ಕಡ್ಡಿ ಮುರಿದಂತೆ ಹೇಳಿದ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ್ರಿಗೆ ಜೆಡಿಎಸ್ ಬಾಗಿಲು ಬಂದ್..!
ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿರುವ ಜಿ.ಟಿ. ದೇವೇಗೌಡ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಮೈಸೂರು, (ಮಾ.13): ಮೈಸೂರು ವೈಮುಲ್ ಚುನಾವಣೆ ಜಿ.ಟಿ.ದೇವೇಗೌಡ ಹಾಗೂ ಎಚ್ಡಿ ಕುಮಾರಸ್ವಾಮಿ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ವೈಮುಲ್ ಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿದ್ದು, ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ವೈಮುಲ್ ಚುನಾವಣೆ ಜಿಟಿಡಿ. ಎಚ್ಡಿಕೆ ನಡುವಿನ ಪ್ರತಿಷ್ಠೆಯಾಗಿದೆ.
ಇನ್ನು ಈ ಬಗ್ಗೆ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇನ್ನೆಂದಿಗೂ ಜಿಟಿ ದೇವೇಗೌಡರನ್ನ ಜೆಡಿಎಸ್ ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕಡ್ಡಿ ಮುರಿದಂತೆ ಹೇಳಿದರು.
ಮಾಜಿ ಸಚಿವರಾದ ಜಿಟಿಡಿ, ಅಸ್ನೋಟಿಕರ್ ಜೆಡಿಎಸ್ ಬಿಡ್ತಾರಾ? ಸ್ಪಷ್ಟನೆ ಕೊಟ್ಟ ದೇವೇಗೌಡ
ಉನ್ನತ ಶಿಕ್ಷಣ ಸಚಿವ ಸ್ಥಾನಕ್ಕಿಂತ ಇನ್ನೇನು ಕೊಡಬೇಕಿತ್ತು..? ಜಿಲ್ಲೆಯಲ್ಲಿ ಎಲ್ಲಾ ರೀತಿಯ ಅಧಿಕಾರ ಅವರಿಗೆ ಪಕ್ಷ ಕೊಟ್ಟಿತ್ತು. ಸಿಎಂ ಸೋಲಿಸಿದ್ದಕ್ಕೆ ಮುಖ್ಯಮಂತ್ರಿ ಮಾಡಬೇಕಿತ್ತಾ? ಎಂದು ಎಚ್.ಡಿ. ಕುಮಾರಸ್ವಾಮಿ. ಜಿ.ಟಿ. ದೇವೇಗೌಡ ವಿರುದ್ಧ ಹರಿಹಾಯ್ದರು.
ಆರೋಗ್ಯ ಸರಿ ಇಲ್ಲಾ ಅಂದ್ರೆ ಚಿಕಿತ್ಸೆ ಕೊಡಬಹುದು. ಆರೋಗ್ಯ ಸರಿಯಿಲ್ಲ ಅನ್ನೋ ಹಾಗೆ ನಾಟಕ ಆಡೋರ್ಗೆ ಏನ್ ಟ್ರೀಟ್ ಮೆಂಟ್ ಕೊಡೋದು..? ಜೆಡಿಎಸ್ ಮುಗಿಸಲು ಜಿ.ಟಿ. ದೇವೇಗೌಡ ಹೊರಟಿದ್ದಾರೆ. ಇನ್ನೆಂದೂ ಕೂಡ ಅವರನ್ನ ನಾನು ಜೆಡಿಎಸ್ ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಮುಲ್ ನಲ್ಲಿ ನಮಗೆ ಧಕ್ಕೆ ಆದ್ರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ತೇವೆ. ಮೈಮುಲ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ.. ಸಾರಾ ಮಹೇಶ್ ಮಾತು ಕೇಳಿ ನಾನು ಪ್ರಚಾರಕ್ಕೆ ಬಂದಿಲ್ಲ. ಯಾರದ್ದೋ ಮಾತು ಕೇಳಿ ಪ್ರಚಾರಕ್ಕೆ ಬರಲು ನಾನು ಕೋಲೆ ಬಸವನಲ್ಲ. ಮೈಮುಲ್ ಮತದಾರರನ್ನ ಆಮಿಷ ಒಡ್ಡಿ ಜಿಟಿಡಿ ತಮ್ಮತ್ತ ಸೆಳೆದುಕೊಂಡಿದ್ದಾರೆ. ಸೋಲು ಗೆಲುವನ್ನು ಸಹಜವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದರು.