ಎಚ್.ಎನ್.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣದ ಪರವಾಗಿ ಶಾಸಕನಾಗುವ ಮೊದಲೂ ಇದ್ದೆ, ಈಗಲೂ ಇದ್ದೇನೆ. ನನ್ನ ಬದ್ಧತೆಯಲ್ಲಿ ಬದಲಾವಣೆಯಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ಚಿಕ್ಕಬಳ್ಳಾಪುರ (ಮಾ.09): ಎಚ್.ಎನ್.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣದ ಪರವಾಗಿ ಶಾಸಕನಾಗುವ ಮೊದಲೂ ಇದ್ದೆ, ಈಗಲೂ ಇದ್ದೇನೆ. ನನ್ನ ಬದ್ಧತೆಯಲ್ಲಿ ಬದಲಾವಣೆಯಿಲ್ಲ. ಶೀಘ್ರವೇ ಸಂಸದ, ಸಚಿವ, ಶಾಸಕರ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕೊಂಡೊಯ್ಯಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಪರೀಕ್ಷೆ ಎದುರಿಸುವುದು ಹೇಗೆ’ ಎಂಬ ಬಗ್ಗೆ ಪ್ರೇರಣಾ ಭಾಷಣ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.

Add Asianetnews Kannada as a Preferred SourcegooglePreferred

ಕೋಲಾರ- ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಖಂಡಿತ ಈ ಕೆಲಸ ಆಗಲಿದೆ. ಆದರೂ ಎಚ್.ಎನ್.ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಮೇಲೂರು ರವಿಕುಮಾರ್, ಗೌರಿಬಿದನೂರು ಪುಟ್ಟಸ್ವಾಮಿಗೌಡ, ಬಾಗೇಪಲ್ಲಿಯ ಎಸ್.ಎನ್.ಸುಬ್ಬಾರೆಡ್ಡಿ ಅವರ ಸಹಕಾರ ಪಡೆದು ಈ ಕೆಲಸ ಮಾಡಲಾಗುವುದು. ಈ ನೀರಿನ ಅಪಾಯಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

3ನೇ ಹಂತದ ಶುದ್ಧೀಕರಣ ಎಂಬುದು ಪಾಲಿಸಿ ಮ್ಯಾಟರ್ ಆಗಿದ್ದು, ನನ್ನೊಬ್ಬನಿಂದ ಆಗುವಂತಹುದಲ್ಲ. ನನಗೆ ಇನ್ನಷ್ಟು ಶಕ್ತಿ ಬಂದಾಗ ಖಂಡಿತ ಇದನ್ನು ಮಾಡಿಸಿಯೇ ಮಾಡಿಸುತ್ತೇನೆ. ಇದು ಏಕಾಏಕಿ ಇವತ್ತು ಹೇಳಿ ನಾಳೆ ಆಗುವಂತಹುದಲ್ಲ. 16- 17 ವರ್ಷಗಳ ಹಿಂದೆ ಪ್ರಾಜೆಕ್ಟ್ ರೆಡಿಯಾದರೆ ಈಗ ಎತ್ತಿನಹೊಳೆ ಯೋಜನೆ ಸಾಕಾರವಾಗುತ್ತಿದೆ. ಹೀಗಾಗಿ ನಾನೂ ಕೂಡ 3ನೇ ಹಂತದ ಶುದ್ಧೀಕರಣದ ಪರವಾಗಿ ಇದ್ದೇನೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು.

ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೇಲೇ ಪ್ರಥಮ ಸ್ಥಾನದಲ್ಲಿ ನಿಲ್ಲಲಿದೆ

ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ಈ ಬಾರಿಯ ಎಸ್ಎಸ್ಎಲ್ ಸಿ ,ಪಿಯುಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲಲಿದೆ ಎಂಬ ವಿಶ್ವಾಸವಿದೆ. ಸರ್ಕಾರಿ ಶಾಲೆಯ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ ಎಂದರು.

ಐಐಟಿ, ಏಮ್ಸ್ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸುವ ಕನಸು ಕಾಣಲಾಗಿದೆ. ನಮ್ಮ ಸರ್ಕಾರ ಇದನ್ನು ಮಾಡಿಯೇ ತೀರಲಿದೆ. ಈ ಬಾರಿಯ ಪರೀಕ್ಷೆಯಲ್ಲಿ ನನ್ನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿನೂತನ ಮಾದರಿಗಳನ್ನು ಅಳವಡಿಸಿದ್ದು, ಇವೆಲ್ಲಾ ಫಲಿತಾಂಶ ಸುಧಾರಣೆಗೆ ಅವಕಾಶ ಮಾಡಿ ಕೊಡಲಿವೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕ‌ರ್, ಡಿಡಿಪಿಐ ರಮೇಶ್‌, ಬಿಇಒ ಸುಕನ್ಯಾ, ಶಿಕ್ಷಕರು,ವಿದ್ಯಾರ್ಥಿಗಳು. ಮತ್ತಿತರರು ಇದ್ದರು.