Asianet Suvarna News Asianet Suvarna News

ನಾನು ಬಿಜೆಪಿ-ಕಾಂಗ್ರೆಸ್‌ನಿಂದ ಅನುಭವಿಸಿದ ಕಷ್ಟ ನನಗಷ್ಟೇ ಗೊತ್ತು: ರೈತರಿಗೆ ಭಾವನಾತ್ಮಕ ಪತ್ರ ಬರೆದ ಎಚ್‌ಡಿಕೆ

ಎರಡು ಬಾರಿ ನಾನು ಆಕಸ್ಮಿಕವಾಗಿ ಈ ರಾಜ್ಯದ ಮುಖ್ಯಮಂತ್ರಿಯಾದೆ. ಒಮ್ಮೆ ಬಿಜೆಪಿ ಜತೆ, ಇನ್ನೊಮ್ಮೆ ಕಾಂಗ್ರೆಸ್ ಜತೆ, ಎರಡೂ ಬಾರಿ ನಾನು ಆಡಳಿತ ನಡೆಸಿದ ಆ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆ ನನಗಷ್ಟೇ ಗೊತ್ತು. ಎಚ್‌ಡಿ ಕುಮಾರಸ್ವಾಮಿ ರಾಜ್ಯದ ರೈತರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

HD Kumaraswamy wrote an emotional letter to the farmers bengaluru rav
Author
First Published Mar 23, 2023, 11:19 AM IST

ಬೆಂಗಳೂರು (ಮಾ.23) : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುವ ಸಂಕಲ್ಪದೊಂದಿಗೆ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಸಮಾವೇಶ ನಡೆಸಿ ಮಿಂಚಿನ ಸಂಚಾರ ಮಾಡಿ ಪಕ್ಷ ಸಂಘಟಿಸುತ್ತಿರುವ ಎಚ್ ಡಿ ಕುಮಾರಸ್ವಾಮಿ(HD Kumaraswamy)ಯವರು ಇದೀಗ ರಾಜ್ಯದ ರೈತರಿಗೆ ಭಾವನಾತ್ಮಕ ಪತ್ರ(emotional letter) ಬರೆಯುವ ಮೂಲಕ ಸಾಲಮನ್ನಾ ಪಡೆದ ರೈತರನ್ನು ಮತಗಳಾಗಿ ಪರಿವರ್ತಿಸಲು ಹೆಚ್ ಡಿಕೆ ಕೆ ಪ್ಲಾನ್ ಮಾಡಿದ್ದಾರೆ. ರೈತರಿಗೆ ಎಚ್‌ಡಿಕೆ ಪತ್ರ ಬರೆಯುವ ಬಗ್ಗೆ ಈ ಮೊದಲು ಸುದ್ದಿ ಪ್ರಕಟಿಸಿದ್ದ ಸುವರ್ಣ ನ್ಯೂಸ್.

ಎಚ್‌ಡಿಕೆ ಬರೆದ ಪತ್ರದಲ್ಲಿ ಈ ಹಿಂದೆ ಎರಡು ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಬಿಜೆಪಿ-ಕಾಂಗ್ರೆಸ್(BJP-Congress) ನಿಂದ ಅನುಭವಿಸಿದ ಹಿಂಸೆಯ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ ಎರಡೂ ಪಕ್ಷಗಳು ರೈತ ವಿರೋಧಿಗಳು ಎಂದು ಟೀಕಿಸಿದ್ದಾರೆ. ಅನ್ನದಾತರಿಗೆ(Farmers) ಸುಮಾರು 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದು ಇದರಿಂದ  27 ಲಕ್ಷ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಕುರಿತ ಪತ್ರದಲ್ಲಿ ತಿಳಿಸಿರುವ ಕುಮಾರಸ್ವಾಮಿಯವರು. ಸಾಲ ಪಡೆದ ರೈತರು ಮತ್ತೊಮ್ಮೆ ಜೆಡಿಎಸ್ ಬೆಂಬಲಿಸಿ ಋಣ ತೀರಿಸುವಂತೆ ಪರೋಕ್ಷವಾಗಿ ತಿಳಿಸಿದ್ದಾರೆ

ಆರ್ ಅಶೋಕ್‌ ಕಾಲಜ್ಞಾನಿ ಎಂಬುದು ನನಗೆ ಗೊತ್ತಿರಲಿಲ್ಲ: ಎಚ್‌ಡಿಕೆ ವ್ಯಂಗ್ಯ

ಎಚ್‌ಡಿಕೆ ರೈತರಿಗೆ ಬರೆದ ಪತ್ರದಲ್ಲಿ ಏನಿದೆ?

ಅನ್ನದಾತರ ಚರಣಗಳಿಗೆ...

ನಾಡಿನ ಸಮಸ್ತ ಅನ್ನದಾತ ಬಂಧುಗಳಿಗೆ ನನ್ನ ನಮಸ್ಕಾರಗಳು, ನಿಮ್ಮ ಮನೆ ಮಗನಾದ ನಾನು ಅನಿವಾರ್ಯ ಕಾರಣದಿಂದ ಈ ಪತ್ರ ಬರೆಯುತ್ತಿದ್ದೇನೆ. ತಮಗೆಲ್ಲರಿಗೂ ವಿಷಯ ಗೊತ್ತಿಲ್ಲ ಎಂದಲ್ಲ, ಮತ್ತೊಮ್ಮೆ ನೆನಪಿಸುವುದು ನನ್ನ ಕರ್ತವ್ಯ ಎಂದಿದ್ದಾರೆ.

ಎರಡು ಬಾರಿ ನಾನು ಆಕಸ್ಮಿಕವಾಗಿ ಈ ರಾಜ್ಯದ ಮುಖ್ಯಮಂತ್ರಿಯಾದೆ. ಒಮ್ಮೆ ಬಿಜೆಪಿ ಜತೆ, ಇನ್ನೊಮ್ಮೆ ಕಾಂಗ್ರೆಸ್ ಜತೆ, ಎರಡೂ ಬಾರಿ ನಾನು ಆಡಳಿತ ನಡೆಸಿದ ಆ ಅವಧಿಯಲ್ಲಿ ಅನುಭವಿಸಿದ ಚಿತ್ರಹಿಂಸೆ ನನಗಷ್ಟೇ ಗೊತ್ತು. ಆದರೂ, ನಾನು ನಿಮಗೆ ಕೊಟ್ಟ ಮಾತು ತಪ್ಪಲಿಲ್ಲ. 2006ರಲ್ಲಿ ನೀವೆಲ್ಲರೂ ಅತೀವ ಸಂಕಷ್ಟಕ್ಕೆ ಸಿಲುಕಿದ್ದೀರಿ. ನಿಮ್ಮಲ್ಲಿ ಅನೇಕರು ಸಾಲಕ್ಕೆ ಸಿಲುಕಿ ಸಾವಿನ ಹೊಸ್ತಿಲಲ್ಲಿ ನಿಂತಿದ್ದಿರಿ, ಆ ದುರಿತ ಕಾಲದಲ್ಲಿ ನಿಮ್ಮ ನೆರವಿಗೆ ಧಾವಿಸುವುದು ನನ್ನ ಕರ್ತವ್ಯವಾಗಿತ್ತು. ಆಗ 2,600 ಕೋಟಿ ರೂ. ಸಾಲಮನ್ನಾ ಮಾಡಬೇಕು ಎಂದಾಗ ಅಂದಿನ ಮಿತ್ರಪಕ್ಷ ಬಿಜೆಪಿ ಸ್ಪಷ್ಟವಾಗಿ ವಿರೋಧ ಮಾಡಿತ್ತು, ಆಗ ನನ್ನ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆ ಹೊಣೆ ಹೊತ್ತುಕೊಂಡಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು, ಸಾಲಮನ್ನಾ ಮಾಡಲು ಹಣ ಇಲ್ಲ, ನಾವೇನು ನೋಟು ಪ್ರಿಂಟ್ ಮಾಡಲು ಆಗುತ್ತದೆಯೇ?" ಎಂದು ಮೂದಲಿಸಿದ್ದರು. ಈ ಮಾತು ನನಗೆ ತೀವ್ರ ಘಾಸಿ ಉಂಟು ಮಾಡಿತ್ತು. ಆದರೂ, ಬಿಜೆಪಿ ಒತ್ತಡಕ್ಕೆ ಮಣಿಯದೆ 2,600 ಕೋಟಿ ರೂ.ಗಳಷ್ಟು ನಿಮ್ಮ ಸಾಲಮನ್ನಾ ಮಾಡಿದ್ದೆ ಎಂದಿದ್ದಾರೆ.

ಇನ್ನು 2018, ಆ ಚುನಾವಣೆಗೆ ಮುನ್ನ 5 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಕಾಲದಲ್ಲಿ ರಾಜ್ಯದಲ್ಲಿ ನೀವೆಲ್ಲರೂ ಕಂಡೂ ಕೇಳರಿಯದಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಿರಿ, ಒಂದೆಡೆ ಬರ, ಅಲ್ಪಸ್ವಲ್ಪ ಫಸಲಿಗೆ ಸಿಗದ ಬೆಲೆ. ಇನ್ನೊಂದೆಡೆ ಸಾಲ ಕೊಟ್ಟ ಬ್ಯಾಂಕುಗಳಿಂದ, ಖಾಸಗಿ ಲೇವಾದೇವಿಗಾರರಿಂದ ಕಿರುಕುಳ, ಅನೇಕ ರೈತರು ಮಾನಕ್ಕೆ ಹೆದರಿ ನೇಣಿಗೆ ಕೊರಳು ಕೊಟ್ಟರು. ಕೆಲವು ರೈತರು ಕೀಟನಾಶಕ ಸೇವಿಸಿ ಜೀವ ಚೆಲ್ಲಿದರು. ಮಂಡ್ಯ ಜಿಲ್ಲೆಯಲ್ಲೇ 200ಕ್ಕೂ ರೈತರು ಸಾಲಕ್ಕೆ ಹೆದರಿ ಜೀವ ಕಳೆದುಕೊಂಡರು. ರಾಜ್ಯದ ಉದ್ದಗಲಕ್ಕೂ ಅನ್ನದಾತರ ಸಾವಿನ ಸರಣಿಯೇ ಆರಂಭವಾಯಿತು. ಇದನ್ನು ನೋಡಿ ನಿಮ್ಮಂತೆಯೇ ನನ್ನ ಮನಸ್ಸು ತಡೆಯಲಿಲ್ಲ. ಆಗ ಅಧಿಕಾರದಲ್ಲಿದ್ದ ಪೂರ್ಣ ಬಹುಮತದ ಕಾಂಗ್ರೆಸ್‌ ಸರಕಾರ ಸಂಕಷ್ಟದಲ್ಲಿದ್ದ ನಿಮ್ಮ ನೆರವಿಗೆ ಬರಲಿಲ್ಲ. ರಾಜ್ಯದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ತಿರುಗಾಡಿದೆ. ಪ್ರತಿ ಸಾವಿನ ಮನೆಗೆ ಹೋದೆ. ನನ್ನ ಕೈಲಾದಷ್ಟು ಸಹಾಯ ಮಾಡಿದೆ. ಮತ್ತೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಅಂಗಲಾಚಿ ಬೇಡಿಕೊಂಡೆ. ನಾನಿದ್ದೇನೆ, ನನ್ನ ಸರಕಾರ ಬಂದರೆ ನಾನು ನಿಮ್ಮ ಸಾಲಮನ್ನು ಮಾಡುತ್ತೇನೆ ಎಂದು ಮಾತು ಕೊಟ್ಟೆ.

ಆದರೆ, 2018ರ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ 39 ಸ್ಥಾನ. ರೈತರ ಸಾಲಮನ್ನಾ ಮಾಡುವ ನನ್ನ ಸಂಕಲ್ಪ ಕಮರಿ ಹೋಯಿತೆಂದು ದುಃಖವಾಯಿತು. ಆದರೆ, ನನ್ನ ಸಂಕಲ್ಪ, ರೈತರ ಮೇಲಿನ ಕಾಳಜಿ ದೊಡ್ಡದು ಎನ್ನುವುದು ಪುನಹ ಸಾಬೀತಾಯಿತು. ಕಾಂಗ್ರೆಸ್‌ ಜತೆ ಮೈತ್ರಿ ಸರಕಾರ ರಚನೆ ಆಯಿತು. ಸಾಲಮನ್ನಾ ಮಾಡಬೇಕು ಎಂದಾಗ, ಕಾಂಗ್ರೆಸ್ ನಿಂದಲೂ ತೀವ್ರ ವಿರೋಧ ಸಾಲಮನ್ನಾ ಭರವಸೆ ನಿಮ್ಮದು, ನಮ್ಮದಲ್ಲ, ನಿಮಗೆ ಹೇಗೋ ಬಹುಮತ ಬಂದಿಲ್ಲ, ಸಾಲಮನ್ನಾ ಆಗಲ್ಲ ಎಂದು ಜನರಿಗೆ ಹೇಳಿಬಿಡಿ " ಎಂದು ಕಾಂಗ್ರೆಸ್ಸಿಗರು ನನ್ನ ಮೇಲೆ ಭಾರೀ ಒತ್ತಡ ಹೇರಿದರು. ಅಷ್ಟೇ ಅಲ್ಲ, " ನಮ್ಮ ಭಾಗ್ಯಗಳು ಯಾವೂ ನಿಲ್ಲುವ ಹಾಗಿಲ್ಲ. ಒಂದು ವೇಳೆ ನಿಂತರೆ ಈ ಸರಕಾರ ಇರುವುದೇ ಇಲ್ಲ" ಎನ್ನುವ ಧಮ್ಮಿ ಬೇರೆ. ಹಾಕಿದ್ದರು ಎಂದು ಪತ್ರದದಲ್ಲಿ ಬರೆದಿದ್ದಾರೆ. 

ಎಚ್‌ಡಿಕೆ ಭೂಕಬಳಿಕೆ ತೆರವು ಮಾಡದಕ್ಕೆ ಹೈಕೋರ್ಟ್‌ ಗರಂ

ಪತ್ರದ ಮೂಲಕ ಅನುಕಂಪದ ಅಲೆ:

ಎಚ್‌ಡಿ ಕುಮಾರಸ್ವಾಮಿ ಅವರು ರೈತರಿಗೆ ಬರೆದಿರುವ ಭಾವನಾತ್ಮಕ ಪತ್ರವನ್ನು ರಾಜ್ಯದೆಲ್ಲೆಡೆ ಹಂಚಿ ರೈತರಿಗೆ ತಲುಪಿಸುವಂತೆ ಪ್ರಚಾರ ನಡೆಸಲು ಪ್ಲ್ಯಾನ್ ರೂಪಿಸಿದ್ದಾರೆ. ಆ ಮೂಲಕ ರೈತರಲ್ಲಿ ನುಕಂಪದ ಅಲೆ ಎದ್ದು ಮತಗಳನ್ನಾಗಿ ಕ್ರೂಢಿಕರಿಸಿ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ. ಈ ಹಿಂದೆ ಏಷಿಯಾನೆಟ್ ಸುವರ್ಣ ನ್ಯೂಸ್ ಈ ಬಗ್ಗೆ ವರದಿ ಮಾಡಿತ್ತು. ಇದೀಗ ವರದಿಯಂತೆ ನಿಜವಾಗುತ್ತಿದೆ. 

Follow Us:
Download App:
  • android
  • ios