ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗುವ ಹುಚ್ಚು. ಮುಖ್ಯಮಂತ್ರಿ ಆಗಲೇಬೇಕೆಂದು ನಾನೇ ಅವರನ್ನು ಕರೆದುಕೊಂಡು ಬಂದಿದ್ದೆ ಉಪಮುಖ್ಯಮಂತ್ರಿಯಾದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ

 ವಿಜಯಪುರ (ಅ.27): ಸಿದ್ದರಾಮಯ್ಯನವರಿಗೆ (Siddaramaiah) ಮುಖ್ಯಮಂತ್ರಿಯಾಗುವ ಹುಚ್ಚು. ಮುಖ್ಯಮಂತ್ರಿ ಆಗಲೇಬೇಕೆಂದು ನಾನೇ ಅವರನ್ನು ಕರೆದುಕೊಂಡು ಬಂದಿದ್ದೆ. ನಂತರ ಉಪ ಮುಖ್ಯಮಂತ್ರಿಯಾದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, 2018ರಲ್ಲಿ ಬಾದಾಮಿಯಲ್ಲಿ (Badami) ನಾನು ಮಾಡಿದ ತಪ್ಪಿನಿಂದ ಅವರು ಗೆದ್ದರು. 2023ಕ್ಕೆ ಅವರ ದುರಹಂಕಾರ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

2023ಕ್ಕೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ - ಸಿದ್ದರಾಮಯ್ಯ ಸಿಎಂ : ನನಗೆ ಉಸ್ತುವಾರಿ

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ (CM) ಆಗದಂತೆ ಒಂದು ಬಾರಿ ತಡೆದದ್ದು ನಾನೇ. ನಾನು ಇದನ್ನು ವಿಧಾನಸಭೆಯಲ್ಲಿಯೇ ಹೇಳಿದ್ದೇನೆ. ಅಂದು ಸಿದ್ದರಾಮಯ್ಯ (Siddaramaiah) ಪ್ರತ್ಯೇಕ ಸಭೆ ನಡೆಸಿ ಜೆ.ಎಚ್‌.ಪಟೇಲ (JH patel) ಅವರನ್ನು ರಾಜ್ಯಪಾಲರನ್ನಾಗಿ ಕಳಿಸುವ ಪ್ಲಾನ್‌ ಮಾಡಿದ್ದರು. ಆಗ ನಾನು ಅದಕ್ಕೆ ತಡೆಯೊಡ್ಡಿದ್ದೇನೆ ಎಂದು ಹೇಳಿದರು.

ದೇವೇಗೌಡರನ್ನು ನಾನೇ ಸಿಎಂ ಮಾಡಿದೆ ಎಂದು ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವೇಗೌಡರು ಮುಖ್ಯಮಂತ್ರಿ ಆಗುವ ವೇಳೆ ಜನತಾದಳದ ಕಚೇರಿಗೆ ಬಾರದೇ, ಖಾಸಗಿ ಹೋಟೆಲ್‌ನಲ್ಲಿ ಹೋಗಿ ಕುಳಿತಿದ್ದರು. ಆಗ ಅವರ ಜೊತೆ ಕೆಲ ಶಾಸಕರಿದ್ದರು. ನಾನು ಅಂದು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ದೇವೇಗೌಡರು ಎಂದೂ ಕೂಡ ಬಿಜೆಪಿ ಜೊತೆ ಕೈಜೋಡಿಸಿಲ್ಲ. ದೇವೇಗೌಡರ ಜಾತ್ಯತೀತತೆ ಪ್ರಶ್ನಿಸುವ ನೈತಿಕತೆಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ. ದೇವೇಗೌಡರನ್ನು ನಾನೇ ಸಿಎಂ ಮಾಡಿದೆ ಎಂದು ಹೇಳುವ ಸಿದ್ದರಾಮಯ್ಯ ಅವರು ದೇವೇಗೌಡರು ಪ್ರಧಾನಿಯಾದಾಗ ಇವರೇಕೆ ಸಿಎಂ ಆಗಲಿಲ್ಲ ಎಂದು ಪ್ರಶ್ನಿಸಿದರು.

ಟೆಂಡರ್‌ ಪಡೆದಿದ್ದು ನಿಜ: ಸಂಪುಟ ಪುನರ್‌ ರಚನೆ ಮಾಡುವ ಬಗ್ಗೆ ನಾನು ಹೇಳಿದಾಗ ಸಿದ್ದರಾಮಯ್ಯ ಟವೆಲ್‌ ಕೊಡವಿ ಹೆಗಲ ಮೇಲೆ ಹಾಕಿಕೊಂಡು ಎದ್ದು ಹೋದರು. ಇನ್ನು ಸಿದ್ದರಾಮಯ್ಯನವರಂತವರು ಟೋಪಿ ಹಾಕಿದರೂ, ಚೂರಿ ಹಾಕಿದರೂ ಜೆಡಿಎಸ್‌ ಉಳಿದಿರುವುದು ನಾನು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳಿಂದ ಎಂಬುದು ರಾಜ್ಯದ ಜನತೆಗೆ ಗೊತ್ತು. ಮೈತ್ರಿ ಸರ್ಕಾರ ಬೀಳುವಾಗ ನಾನು ಅಮೆರಿಕದಲ್ಲಿದ್ದೆ. ಜಾಜ್‌ರ್‍ ಹಾಗೂ ಭೈರತಿ ಬಸವರಾಜ ನಡುವೆ ಗಲಾಟೆ ಶುರುವಾಯಿತು. ಆಗ ಮನಸ್ಸು ಮಾಡಿದ್ದರೆ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಉಳಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ಆ ಕೆಲಸ ಮಾಡಲಿಲ್ಲ ಎಂದು ತಿಳಿಸಿದರು.

ಮತ್ತೆ ಕಣ್ಣೀರಿಟ್ಟಕುಮಾರಸ್ವಾಮಿ

ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು. ಭಾವನೆಗಳು ಉಕ್ಕಿ ಬಂದಾಗ ನಮಗೆ ಕಣ್ಣೀರು ಬರುತ್ತದೆ ಎಂದು ಗದ್ಗದಿತರಾದ ಕುಮಾರಸ್ವಾಮಿ ಅಳುತ್ತಲೇ ಮಾತನಾಡಿದರು. ಕಣ್ಣೀರು ಬರಿಸಿಕೊಳ್ಳಲು ಕರ್ಚಿಫ್‌ಗೆ ಗ್ಲಿಸರಿನ್‌ ಹಾಕಿಕೊಳ್ಳುತ್ತಾರೆ ಎಂದು ಬಹಳಷ್ಟುಜನ ಬಹಳ ಹಿಂದೆಯೇ ನಮ್ಮ ಬಗ್ಗೆ ಹೇಳಿದ್ದಾರೆ. ಬೇಕಾದರೆ, ಈ ಕರ್ಚಿಫ್‌ಗೆ ಗ್ಲಿಸರಿನ್‌ ಸವರಿದ್ದೀನಾ ನೋಡಿ ಎಂದು ಕೈಯಲ್ಲಿದ್ದ ಕರ್ಚಿಫ್‌ ಅನ್ನುಕುಮಾರಸ್ವಾಮಿ ಪತ್ರಕರ್ತರಿಗೆ ತೋರಿಸಿದರು.