ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಯಾರೋ ದೊಡ್ಡ ಅಮಿಷವನ್ನು ತೋರಿಸಿ ಅಮಾಯಕರನ್ನು ಬಲಿ ತೆಗೆದುಕೊಂಡರೇ ಹೇಗೆ ಎಂದು ಪರೋಕ್ಷವಾಗಿ ಸಂತೋಷ್‌ ಆತ್ಮಹತ್ಯೆ ಹಿಂದೆ ಕಾಂಗ್ರೆಸ್‌ ಕೈವಾಡ ಇರಬಹುದೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಚಿಕ್ಕಬಳ್ಳಾಪುರ (ಏ.14): ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ (Santosh Patil Suicide Case) ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಯಾರೋ ದೊಡ್ಡ ಅಮಿಷವನ್ನು ತೋರಿಸಿ ಅಮಾಯಕರನ್ನು ಬಲಿ ತೆಗೆದುಕೊಂಡರೇ ಹೇಗೆ, ಇಂತಹ ವಿಪಕ್ಷಗಳ ವಿರುದ್ಧವೂ ಕೂಡ ನಾವು ತನಿಖೆ ಮಾಡಬೇಕಾದ ಅಗತ್ಯವಿದೆ ಎಂದು ಪರೋಕ್ಷವಾಗಿ ಸಂತೋಷ್‌ ಆತ್ಮಹತ್ಯೆ ಹಿಂದೆ ಕಾಂಗ್ರೆಸ್‌ (Congress) ಕೈವಾಡ ಇರಬಹುದೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ಹೇಳಿದರು.

Add Asianetnews Kannada as a Preferred SourcegooglePreferred

ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆಯಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌. ಭ್ರಷ್ಟಾಚಾರ ಬಗ್ಗೆ ಯಾವುದೇ ಪುರಾವೆ ಇಲ್ಲದೇ ಆರೋಪ ಮಾಡುತ್ತಿದ್ದಾರೆ. ಕೂಡಲೇ ಅವರ ಗುತ್ತಿಗೆ ಲೈಸೆನ್ಸ್‌ ರದ್ದುಪಡಿಸಿ, ಕಪ್ಪುಗೆ ಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿಗೆ ಆಗ್ರಹಿಸಿದ ಸುಧಾಕರ್‌ ಅವರು, ಕೆಂಪಣ್ಣ ವಿರುದ್ದ ಮಾನನಷ್ಟಮೊಕ್ದಮೆ ಹೂಡುತ್ತೇನೆಂದರು.

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಪಾಪ ಅಮಾಯಕರ ಜನ ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಆಸೆ ತೋರಿಸಿ ಇಂತಹ ಮಂತ್ರಿ ಮೇಲೆ ಆರೋಪ ಮಾಡುವಂತೆ ಪ್ರಚೇದಿಸಿ ಅವರ ಜೀವಕ್ಕೆ ಕುತ್ತು ತರುವ ಕೆಲಸ ಪ್ರಯತ್ನಗಳು ರಾಜಕಾರಣದಲ್ಲಿ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಿದೆ. ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ ಎಂದರು.

ತತ್ವಜ್ಞಾನಿಯಂತೆ ಮೋದಿ ಕೆಲಸ: ಸುಧಾಕರ್‌

ತಕ್ಷಣ ರಾಜೀನಾಮೆ ಬೇಡ: ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ ಕೇಳುವುದು ಸದ್ಯಕ್ಕೆ ಸರಿಯಲ್ಲ. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ನಮಗೂ ನೋವು ತಂದಿದೆ. ಆದರೆ ಆತ್ಮಹತ್ಯೆ ಏಕೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಯದೇ ಒಬ್ಬ ಮಂತ್ರಿ ರಾಜೀನಾಮೆ ಕೇಳುವುದು ಎಷ್ಟುಸರಿ, ತನಿಖೆ ನಡೆದು ಸತ್ಯಾಸತ್ಯತೆ ಹೊರ ಬರಲಿ. ಆ ನಂತರವಷ್ಟೇ ಅವರು ರಾಜೀನಾಮೆ ಕೊಡಬೇಕಾ ಬೇಡವಾ ಎನ್ನುವುದನ್ನು ನಿರ್ಧಾರ ಆಗುತ್ತದೆ ಎಂದರು.

ಕಾಂಗ್ರೆಸ್‌ ಪ್ರತಿ ವಿಷಯದಲ್ಲಿ ರಾಜಕಾರಣ ಬೆರಸಲಿಕ್ಕೆ ಹೋಗುತ್ತಿದೆ. ಇವರು ಎಷ್ಟುಸತ್ಯಹರಿಶ್ಚಂದ್ರರರು ಎನ್ನುವುದು ಕೂಡ ರಾಜ್ಯದ ಜನತೆಗೆ ಗೊತ್ತಿದೆ. ಯಾವ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆಂಬುದನ್ನು ಅಂಕಿ, ಅಂಶಗಳ ಸಮೇತ ನೀಡಬೇಕಾಗುತ್ತದೆ. ಇವರ ಟೊಳ್ಳು ಬೆದರಿಕೆಗಳ ಬಗ್ಗೆ ನಾವು ಅಂಜಬೇಕಿಲ್ಲ. ಡಿ.ಕೆ.ರವಿ ಸತ್ತಾಗ, ಡಿವೈಎಸ್‌ಪಿ ಗಣಪತಿ ಸತ್ತಾಗ ಇವರು ಏಕೆ ರಾಜೀನಾಮೆ ಕೊಡಲಿಲ್ಲ ಎಂದರು.

ಇನ್ನೂ ಸುಮ್ಮನ್ನೆ ಕೂರಲ್ಲ: ರಾಜ್ಯ ಸರ್ಕಾರವನ್ನು ಮಾನಸಿಕವಾಗಿ ಕುಗ್ಗಿಸುವ ಕಾಂಗ್ರೆಸ್‌ ಪ್ರಯತ್ನಕ್ಕೆ ನಾವು ಸೊಪ್ಪು ಹಾಕಲ್ಲ. ಮೇಲಿಂದ ಕೆಳಗಡೆಗೆ ಇವರು ಏನಿದ್ದಾರೆಂಬುದು ನಮಗೂ ಗೊತ್ತಿದೆ. ಈ ಬಗ್ಗೆ ಮಾತನಾಡುವ ಕಾಲ ನಮಗೂ ಬರುತ್ತದೆ. ಅವರು ನಿರ್ವಹಿಸಿದ ಇಲಾಖೆಗಳಲ್ಲಿ ಏನು ಮಾಡಿದ್ದಾರೆಂಬುದನ್ನು ಅಂಕಿ, ಅಂಶಗಳ ಸಮೇತ ನೀಡುತ್ತೇವೆ. ಆ ಬಗ್ಗೆ ತನಿಖೆಯನ್ನು ಸರ್ಕಾರ ಮಾಡಲಿದೆ. ಇನ್ನೂ ಸುಮ್ಮನೆ ಕೂರುವ ಪ್ರಶ್ನೆ ಇಲ್ಲ. ಎಲ್ಲಾ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಹೇಳಿದ್ದಾರೆ. ಕಾಂಗ್ರೆಸ್‌ ಶಾಸಕರಿಗೂ ಇದು ಅನ್ವಯಿಸುವುದಿಲ್ಲವೇ ಎಂದು ಸುಧಾಕರ್‌ ಪ್ರಶ್ನಿಸಿದರು.

ಹಲಾಲ್‌, ಹಿಜಾಬ್‌ ವಿವಾದದಲ್ಲಿ ಸರ್ಕಾರದ ಪಾತ್ರ: ಸುಧಾಕರ್‌ ಹೇಳಿದ್ದಿಷ್ಟು

ಭ್ರಷ್ಟಾಚಾರದ ಜನಕ ಕಾಂಗ್ರೆಸ್‌: ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟಿಹಾಕಿರುವ ಪಕ್ಷ ಯಾವುದರೂ ಇದ್ದರೆ ಅದು ಕಾಂಗ್ರೆಸ್‌ ಮಾತ್ರ. ಕಾಂಗ್ರೆಸ್‌ ನಾಯಕರು, ಪ್ರಧಾನಿಮಂತ್ರಿಗೆ ಆ ಹೆಸರು ಬಂದಿತ್ತು. ಅವರ ಬಗ್ಗೆಯು ಹಲವು ವರ್ಷ ತನಿಖೆ ನಡೆದಿತ್ತು. ನರೇಂದ್ರ ಮೋದಿ ಬಂದು 7 ವರ್ಷ ಆಗಿದೆ. ಅವರ ಬಗ್ಗೆ ಎಲ್ಲಿಯಾದರೂ ಒಂದು ಆರೋಪ ಬಂದಿದೆಯೇ. ಅವರ ಜನಪ್ರಿಯತೆಯನ್ನು ಕಾಂಗ್ರೆಸ್‌ಗೆ ಸಹಿಕೊಳ್ಳಲಾಗುತ್ತಿಲ್ಲ. ಕಾಂಗ್ರೆಸ್‌ ಎಲ್ಲಾ ರಾಜ್ಯಗಳನ್ನ ಕಳೆದುಕೊಂಡಿದೆ. ಮುಂದೆ ಕರ್ನಾಟಕವನ್ನು ಕಳೆದುಕೊಳ್ಳಲಿದೆ. ಅಧಿಕಾರದ ತಿರುಕನ ಕನಸು ನಾಯಕರು ಕಾಣುತ್ತಿದ್ದಾರೆ ಎಂದು ಸಚಿವರು ಟೀಕಿಸಿದರು.