ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರಧಾನಿ ಮೋದಿ ನೆಹರು ಅವರ ಅರ್ಧದಷ್ಟು ಕೆಲಸ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಇದರೊಂದಿಗೆ, ಬೆಂಗಳೂರಿನ ಪಬ್‌ಗಳಿಗೆ ಗುರುತಿನ ಚೀಟಿ ಕಡ್ಡಾಯ, ಬಿಟ್‌ಕಾಯಿನ್ ಪ್ರಕರಣದ ತನಿಖೆ ಮತ್ತು ಚುನಾವಣಾ ಆಯೋಗದ ದುರ್ಬಳಕೆ ಬಗ್ಗೆಯೂ ಮಾತನಾಡಿದ್ದಾರೆ.

ಬೆಂಗಳೂರು (ಜೂ.11): ಪ್ರಧಾನಿಯಾಗಿ ಮೋದಿ(PM Modi) ಅವರು ನೆಹರು(Neharu) ದಿನಗಳ ದಾಖಲೆ ಮುರಿದರೆ ಆಗಲ್ಲ. ನೆಹರು ಅವರು ಮಾಡಿರುವ ಅರ್ಧದಷ್ಟು ಕೆಲಸ ಮೋದಿ ಮಾಡಿದ್ದಾರೆಯೇ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಇಷ್ಟು ವರ್ಷಗಳ ಆಡಳಿತಾವಧಿಯಲ್ಲಿ ಒಂದು ಇಸ್ರೋ ಸಂಸ್ಥೆ, ಒಂದು ಐಐಟಿ ಸಂಸ್ಥೆ ಕಟ್ಟಿದ್ದಾರೆಯೇ? ನೆಹರು ಅಧಿಕಾರ ವಹಿಸಿಕೊಂಡಾಗ ಆರ್ಥಿಕ ಪರಿಸ್ಥಿತಿಗಳು ಹೇಗಿತ್ತು. ಈಗ ಹೇಗಿದೆ ಸ್ವಲ್ಪ ತುಲನೆ ಮಾಡಲಿ ಎಂದರು.

ಗುರುತಿನ ಚೀಟಿ ಕಡ್ಡಾಯ:

ಪಬ್‌ ಹಾಗೂ ಬಾರ್‌ಗಳಿಗೆ ವಿದ್ಯಾರ್ಥಿಗಳು ಹೋಗುತ್ತಾರೆ ಎಂಬ ಬಗ್ಗೆ ಪೋಷಕರಿಂದ ಹಲವಾರು ದೂರು ಬಂದ ಹಿನ್ನೆಲೆಯಲ್ಲಿ ಪ್ರವೇಶಕ್ಕೆ ಗುರುತಿನ ಚೀಟಿ ಪರೀಕ್ಷಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆಕಸ್ಮಾತ್ ನಿಯಂತ್ರಿಸದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಿದ್ದೇವೆ. ಹಿಂದಿನ ಮುಖ್ಯಮಂತ್ರಿ ಇರಬಹುದು ಅಥವಾ ಹಾಲಿ ಮುಖ್ಯಮಂತ್ರಿ ಇರಬಹುದು. ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವರ ಖಾತೆ ಹಂಚಿಕೆ ಗೊಂದಲ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಏನೇ ಇದ್ದರೂ ವರಿಷ್ಠರು ತೀರ್ಮಾನ ಮಾಡುತ್ತಾರೆ. ಎಲ್ಲರನ್ನೂ ಸಮಾಧಾನ ಮಾಡಲು ದೇವರಿಂದಲೂ ಆಗುವುದಿಲ್ಲ, ನಮ್ಮಿಂದ ಆಗುತ್ತಾ? ಸದ್ಯ ಯಾವುದೇ ಗೊಂದಲ ಇಲ್ಲ. ರಾಮಲಿಂಗಾರೆಡ್ಡಿ ಹಾಗೂ ಕೆ.ಎಚ್‌. ಮುನಿಯಪ್ಪ ಅವರು ಸಹ ಸಮಾಧಾನ ಆಗಿದ್ದಾರೆ. ಕೃಷ್ಣ ಬೈರೇಗೌಡರು ಬೇರೆ ಯಾವುದೋ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆಂಬ ಮಾಹಿತಿ ಇದೆ. ಏನಾದರೂ ಸಮಸ್ಯೆ ಇದ್ದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದು ಹೇಳಿದರು.

ನಾಮಪತ್ರ ಕದಿಯುತ್ತಿದ್ದಾರೆ:

ಮಧ್ಯಪ್ರದೇಶ ರಾಜ್ಯಸಭೆ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ತಿರಸ್ಕರಿಸಿರುವುದನ್ನು ನೋಡಿದರೆ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಹತೋಟಿಯಲ್ಲಿ ತೆಗೆದುಕೊಂಡಿದ್ದಾರೆ. ಇವಿಎಂನಲ್ಲಿ ಪ್ರಯತ್ನಿಸಿ ಸಿಕ್ಕಿ ಹಾಕಿಕೊಂಡರು, ನಂತರ ನೇಮಕಾತಿಯಲ್ಲಿ ಬದಲಾವಣೆ ಮಾಡಿದರು. ಎಸ್‌ಐಆರ್‌ ನಂತರ ವೋಟ್‌ ಚೋರಿ ಮಾಡಿದರು. ಈಗ ನಾಮಪತ್ರ ಕದಿಯುತ್ತಿದ್ದಾರೆ ಎಂದು ಟೀಕಿಸಿದರು.