ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಕುರಿತು ಚಿಂತೆ ಇಲ್ಲ. ಮಹಾಘಟಬಂದನ್‌ ರಚನೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. 

ಬೆಂಗಳೂರು/ಚನ್ನಪಟ್ಟಣ (ಜು.18): ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಕುರಿತು ಚಿಂತೆ ಇಲ್ಲ. ಮಹಾಘಟಬಂದನ್‌ ರಚನೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೆ ಪಂಚತಾರಾ ಹೊಟೇಲ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳ ಮಹಾಘಟಬಂಧನ್‌ ಸಭೆ ಮಾಡುತ್ತಿದ್ದಾರೆ. 

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಾರಂಭವಾಗಿ ವೆಸ್ಟ್‌ ಎಂಡ್‌ ಹೊಟೇಲ್‌ವರೆಗೂ ಕಟೌಟ್‌ಗಳು ರಾರಾಜಿಸುತ್ತಿವೆ. ಯಾರ ಸಮಾಧಿ ಮೇಲೆ ವಿಜೃಂಭಣೆಯಿಂದ ಈ ಸಭೆ ನಡೆಸಲಾಗುತ್ತಿದೆ? ರೈತರ ಸಮಾಧಿಯ ಮೇಲೆ ಈ ಸಮಾವೇಶವಾ ಎಂದು ಖಾರವಾಗಿ ಪ್ರಶ್ನಿಸಿದರು. ಇಲ್ಲಿಂದ ದೇಶಕ್ಕೆ ಯಾವ ಸಂದೇಶ ಕೊಡಲಾಗುತ್ತದೆ? ಇದು ಗ್ಯಾರಂಟಿನ ಮಾಡಲಾ? ಗ್ಯಾರಂಟಿಗಳನ್ನು ಜಾರಿ ಮಾಡಿದ ಮೇಲೆಯೇ ರೈತ ಆತ್ಮಹತ್ಯೆಗಳು ನಡೆಯುತ್ತಿವೆ. ಕೃಷಿ ಇಲಾಖೆಯಲ್ಲಿ ರೇಟ್‌ ಫಿಕ್ಸ್‌ ಮಾಡಿ ಜಲ್ಸಾ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ ನಿಮ್ಮ ಸಾಧನೆ ಏನು? 

ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್‌ ಪಕ್ಷ: ಸಚಿವ ಮಧು ಬಂಗಾರಪ್ಪ

ಲೂಟಿ ಮಾಡಲಾಗಿದೆ ಎಂದು ಬಿಜೆಪಿಯನ್ನು ದೂರುವ ಮೊದಲು ನಿಮ್ಮ ಸಾಧನೆ ಏನು? ನಿಮ್ಮ ಮಹಾಘಟಬಂಧನ್‌ನಲ್ಲಿ ಈ ಸಂದೇಶ ಕೊಡಿ ಎಂದು ವ್ಯಂಗ್ಯವಾಡಿದರು. ಬಜೆಟ್‌ನಲ್ಲಿ ಐದು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಈ ಸರ್ಕಾರ ಕೃಷಿ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿದೆ. ಈ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಕಿಡಿಕಾರಿದರು. ಇದೇ ವೇಳೆ ಕುಮಾರಸ್ವಾಮಿ ಅವರು ಸೋಮವಾರ ‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿರುವ ‘ಮುಂಗಾರು ವೈಫಲ್ಯ: ಎರಡೇ ತಿಂಗಳಲ್ಲಿ 42 ರೈತರ ಆತ್ಮಹತ್ಯೆ!’ ಎಂಬ ಸುದ್ದಿಯ ಪತ್ರಿಕೆ ತುಣಕನ್ನು ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿಯಲ್ಲಿ ಸಮರ್ಥರಿದ್ದಾರೆ: ಬಿಜೆಪಿಯಲ್ಲಿಯೇ ವಿರೋಧ ಪಕ್ಷದ ಸ್ಥಾನಕ್ಕೆ ಸಮರ್ಥವಾದ ನಾಯಕರು ಇದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು 65 ಜನರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಜೆಪಿ ನಾಯಕರು ಕಾಲಾಹರಣ ಮಾಡದೆ ಯಾರಾದರೂ ಸಮರ್ಥವಾದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಘೋಷಣೆ ಮಾಡಲಿ ಎಂದು ಬಿಜೆಪಿ ಕೇಂದ್ರ ವರಿಷ್ಠರಿಗೆ ಮುಖಂಡರಿಗೆ ಕುಮಾರಸ್ವಾಮಿ ಸಲಹೆ ನೀಡಿದರು. ನಮ ಪಕ್ಷದ ಜತೆ ಯಾವುದೇ ರೀತಿಯ ಮಾತುಕತೆ ಆಗಿಲ್ಲ. 

ರಾಜ್ಯದ ಅಭಿವೃದ್ಧಿಗೆ ಒಕ್ಕಲಿಗ ಸಮಾಜದ ಕೊಡುಗೆ ಅಪಾರ: ಎಚ್‌.ವಿಶ್ವನಾಥ್‌

ಮಾತುಕತೆಯಾಗದ ಮೇಲೆ ನಾವು ಡಿಮ್ಯಾಂಡ್‌ ಮಾಡುವ ವಿಚಾರ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ನಾವು 19 ಮಂದಿ ಗೆದ್ದಿದ್ದೇವೆ, ಅದರೆ ಬಿಜೆಪಿಯಲ್ಲಿ 65 ಮಂದಿ ಗೆದ್ದಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾಗಿದ್ದವರು, ಸಚಿವರಾಗಿದ್ದವರು ಗೆದ್ದಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುವಂತ ಶಕ್ತಿ ಇರುವರು ಇದ್ದಾರೆ. ಅವರಲ್ಲೇ ಒಬ್ಬರು ಸಮರ್ಥರನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದರು. ಬಿಜೆಪಿ ಬಗ್ಗೆ ಸಾಫ್ಟ್‌ ಕಾರ್ನ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಯಾರ ಬಗ್ಗೆಯೂ ಸಾಫ್ಟ್‌ ಕಾರ್ನ್‌ರ್‌ ಇಲ್ಲ. ನಾಡಿನ ಜನತಯ ಕಷ್ಟದ ಬಗ್ಗೆ ಸಾಫ್ಟ್‌ ಕಾರ್ನ್‌ ಇದೆ. ಪಕ್ಷಗಳ ಬಗ್ಗೆ ಸಾಫ್ಟ್‌ ಕಾರ್ನ್‌ ಇಟ್ಕೊಂಡು ಏನು ಮಾಡಲಿ ಎಂದರು.