ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಚರ್ಚೆ ಮಾಡುವ ಎಷ್ಟು ವಿಷಯಗಳು, ಶೇಕಡಾವಾರು ಎಷ್ಟು ಅನುಕೂಲ ಅಥವಾ ಜಾರಿಯಾಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಮಂಡ್ಯ (ಡಿ. 21): ವಿಧಾನಸಭೆ ಅಧಿವೇಶನಗಳು ನಡೆಯುತ್ತವೆ. ಅಧಿವೇಶನದಲ್ಲಿ ಶಾಸಕರು ಚರ್ಚೆ ಮಾಡುವ ಎಷ್ಟು ವಿಷಯಗಳು, ಶೇಕಡಾವಾರು ಎಷ್ಟು ಅನುಕೂಲವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

Add Asianetnews Kannada as a Preferred SourcegooglePreferred

ನಮ್ಮ ರಾಜ್ಯದ ಶಿಕ್ಷಣ ಇಲಾಖೆ ಬಗ್ಗೆ ಕೇಂದ್ರ ಸರ್ಕಾರ ವರದಿಯೊಂದನ್ನು ನೀಡಿದೆ. ದೇಶದಲ್ಲೇ ಕರ್ನಾಟಕದೊಳಗೆ ಅತ್ಯಂತ ಕನಿಷ್ಠ ಮಟ್ಟದ ತೀರ್ಮಾನಗಳಾಗಿವೆ. ಶಿಕ್ಷಣ ಇಲಾಖೆಯಲ್ಲಿ ಶೇ.57 ರಷ್ಟು ಹುದ್ದೆಗಳು ಖಾಲಿ ಇವೆ. ಶಿಕ್ಷಣ ಇಲಾಖೆಯೊಂದರಲ್ಲೇ ಈ ಪರಿಸ್ಥಿತಿ ಇದ್ದರೆ ಉಳಿದ ಇಲಾಖೆಗಳಲ್ಲಿ ಇನ್ನೆಂತಹ ಪರಿಸ್ಥಿತಿ ಇರಬಹುದು ಎಂದು ದುಗ್ಗನಹಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಇಲಾಖೆಗಳಲ್ಲಿ ಬೇಡಿಕೆ ಇರುವಷ್ಟು ಹುದ್ದೆಗಳನ್ನು ಭರ್ತಿ ಮಾಡದೆ ನೀವು ಎಷ್ಟು ಕೋಟಿ ಹಣ ಇಟ್ಟು, ಎಷ್ಟು ಬಾರಿ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದರೆ ಎಲ್ಲಿಂದ ಗುಣಾತ್ಮಕ ಕೆಲಸವಾಗಲು ಸಾಧ್ಯ ಎಂದು ಹೇಳಿದರು.

Assembly election: 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚಿನ್ನದ ತಗಡು ಹೊಡೆಸಿಟ್ಟುಕೊಳ್ಳಲಿ: ಜೆಡಿಎಸ್ ಪ್ರಾಬಲ್ಯ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಸಿದ ಕುಮಾರಸ್ವಾಮಿ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ನಂಬಿಕೆ ಅವರಿಗೆ ಹೇಗಿದೆಯಂತೆ. ಕಾಂಗ್ರೆಸ್ಸಿಗರು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯನ್ನು ಚಿನ್ನದ ತಗಡು ಹೊಡೆಸಿಕೊಂಡು ಮನೆ ಮತ್ತು ಕಚೇರಿಯಲ್ಲಿ ಹಾಕಿಕೊಳ್ಳಲಿ. ನಿತ್ಯ ಅದನ್ನ ನೋಡಿಕೊಂಡು ಆನಂದಪಡಲಿ ಎಂದು ವ್ಯಂಗ್ಯವಾಡಿದರು.

ಪರ್ಸೆಂಟೇಜ್‌ಗಾಗಿ ನೇರ ಸ್ಪರ್ಧೆ: ಕಾಂಗ್ರೆಸ್ ಮತ್ತು ಬಿಜೆಪಿ ಪರ್ಸೆಂಟೇಜ್‌ಗಾಗಿ ಪೈಪೋಟಿ ನಡೆಸುತ್ತಿವೆ. ಈ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಸ್ಪರ್ಧೆ ಇರೋದು ಸತ್ಯ. ಚುನಾವಣೆ ಗೆಲ್ಲುವುದಕ್ಕಾಗಿ ಸ್ಪರ್ಧೆ ಇಲ್ಲ. ಅಧಿಕಾರಕ್ಕೆ ಬಂದ್ರೆ ಎಷ್ಟು ಪರ್ಸಂಟೇಜ್ ಪಡೆಯಲಿ ಎನ್ನುವುದಕ್ಕಷ್ಟೇ ಸ್ಪರ್ಧೆ ಇರೋದು ಎಂದು ಕುಹಕವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮೂರು ಬಾರಿ ಅಧಿಕಾರ ನಡೆಸಿದೆ. ಅದಾದ ನಂತರ 1994ರಲ್ಲಿ 38, 2004ರಲ್ಲಿ 62, 2018ರಲ್ಲಿ 78 ಸ್ಥಾನ ಪಡೆಯಿತು. ಅವರಿಗೆ ರಾಜ್ಯದಲ್ಲಿ ಗೆಲ್ಲುವ ಶಕ್ತಿ ಇರೋದೇ 50ರಿಂದ 70 ಸ್ಥಾನಗಳಲ್ಲಿ ಮಾತ್ರ. ಅವರಿಗೆ ಬಹುಮತ ಬರುವ ಸ್ಥಿತಿ ಇದ್ದರೆ ಇನ್ನೂ ಯಾಕೆ ಜೆಡಿಎಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದೀರಾ, ಸಂಪೂರ್ಣ ಬಹುಮತ ಬರುತ್ತೆ ಎಂಬ ವಿಶ್ವಾಸವಿರೋರು ಇನ್ನೂ ಜೆಡಿಎಸ್ ಹಲವರ ಮನೆ ಏಕೆ ಕಾಯುತ್ತಿದ್ದೀರಾ ಎಂದು ಕುಟುಕಿದರು.

Karnataka Politics : ಚನ್ನಪಟ್ಟಣದಲ್ಲಿ ಜೆಡಿಎಸ್‌ ಬಲ ಪ್ರದರ್ಶನ

ಜೆಡಿಎಸ್‌ಗೆ ಬಹುಮತ ಬರೋದು ಖಚಿತ : ಇವತ್ತೇ ನಾನು ಹೇಳ್ತಿದ್ದೀನಿ ಬರೆದಿಟ್ಟುಕೊಳ್ಳಿ. ಮುಂದಿನ ಚುನಾವಣೆಯಲ್ಲಿ ರಾಜ್ಯದೊಳಗೆ ಜನತಾದಳದ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ. ಈ ಬಾರಿ ಮೈತ್ರಿ ಸರ್ಕಾರ ರಚನೆಯಾಗುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರೋದನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಂದ ತಡೆಯಲಾಗುವುದಿಲ್ಲ ಎಂದು ದೃಢವಾಗಿ ಹೇಳಿದರು.