ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ವಿದ್ಯುತ್‌ ಮಗ್ಗ ನೇಕಾರರಿಗೆ 20 ಎಚ್‌ಪಿ ವರೆಗೆ ಯೂನಿಟ್‌ಗೆ 1.25 ರು.ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅದನ್ನು 5 ಎಚ್‌ಪಿಗೆ ಇಳಿಕೆ ಮಾಡಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ

ತುಮಕೂರು/ದೊಡ್ಡಬಳ್ಳಾಪುರ(ಜ.25):  ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೇಕಾರರ ವಿದ್ಯುತ್‌ ಮಗ್ಗಗಳಿಗೆ 20 ಎಚ್‌ಪಿವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದರು.
ತುಮಕೂರು ಹಾಗೂ ದೊಡ್ಡಬಳ್ಳಾಪುರಗಳಲ್ಲಿ ಮಂಗಳವಾರ ನಡೆದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ವಿದ್ಯುತ್‌ ಮಗ್ಗ ನೇಕಾರರಿಗೆ 20 ಎಚ್‌ಪಿ ವರೆಗೆ ಯೂನಿಟ್‌ಗೆ 1.25 ರು.ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅದನ್ನು 5 ಎಚ್‌ಪಿಗೆ ಇಳಿಕೆ ಮಾಡಿದೆ ಎಂದು ಆರೋಪಿಸಿದರು.

ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಆ್ಯಂಡ್‌ ಟೀಮ್‌ನವರು ಆಲಿಬಾಬಾ ಮತ್ತು 40 ಕಳ್ಳರ ತಂಡದಂತಿದ್ದಾರೆ. ಈ ದೇಶದಲ್ಲಿ ಮೋದಿ ಅವರಷ್ಟುಸುಳ್ಳು ಹೇಳಿದ ಮತ್ತೊಬ್ಬ ಪ್ರಧಾನಿ ಇಲ್ಲ. 15 ಲಕ್ಷ ರು.ಬ್ಯಾಂಕ್‌ ಖಾತೆಗೆ ಬರುತ್ತೆ ಎಂಬುದರಿಂದ ಹಿಡಿದು, ಕಪ್ಪು ಹಣ ನಿಗ್ರಹ, ರೈತರ ಆದಾಯ ದ್ವಿಗುಣ, ಅಚ್ಚೇದಿನ್‌ ಆಯೇಗಾ, ನಾ ಖಾವೂಂಗಾ ನಾ ಖಾನೇದೂಂಗ ಎನ್ನುವ ಎಲ್ಲ ಭರವಸೆಗಳೂ ಹುಸಿಯಾಗಿವೆ. ಅಲ್ಪಸಂಖ್ಯಾತರನ್ನು ಬಿಜೆಪಿ ನೇರವಾಗಿ ವಿರೋಧಿಸಿದರೆ ಜೆಡಿಎಸ್‌ ಒಳಗೊಳಗೆ ವಿರೋಧಿಸುತ್ತದೆ. ಹಲಾಲ್‌, ಹಿಜಾಬ್‌, ಹಬ್ಬ, ಜಾತ್ರೆಗಳಲ್ಲಿ ಮುಸ್ಲಿಂರಿಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದನ್ನು ನೋಡಿದರೆ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ: ಸಿದ್ದು ಸವಾಲ್‌

ಎಚ್ಡಿಕೆಗೆ ತಿರುಗೇಟು

ಕಾಂಗ್ರೆಸ್‌ನವರು ತಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಳೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದಿದ್ದರಿಂದ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕಾಗಿ ಜೆಡಿಎಸ್‌ಗೆ ಬೆಂಬಲ ಕೊಟ್ಟಿದ್ದೇವೆಯೇ ಹೊರತು ಕುಮಾರಸ್ವಾಮಿಯವರು ಜನೋಪಕಾರಿ ಮುಖ್ಯಮಂತ್ರಿ ಅಂತ ಅಲ್ಲ. 37 ಸ್ಥಾನ ಗೆದ್ದ ಜೆಡಿಎಸ್‌ಗೆ 80 ಸ್ಥಾನ ಗೆದ್ದಿದ್ದ ನಾವು ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೆವು. ಆಸಾಮಿ, ಅಧಿಕಾರ ಉಳಿಸಿಕೊಳ್ಳಲಿಲ್ಲ. ಕೊಟ್ಟಕುದುರೆಯ ಏರಲರಿಯದವನು ವೀರನೂ ಅಲ್ಲ, ಧೀರನೂ ಅಲ್ಲ ಎಂದು ಕುಟುಕಿದರು.

ಬಿಜೆಪಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್‌ ಕಮಲ ಮೂಲಕ ಕೋಟ್ಯಂತರ ರು.ಖರ್ಚು ಮಾಡಿ ಶಾಸಕರುಗಳನ್ನು ಖರೀದಿಸಿ, ಅನೈತಿಕವಾಗಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ನಿಂದ 14 ಜನ, ಜೆಡಿಎಸ್‌ನಿಂದ 3 ಜನರನ್ನು 40 ಪರ್ಸೆಂಟ್‌ ಕಮೀಷನ್‌ ಹಣದಲ್ಲಿ ಖರೀದಿಸಿದ ಪಕ್ಷ ಎಂದು ಟೀಕಿಸಿದರು.