ಮಾಜಿ ಸ್ಪೀಕರ್‌ ಕೃಷ್ಣ ತತ್ವ, ಸಿದ್ದಾಂತಗಳಿಗೆ ಬದ್ಧರಾದ ರಾಜಕಾರಣಿ. ಪ್ರಾಮಾಣಿಕ ರಾಜಕಾರಣಿಗಳಿಗೆ ಜನರಿಂದ ಸೂಕ್ತ ಪುರಸ್ಕಾರ ಸಿಗುತ್ತಿಲ್ಲ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ವಿಷಾಧಿಸಿದರು.

ಕೆ.ಆರ್‌.ಪೇಟೆ (ಜು.02): ಮಾಜಿ ಸ್ಪೀಕರ್‌ ಕೃಷ್ಣ ತತ್ವ, ಸಿದ್ದಾಂತಗಳಿಗೆ ಬದ್ಧರಾದ ರಾಜಕಾರಣಿ. ಪ್ರಾಮಾಣಿಕ ರಾಜಕಾರಣಿಗಳಿಗೆ ಜನರಿಂದ ಸೂಕ್ತ ಪುರಸ್ಕಾರ ಸಿಗುತ್ತಿಲ್ಲ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ವಿಷಾಧಿಸಿದರು. ಎಸ್‌.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ಮಾಜಿ ಸ್ಪೀಕರ್‌ ಕೃಷ್ಣ ಪ್ರತಿಷ್ಠಾನದಂದ ಆಯೋಜಿಸಿದ್ದ ಕೃಷ್ಣರ 83ನೇ ಜನ್ಮ ದಿನ ಸ್ಮರಣೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿದ್ಧಾಂತದ ರಾಜಕಾರಣ ನಮಗೆ ಇಷ್ಟವಾದರೂ ಇಂದಿನ ರಾಜಕಾರಣದಲ್ಲಿ ಅದು ಸಾಧ್ಯವಿಲ್ಲದಂತಾಗಿದೆ. ನಮ್ಮಂತವರು ಸನ್ನಿವೇಶದ ಒತ್ತಡಗಳಿಗೆ ಮಣಿದು ಸಿದ್ದಾಂತದ ರಾಜಕಾರಣದ ಚೌಕಟ್ಟು ಮೀರಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಸಮಾಜಮುಖಿ ಕೆಲಸ ಮಾಡುವ ಮತ್ತು ಚಿಂತನೆ ಮೈಗೂಡಿಸಿಕೊಂಡಿರುವ ರಾಜಕಾರಣಿಗಳಿಗೆ ಪ್ರೋತ್ಸಾಹದ ಕೊರತೆಯಿದೆ. ರಾಜಕಾರಣದಲ್ಲಿ ಒಂದಷ್ಟುಒಳ್ಳೆಯ ಜನ ಮತ್ತು ಸ್ವಾರ್ಥ ರಹಿತ ಚಿಂತಕರಿದ್ದಾರೆ. ಆದರೆ, ಅವರಿಗೆ ಜನರಿಂದ ಗೆಲುವಿನ ಫಲಿತಾಂಶ ಸಿಕ್ಕುವ ಸ್ಥಿತಿಯಿಲ್ಲ ಎಂದರು. ಸರಳ ನಡೆ ಮತ್ತು ಸ್ವಚ್ಚ ರಾಜಕಾರಣದ ಮೂಲಕ ಜಿಲ್ಲೆಗೆ ಕೀರ್ತಿ ತಂದ ರಾಜಕಾರಣಿಗಳ ಸಾಲಿನಲ್ಲಿ ಕೆ.ಆರ್‌.ಪೇಟೆ ಕೃಷ್ಣ ನಿಲ್ಲುತ್ತಾರೆ. ಸನ್ಮಾನಗಳಿಗಿಂತ ಕೃಷ್ಣ ಅವರ ಬದುಕಿನ ದಾರಿಯನ್ನು ಯುವಕರಿಗೆ ಪರಿಚಯ ಮಾಡಿಸುವ ಕೆಲಸದಲ್ಲಿ ಕೃಷ್ಣ ಪ್ರತಿಷ್ಠಾನ ಮಾಡಬೇಕು ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ

ಪಾಲಿಟೆಕ್ನಿಕ್‌ಗೆ ಎಂ.ಕೆ.ಬೊಮ್ಮೇಗೌಡ ಹೆಸರಿಡಿ: ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿಗೆ ರಾಜ್ಯ ಸರ್ಕಾರ ಮಾಜಿ ಸ್ಪೀಕರ್‌ ಕೃಷ್ಣರ ಹೆಸರನ್ನಿಟ್ಟು ಗೌರವಿಸಿದೆ. ಇದೇ ಮಾದರಿಯಲ್ಲಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ 1960ರ ದಶಕದಲ್ಲಿ ಪಾಲಿಟೆಕ್ನಿಕ್‌ ಕಾಲೇಜು ತಂದ ಅಂದಿನ ಶಾಸಕ ದಿ.ಎಂ.ಕೆ.ಬೊಮ್ಮೇಗೌಡರ ಹೆಸರನ್ನಿಡುವಂತೆ ಕ್ಷೇತ್ರದ ಜನ ಬಯಸುತ್ತಿದ್ದಾರೆ ಎಂದು ಕೃಷ್ಣ ಪ್ರತಿಷ್ಠಾನದ ಸದಸ್ಯರು ಸಚಿವರಿಗೆ ಬಹಿರಂಗ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು, ಇದಕ್ಕೆ ನನ್ನ ವಿರೋಧವಿಲ್ಲ. ಕಾಲೇಜಿಗೆ ಬೊಮ್ಮೇಗೌಡರ ಹೆಸರಿಡುವ ಬಗ್ಗೆ ಚಿಂತಿಸೋಣ. 

ಆದರೆ, ಸರ್ಕಾರಿ ಕಾಲೇಜುಗಳಿಗೆ ರಾಜಕೀಯ ವ್ಯಕ್ತಿಗಳ ಹೆಸರಿಡುತ್ತಾ ಹೋದರೆ ಮುಂದೊಂದು ದಿನ ಅದು ಕೆಟ್ಟಸಂಪ್ರದಾಯವೊಂದಕ್ಕೆ ಮುನ್ನುಡಿ ಬರೆದಂತಾಗಬಹುವುದೆನ್ನುವ ಆತಂಕ ನನಗಿದೆ ಎಂದರು. ಗಣನೀಯ ಸಾಧನೆ ಮಾಡಿದ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಪ್ರಗತಿಪರ ರೈತ ಎಚ್‌.ರಮೇಶ್‌, ಸಾವಯವ ಕೃಷಿಕ ಪ್ರಸನ್ನ, ಅಂಗನವಾಡಿ ಕಾರ್ಯಕರ್ತೆ ಬಿ.ಕೆ.ಶೋಭಾ, ಆಶಾ ಕಾರ್ಯಕರ್ತೆ ಎಂ.ಆರ್‌.ಜ್ಯೋತಿ, ಉರುಗ ತಜ್ಞ ಸ್ನೇಕ್‌ ಮುನ್ನಾ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕೇಂದ್ರವು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯದಿಂದ ಅಕ್ಕಿ ಕೊಡ್ತಿಲ್ಲ: ಸಚಿವ ಚಲುವರಾಯಸ್ವಾಮಿ

ಕಾರ್ಯಕ್ರಮದಲ್ಲಿ ಕೃಷ್ಣ ಪ್ರತಿಷ್ಟಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಚ್‌ .ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಕಾಂಗ್ರೆಸ್‌ ಮುಖಂಡ ಬಿ.ದೇವರಾಜು, ಕೃಷ್ಣರ ಪತ್ನಿ ಇಂದಿರಾ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎ.ಎನ್‌.ಜಾನಕೀರಾಮ, ಮನ್ಮುಲ್‌ ನಿರ್ದೇಶಕ ಡಾಲು ರವಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್‌, ಬಿ.ನಾಗೇಂದ್ರಕುಮಾರ್‌, ಜಿಪಂ ಮಾಜಿ ಸದಸ್ಯರಾದ ರಾಮದಾಸ್‌, ಶೀಳನೆರೆ ಅಂಬರೀಶ್‌, ಮನ್ಮುಲ… ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್‌, ಎಂಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಕೆ.ಅಶೋಕ್‌, ರೈತ ಮುಖಂಡ ಕೆ.ಆರ್‌..ಜಯರಾಂ, ಬೂಕನಕೆರೆ ಜವರಾಯಿಗೌಡ, ಐಚನಹಳ್ಳಿ ಶಿವಣ್ಣ, ಕೆ.ಜೆ.ತಮ್ಮಣ್ಣ, ಅಂ.ಚಿ.ಸಣ್ಣಸ್ವಾಮಿಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್‌ ಇದ್ದರು.