ರಾಜ್ಯದಲ್ಲಿ ಬಿಜೆಪಿಗೆ ಹೋದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿದ್ದಾರೆ. ಬಿಜೆಪಿಗೆ ಹೋಗಲಿಲ್ಲ ಅಂದರೆ ಒದೆ ಕೊಡುತ್ತಾರೆ. ಇದೇ ಗುಜರಾತ್ ಮಾಡೆಲ್ ಅಂದರೆ ಬೇರೇನಿಲ್ಲ.

ಬೆಂಗಳೂರು (ಜ.17): ರಾಜ್ಯದಲ್ಲಿ ಬಿಜೆಪಿಗೆ ಹೋದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿದ್ದಾರೆ. ಅಲ್ಲಿಗೆ ಹೋಗಲಿಲ್ಲ ಅಂದರೆ ಒದೆ ಕೊಡುತ್ತಾರೆ. ಇದೇ ಗುಜರಾತ್ ಮಾಡೆಲ್ ಅಂದರೆ ಬೇರೇನಿಲ್ಲ. ಅವರು ಎಷ್ಟು ಭ್ರಷ್ಟರೇ ಇರಲಿ ಅವರು ಬಿಜೆಪಿಗೆ ಹೋದಲ್ಲಿ ಕರೆದುಕೊಳ್ಳುತ್ತಾರೆ. ಹೆದರಿಸಿ ಬೆದರಿಸುವುದೇ ಅವರ ಕೆಲಸವಾಗಿದೆ ಎಂದು ಬಿಜೆಪಿ ವಿರುದ್ಧ ಆಮ್‌ ಆದ್ಮಿ ಪಕ್ಷದ ಮುಖಂಡ ಬ್ರಿಜೇಶ್ ಕಾಳಪ್ಪ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ರಾಜ್ಯ ಗುತ್ತಿಗೆದಾರರ ಸಂಘದಿಂದ ಇಂದು ಎಎಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ರಾಜನಾಥ್ ಸಿಂಗ್ ಅವರಿಗೆ ವಾಟ್ಸಾಪ್ ಮೆಸೇಜ್ ಮಾಡಿ ನಿಮ್ಮ ಪುತ್ರ ಗುತ್ತಿಗೆದಾರನಿಂದ ಹಣ ಪಡೆದಿದ್ದಾನೆ. ಅದನ್ನ ವಾಪಸ್ ಕೊಡಿ ಎಂದು ಹೇಳಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಲಿಲ್ಲ. ಕೇವಲ ವಾಟ್ಸಾಪ್ ನಲ್ಲಿ ಮಾತ್ರ ಓಡಾಡಿತ್ತು. ಆದರೆ, ಈಗ ಕರ್ನಾಟಕದಲ್ಲಿ ಗುತ್ತಿಗೆದಾರರಿಂದ ಬಿಜೆಪಿ ಶಾಸಕರು, ಸಚಿವರು ಕಮಿಷನ್‌ ಪಡೆದಿದ್ದಾರೆ ಎಂದು ಆರೋಪ ಮಾಡಿ, ದೂರು ನೀಡಿದರೂ ಪ್ರಧಾನಿಯವರು ಮೌನವಾಗಿದ್ದು, ಮೌನಿ ಬಾಬಾರಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಎಸ್‌ವೈ ಜತೆ ಮೋದಿ ಮಾತುಕತೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೀತಾ ಚರ್ಚೆ..?

ಭ್ರಷ್ಟಾಚಾರ ಕಡಿವಾಣಕ್ಕೆ ಎಎಪಿ ನೋಡಿ ಕಲಿಯಿರಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಶಾಸಕರು, ಸಚಿವರು ಗುತ್ತಿಗೆ ಕಾಮಗಾರಿ ಮಾಡಲಿ ಕಮೀಷನ್‌ ಪಡೆಯುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ. ಹಾಗಾಗಿ ಭ್ರಷ್ಟಾಚಾರಕ್ಕೆ ಇವತ್ತು ಕಡಿವಾಣ ಹೇಗೆ? ಎಂಬ ಪ್ರಶ್ನೆ ಬಂದಿದೆ. ಎಎಪಿ ಅಧಿಕಾರದಲ್ಲಿರುವ ಪಂಜಾಬ್ ನಲ್ಲಿ ಸಚಿವರ ಮೇಲೆ ಆರೋಪ ಬಂತು. ಶೇ. 1 ಕಮೀಷನ್ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಕೂಡಲೇ ಸಚಿವರನ್ನ ವಜಾ ಮಾಡಲಾಗಿದೆ. ಅಂತಹ ಕಠಿಣ ತೀರ್ಮಾನವನ್ನು ಯಾಕೆ ಕರ್ನಾಟಕದಲ್ಲಿ ಸರ್ಕಾರ ಕೈಗೊಳ್ಳುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು. 

ಆರೋಪದಿಂದ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ: ರಾಜ್ಯದಲ್ಲಿ ಗುತ್ತಿಗೆದಾರರ ಸಂಘದಿಂದ ಸುದ್ದಿಗೋಷ್ಠಿ ಮಾಡಿ ಸರ್ಕಾರದ ಸಚಿವರ ವಿರುದ್ಧ ಕಮೀಷನ್‌ ಆರೋಪ ಮಾಡಲಾಗಿದೆ. ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ 90 ಲಕ್ಷ ರೂ. ಕಮೀಷನ್‌ ಪಡೆದಿದ್ದಾರೆ ಎಂದು ಗುತ್ತಿಗೆದಾರ ಮಂಜುನಾಥ್‌ ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಲಂಚದ ಬಗ್ಗೆ ಸತತವಾಗಿ ಮಾತನಾಡ್ತಿದ್ದಾರೆ. ಪ್ರಧಾನಿಯವರಿಗೂ ಪತ್ರವನ್ನ ಬರೆದಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮವಿಲ್ಲ. ಸರ್ಕಾರ ಪ್ರೂಪ್ ಕೊಡಿ ಅಂತ ಕೇಳುತ್ತಿದೆ. ಇದರಿಂದ ತಪ್ಪಿಸಿಕೊಳ್ಳುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಹೇಳಿದರು. 

Assembly election: ಕಾಂಗ್ರೆಸ್‌ಗೆ ಠಕ್ಕರ್‌ ಕೊಡಲು ಬಿಜೆಪಿ ಪ್ಲಾನ್‌ : ಜ.21ರಿಂದ ವಿಜಯ ಸಂಕಲ್ಪ ಅಭಿಯಾನ

ಕಿಮ್ಮನೆ ರತ್ನಾಕರ್‌ ಪ್ರಾಮಾಣಿಕ: ರಾಜ್ಯದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪ್ರಾಮಾಣಿಕರಾಗಿದ್ದಾರೆ. ಅವರ ಮನೆ ಮೇಲೆ ಯಾಕೆ ಐಟಿ ದಾಳಿಯಾಗುತ್ತದೆ. ಅವರು ಒಬ್ಬರಿಗೆ ಮನೆ ಬಾಡಿಗೆ ಕೊಟ್ಟಿರುತ್ತಾರೆ. ಮನೆ ಬಾಡಿಗೆದಾರ ಯಡವಟ್ಟು ಮಾಡಿದ್ದಾನೆಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕಿಮ್ಮನೆಯವರ ಮೇಲೆ ದಾಳಿ ಮಾಡ್ತಾರೆ ಎಂದು ಹೇಳುವುದು ಸೂಕ್ತವಲ್ಲ. ಆಪ್ ಪಾರ್ಟಿ ಟಿಕೆಟ್ ಘೋಷಣೆ ವಿಚಾರ ಮತ್ತೊಂದು ಪ್ರೆಸ್ ಮೀಟ್ ನಲ್ಲಿ ತಿಳಿಸುತ್ತೇವೆ. ನಮ್ಮಲ್ಲಿಯೂ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎಂದು ತಿಳಿಸಿದರು.