‘ಹರ್‌ ಘರ್‌ ತಿರಂಗಾ’ ಮೋದಿ ಒಬ್ಬ ನಾಟಕಕಾರ ಎಂದ ಸಿದ್ದರಾಮಯ್ಯ - ಸ್ವಾತಂತ್ರ್ಯ ಹೋರಾಟಕ್ಕೆ ಸಂಘ ಪರಿವಾರ, ಹಿಂದೂ ಮಹಾಸಭಾ ಕೊಡುಗೆ ಇಲ್ಲ ಕಾಂಗ್ರೆಸ್ಸಿಂದ ‘ಕ್ವಿಟ್‌ ಇಂಡಿಯಾ’ ದಿನಾಚರಣೆ

ಬೆಂಗಳೂರು (ಆ.10) : ಪ್ರಧಾನಿ ನರೇಂದ್ರ ಮೋದಿ ಒಬ್ಬ ದೊಡ್ಡ ನಾಟಕಕಾರ. ರಾಷ್ಟ್ರಗೀತೆ, ರಾಷ್ಟ್ರಧ್ವಜ ಅಪಮಾನಿಸಿದ ಬಿಜೆಪಿಯವರು ಈಗ ‘ಹರ್‌ ಘರ್‌ ತಿರಂಗಾ’ ಹೆಸರಿನಲ್ಲಿ ನಾಟಕ ಆಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಂಘ ಪರಿವಾರ, ಹಿಂದೂ ಮಹಾಸಭಾದ ಕೊಡುಗೆ ಏನೂ ಇಲ್ಲ. ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಕಾಂಗ್ರೆಸ್‌ ಕೊಡುಗೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗ ಅಭಿಯಾನ, ಮನೆ ಮನೆಗೂ ತ್ರಿವರ್ಣ!

ಕೆಪಿಸಿಸಿ(KPCC) ಕಚೇರಿಯಲ್ಲಿ ಏರ್ಪಡಿಸಿದ್ದ ಕ್ವಿಟ್‌ ಇಂಡಿಯಾ(quit india) ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಬಳಿಕ 1951ರಲ್ಲಿ ಜನಸಂಘ ಸ್ಥಾಪನೆಯಾಯಿತು. ಗೋಳ್ವಲ್ಕರ್‌ ಮತ್ತು ಸಾವರ್ಕರ್‌ ತ್ರಿವರ್ಣ ಧ್ವಜ ವಿರೋಧಿಸಿದ್ದರು. ಇತ್ತೀಚೆಗಷ್ಟೇ ನಾಗ್ಪುರದ ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಆರಂಭಿಸಿದ್ದಾರೆ. ಆದರೆ ಈಗ ನರೇಂದ್ರ ಮೋದಿ ಮತ್ತು ಬಿಜೆಪಿಯವರು ‘ಹರ್‌ ಘರ್‌ ತಿರಂಗಾ’ ಅಭಿಯಾನದ ನಾಟಕ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಕಲಿಗಳ ಬಾಯಿ ಮುಚ್ಚಿಸಬೇಕು: ದೇಶಕ್ಕಾಗಿ ಆಸ್ತಿಪಾಸ್ತಿ ನಷ್ಟ, ಜೈಲುವಾಸ, ಸಾವು ನೋವು ಅನುಭವಿಸಿದವರು ಕಾಂಗ್ರೆಸ್‌ನವರು. ಸಾವರ್ಕರ್‌ ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದು, ಬಿಜೆಪಿಯವರು ಮಾತ್ರ ವೀರ ಸಾವರ್ಕರ್‌ ಎಂದು ವಿಜೃಂಭಿಸುತ್ತಿದ್ದಾರೆ. ದೇಶಕ್ಕಾಗಿ ಆರ್‌ಎಸ್‌ಎಸ್‌ನ ಯಾರಾದರೂ ಪ್ರಾಣಾರ್ಪಣೆ ಮಾಡಿದ್ದಾರೆಯೇ. ಇವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಾರೆ ಎಂದು ತರಾಟೆ ತೆಗೆದುಕೊಂಡರು. ನಾವು ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸಬೇಕು ಎಂದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌(B.K.Hariprasad) ಮಾತನಾಡಿ, ಮಹಾತ್ಮ ಗಾಂಧೀಜಿ(Mahatma Gandhiji)ಯವರು ಬ್ರಿಟೀಷರಿಗೆ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿದ ದಿನವಿದು. ಆಗ ಆರ್‌ಎಸ್‌ಎಸ್‌, ಜನಸಂಘ ಇರಲಿಲ್ಲ. ಆದರೆ ಇಂದು ನಕಲಿ ದೇಶ ಭಕ್ತರು ಕಾಂಗ್ರೆಸ್‌ಗೆ ದೇಶಭಕ್ತಿ ಬಗ್ಗೆ ಹೇಳಿಕೊಡಲು ಬರುತ್ತಿದ್ದಾರೆ. ಈಗಲೂ ಆರ್‌ಎಸ್‌ಎಸ್‌ ಕಚೇರಿ ಮೇಲೆ ಭಗವಾಧ್ವಜ ಹಾರಾಡುತ್ತಿದೆ ಎಂದು ಟೀಕಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಚಿವ ಕೆ.ಜೆ.ಜಾಜ್‌ರ್‍ ಮತ್ತಿತರರು ಹಾಜರಿದ್ದರು.

ಸಿದ್ದು 75ನೇ ಜನ್ಮದಿನ ವರ್ಷವೇ ಅಮೃತೋತ್ಸವ ಭಾಗ್ಯ: ಡಿಕೆಶಿ

ಬೆಂಗಳೂರು: 80 ವರ್ಷದ ಹಿಂದೆ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿಯವರು ಹೋರಾಟ ನಡೆಸಿದರು. ಬದಲಾದ ಪರಿಸ್ಥಿತಿಯಲ್ಲಿ ಈಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸಲು ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆ ನೀಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಕಾಂಗ್ರೆಸ್‌ ಹಕ್ಕು. ಆದ್ದರಿಂದ ಜನರ ಬಳಿ ಹೋಗಲು ತೀರ್ಮಾನಿಸಿದ್ದೇವೆ. ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ವರ್ಷದಲ್ಲೇ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವುದು ನಮ್ಮ ಭಾಗ್ಯ ಎಂದು ಬಣ್ಣಿಸಿದರು.

ಬಿಜಪಿಗೆ ರಾಷ್ಟ್ರಧ್ವಜದ ಬಗ್ಗೆ ಗೌರವವಿಲ್ಲ, ಹರ್ ಘರ್ ತಿರಂಗಾ ದೊಡ್ಡ ನಾಟಕ: ಸಿದ್ದರಾಮಯ್ಯ

ಆರ್‌ಎಸ್‌ಎಸ್‌, ಭಜರಂಗದಳ, ವಿಶ್ವಹಿಂದೂ ಪರಿಷತ್‌ ಸಂಘಟನೆಗಳು ಸಂಘಪರಿವಾರದ ಬೇರೆ ಬೇರೆ ಮುಖಗಳು. ಇವರೆಲ್ಲರೂ ಶ್ರೇಣೀಕೃತ ವ್ಯವಸ್ಥೆ ಮತ್ತು ಅಸಮಾನತೆಯ ಕಡೆ ಒಲವು ಹೊಂದಿದ್ದಾರೆ. ರಾಷ್ಟ್ರಧ್ವಜ ವಿರೋಧಿಸುತ್ತಾರೆ ಎಂದರೆ ಇವರಲ್ಲಿ ದೇಶಭಕ್ತಿ ಇರಲು ಸಾಧ್ಯವೇ. ಸ್ವಾತಂತ್ರ್ಯದ ಗಾಳಿಯನ್ನು ನಾವು ಉಸಿರಾಡುತ್ತಿದ್ದರೆ ಅದಕ್ಕೆ ಕಾಂಗ್ರೆಸ್‌ ಪಕ್ಷ ಕಾರಣ ಎಂದು ಸ್ಪಷ್ಪಡಿಸಿದರು.

ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ನೀಡಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದು ಸಂವಿಧಾನ ಬದಲಿಸಲು ಹೊರಟಿದ್ದಾರೆ. ಚರಿತ್ರೆ ಬದಲಿಸಲು ಹೊರಟಿರುವ ಇವರ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಗೌರವ ಇಲ್ಲದವರು ದೇಶ ಆಳುತ್ತಿದ್ದು ನಾವೆಲ್ಲ ಸಂಘಟಿತ ಹೋರಾಟ ಮಾಡಬೇಕು. ಜನರಿಗೆ ಸತ್ಯ ತಿಳಿಸಬೇಕು. ಬಿಜೆಪಿಯವರು ಸುಳ್ಳನ್ನೇ ನೂರು ಸಲ ಹೇಳುತ್ತಾರೆ. ನಾವು ಸತ್ಯವನ್ನು 4 ಬಾರಿ ಹೇಳುವುದಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, 1942 ಆ.8 ರಂದು ಮುಂಬೈ ಅಧಿವೇಶನದಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಮಹಾತ್ಮ ಗಾಂಧೀಜಿ ಕರೆ ನೀಡಿದ್ದರು. ಅದರ ನೆನಪಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸ್ಮರಿಸಿದರು.