮೋದಿಯವರು 400ಕ್ಕೂ ಹೆಚ್ಚು ಸಂಸದರನ್ನು ಗೆಲ್ಲಿಸಿ ದೇಶವನ್ನು ಮುನ್ನಡೆಸಲು ಅವಕಾಶ ನೀಡುವಂತೆ ಕರೆ ನೀಡಿದ್ದಾರೆ. ಇಡೀ ದೇಶ ಮೋದಿ ಪರವಾಗಿದೆ. ಮೋದಿ ಅವರಂತಹ ಪ್ರಾಮಾಣಿಕ ಪ್ರಧಾನಿ, ಮಂಜುನಾಥ್ ಅವರಂತರ ಸೇವಾಮನೋಭಾವದ ಅಭ್ಯರ್ಥಿ ನಮ್ಮಲ್ಲಿದ್ದಾರೆ ಎಂದು ಹೇಳಿದರು.
ಮೋದಿ ಹೆಸರಲ್ಲಿ ಮತ ಕೇಳುವೆ: ಬಿಜೆಪಿ ಅಭ್ಯರ್ಥಿ ಸಿ.ಎನ್.ಮಂಜುನಾಥ್
ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು, ಡಾ.ಸಿ.ಎನ್ .ಮಂಜುನಾಥ್ ಅವರನ್ನು ಗೆಲ್ಲಿಸುವ ಮೂಲಕ ಶಕ್ತಿ ತುಂಬಬೇಕು. ರೋಡ್ ಶೋ ನಲ್ಲಿ ವ್ಯಕ್ತವಾಗಿರುವ ಜನ ಬೆಂಬಲ ನೋಡಿದರೆ ಈ ಚುನಾವಣೆಯಲ್ಲಿ ಮಂಜುನಾಥ್ ರವರು 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಅಮಿತ್ ಶಾ ಹೇಳಿದರು.
ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ , ಮಾಜಿ ಶಾಸಕ ಎ.ಮಂಜುನಾಥ್ , ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಮತ್ತಿತರರು ಭಾಗವಹಿಸಿದ್ದರು.