ರಾಜ್ಯಕ್ಕೆ ಮೊನ್ನೆ ತಾನೇ 16ನೇ ಹಣಕಾಸು ಆಯೋಗ ಬಂದು ಹೋಗಿದ್ದು, ಪ್ರತಿ ರಾಜ್ಯಕ್ಕೂ ಆಯೋಗ ಭೇಟಿ ನೀಡುವ ಮೂಲಕ ಆಯಾ ರಾಜ್ಯಗಳಿಂದಲೇ ಮಾಹಿತಿ ಪಡೆದು, ಅದೇ ಮಾರ್ಗಸೂಚಿಗಳ ಪ್ರಕಾರ ಹಣ ನೀಡುತ್ತದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.  

ದಾವಣಗೆರೆ (ಅ.14): ರಾಜ್ಯಕ್ಕೆ ಮೊನ್ನೆ ತಾನೇ 16ನೇ ಹಣಕಾಸು ಆಯೋಗ ಬಂದು ಹೋಗಿದ್ದು, ಪ್ರತಿ ರಾಜ್ಯಕ್ಕೂ ಆಯೋಗ ಭೇಟಿ ನೀಡುವ ಮೂಲಕ ಆಯಾ ರಾಜ್ಯಗಳಿಂದಲೇ ಮಾಹಿತಿ ಪಡೆದು, ಅದೇ ಮಾರ್ಗಸೂಚಿಗಳ ಪ್ರಕಾರ ಹಣ ನೀಡುತ್ತದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಈ ಮೂಲಕ ಕೇಂದ್ರದ ವಿರುದ್ಧ ತೆರಿಗೆ ಸಮರಕ್ಕೆ ರಾಜ್ಯದ ಜನತೆಗೆ ಕರೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

Add Asianetnews Kannada as a Preferred SourcegooglePreferred

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹಣಕಾಸು ಆಯೋಗ ರಚನೆಯಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ಯಾವ್ಯಾವ ರಾಜ್ಯಕ್ಕೆ ಏನೇನು ಕೊಡಬೇಕೆಂಬುದನ್ನು ಆಯೋಗದವರು ತೀರ್ಮಾನ ಮಾಡುತ್ತಾರೆ. ಅದರಂತೆ 16ನೇ ಹಣಕಾಸು ಆಯೋಗ ಮೊನ್ನೆಯಷ್ಟೇ ರಾಜ್ಯಕ್ಕೆ ಬಂದು ಹೋಗಿದೆ ಎಂದರು.

ಪ್ರತಿ ರಾಜ್ಯಕ್ಕೆ ಭೇಟಿ ನೀಡಿದ ನಂತರ ಆಯಾ ರಾಜ್ಯಗಳಿಂದಲೇ ಆಯೋಗ ಮಾಹಿತಿ ಪಡೆಯುತ್ತದೆ. ಅದೇ ಮಾರ್ಗಸೂಚಿಗಳ ಪ್ರಕಾರ ಹಣ ನೀಡುತ್ತದೆ. 1952-53ರಲ್ಲೇ ಈ ಸಂಬಂಧ ಗೈಡ್‌ಲೈನ್‌ ಸಹ ಆಗಿದೆ. ಆ ಬಳಿಕ ರಾಜ್ಯಗಳ ಅಭಿವೃದ್ಧಿಗಳ ಆಧಾರದ ಮೇಲೆ ಕೆಲ ಮಾರ್ಗಸೂಚಿಗಳಲ್ಲಿ ಬದಲಾವಣೆಯೂ ಆಗಿದೆ. ಇದು ಕೇಂದ್ರದಲ್ಲಿ ಇರುವ ಸರ್ಕಾರ ಕೈಗೊಳ್ಳುವ ತೀರ್ಮಾನಲ್ಲ. ರಾಷ್ಟ್ರಪತಿಗಳಿಂದಲೇ ಹಣಕಾಸು ಆಯೋಗ ರಚನೆಯಾಗಿರುತ್ತದೆ ಎಂದರು.

ನನ್ನ ಮೇಲೆ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರುತ್ತೆ: ಸಿಎಂ ಸಿದ್ದರಾಮಯ್ಯ

ಈ ಸರ್ಕಾರ ಏನು ಹೇಳುತ್ತಿದೆ, ಆರ್ಥಿಕ ತಜ್ಞರು ಏನು ಹೇಳುತ್ತಾರೆ. ಅದರ ಕುರಿತು ಆ ಮೇಲೆ ಚರ್ಚೆ ಮಾಡೋಣ. ಹಣಕಾಸು ಆಯೋಗ ಆಯಾ ರಾಜ್ಯಗಳು ನೀಡುವ ಮಾಹಿತಿಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುತ್ತದೆ. 5 ವರ್ಷದಲ್ಲಿ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುತ್ತಾರೆ, ದೇಶದಲ್ಲಿ ಏನು ಬದಲಾವಣೆ ಆಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.