Asianet Suvarna News Asianet Suvarna News

ಕೇಂದ್ರವು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯದಿಂದ ಅಕ್ಕಿ ಕೊಡ್ತಿಲ್ಲ: ಸಚಿವ ಚಲುವರಾಯಸ್ವಾಮಿ

ಜನರಿಗೆ ಒಳ್ಳೆಯ ಕಾರ್ಯಕ್ರಮ ಕೊಡೋದು ಬಿಜೆಪಿಗೆ ಇಷ್ಟವಿಲ್ಲ. ಇದೇ ಕಾರಣಕ್ಕೆ ಅಕ್ಕಿ ಇದ್ದರೂ ಕೇಂದ್ರ ಕೊಡುತ್ತಿಲ್ಲ. ದುಡ್ಡು ಕೊಟ್ಟರೂ ಅಕ್ಕಿ ಕೊಡದಿದ್ದರೆ ಇದು ಜನವಿರೋಧಿ ನಿಲುವಲ್ಲದೆ ಮತ್ತೇನು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದರು. 

Minister N Cheluvarayaswamy Slams On Central Govt Over Rice Issue gvd
Author
First Published Jun 29, 2023, 12:30 AM IST

ಮಂಡ್ಯ (ಜೂ.29): ಜನರಿಗೆ ಒಳ್ಳೆಯ ಕಾರ್ಯಕ್ರಮ ಕೊಡೋದು ಬಿಜೆಪಿಗೆ ಇಷ್ಟವಿಲ್ಲ. ಇದೇ ಕಾರಣಕ್ಕೆ ಅಕ್ಕಿ ಇದ್ದರೂ ಕೇಂದ್ರ ಕೊಡುತ್ತಿಲ್ಲ. ದುಡ್ಡು ಕೊಟ್ಟರೂ ಅಕ್ಕಿ ಕೊಡದಿದ್ದರೆ ಇದು ಜನವಿರೋಧಿ ನಿಲುವಲ್ಲದೆ ಮತ್ತೇನು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದರು. ಕಾಂಗ್ರೆಸ್‌ ಸರ್ಕಾರ ಬಡವರಿಗೆ 10 ಕೆಜಿ ಅಕ್ಕಿ ನೀಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯದಿಂದ ಅಕ್ಕಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯವರು ಏನೇನ್‌ ಮಾಡುತ್ತಾರೋ ಮಾಡಲಿ. ನಾವು ನಮ್ಮ ಪಾಡಿಗೆ ಕೆಲಸ ಮಾಡ್ತೇವೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಬಗ್ಗೆ ಚಿಂತೆ ಇಲ್ಲ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ವಿಚಾರವಾಗಿ ಪ್ರಶ್ನಿಸಿದಾಗ, ಹೊಂದಾಣಿಕೆ ಮಾಡಿಕೊಳ್ಳುವುದು, ಬಿಡೋದು ಬಿಜೆಪಿ-ಜೆಡಿಎಸ್‌ ಪಕ್ಷಕ್ಕೆ ಬಿಟ್ಟವಿಚಾರ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವರೋ, ಒಳ ಹೊಂದಾಣಿಕೆ ಮಾಡಿಕೊಳ್ಳುವರೋ ಅಥವಾ ವಿಲೀನವಾಗುವರೋ ಅದು ಅವರಿಗೆ ಸಂಬಂಧಿಸಿದ್ದು. ಈಗ ನಮಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಒಳ್ಳೆಯ ಕೆಲಸ ಮಾಡೋಣ. ಚುನಾವಣೆ ಎದುರಾದಾಗ ನಮ್ಮ ಪಕ್ಷ ಸಮರ್ಥವಾಗಿ ಎದುರಿಸುತ್ತದೆ. ಯಾವ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ ಎನ್ನುವುದು ನಮಗೆ ಅನವಶ್ಯಕ ಎಂದು ನೇರವಾಗಿ ಹೇಳಿದರು. ಬಿಜೆಪಿ-ಜೆಡಿಎಸ್‌ಗೆ ಕಾಂಗ್ರೆಸ್‌ ಪಕ್ಷ ಟಾರ್ಗೆಟ್‌ ಆಗದೆ ಬೇರೆ ಯಾವ ಪಕ್ಷ ಟಾರ್ಗೆಟ್‌ ಆಗೋಕೆ ಸಾಧ್ಯ. ರಾಜ್ಯದಲ್ಲಿ ಇರೋದೆ ಮೂರು ಪಕ್ಷ. ಅವರಿಬ್ಬರೂ ಸೇರಿದ ಮೇಲೆ ಕಾಂಗ್ರೆಸ್‌ ಪಕ್ಷವನ್ನೇ ಟಾರ್ಗೆಟ್‌ ಮಾಡಬೇಕು ಎಂದು ನಗುತ್ತಲೇ ಉತ್ತರಿಸಿದರು.

ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್‌

ಜು.5ರೊಳಗೆ ಒಳ್ಳೆಯ ಮಳೆ: ಮುಂಗಾರು ಆರಂಭದಲ್ಲೇ ಕೈಕೊಟ್ಟಿದೆ. ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟಕುಸಿಯತೊಡಗಿದೆ. ಜುಲೈ 5ರೊಳಗೆ ಒಳ್ಳೆಯ ಮಳೆಯಾಗಲಿದೆ ಎನ್ನುವ ವರದಿ ಇದೆ. ನಾವೂ ಮಳೆಗಾಗಿ ಪ್ರಾರ್ಥನೆ ಮಾಡಿದ್ದೇವೆ, ನಾಡಿನ ಜನರು ಪ್ರಾರ್ಥನೆ ಮಾಡಬೇಕು. ಮುಂದಿನ ಐದಾರು ದಿನದಲ್ಲಿ ಒಳ್ಳೆಯ ಮಳೆಯಾಗಲಿದೆ ಎಂಬ ನಂಬಿಕೆ ಇದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿನ ಬಾಂಬೆ ಟೀಂ ಮೇಲೆ ಈಶ್ವರಪ್ಪ ಕಿಡಿಕಾರಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ಆಂತರಿಕ ಜಗಳ. ನಾವು ಜಗಳ ಆಡಬೇಡಿ ಎಂದು ಹೇಳೋಕೆ ಆಗುತ್ತಾ. ಅವರಿಗೆ ಏನೇನು ಸಮಸ್ಯೆ ಇದೆಯೋ, ಏನೇನು ನೋವಿದೆಯೋ ನಮಗೆ ಗೊತ್ತಿಲ್ಲ. ಅದನ್ನ ಅವರು, ಅವರ ನಾಯಕರು ಸರಿಪಡಿಸಿಕೊಳ್ಳಬೇಕು ಎಂದರು.

ಒಳ್ಳೆಯ ಆಡಳಿತ ಕೊಡಲಿಲ್ಲ: ಪಕ್ಷದ ಶಿಸ್ತು ಕಾಂಗ್ರೆಸ್‌ನಿಂದ ಬಂದವರಿಂದ ಹೋಯಿತು ಎಂಬ ಈಶ್ವರಪ್ಪ ಹೇಳಿಕೆಗೆ ಉತ್ತರಿಸಿದ ಚಲುವರಾಯಸ್ವಾಮಿ, ಅದಕ್ಕೆ ಹೋಗಿರುವವರು, ಕರೆದುಕೊಂಡು ಬಂದವರು ಉತ್ತರ ಕೊಡಬೇಕು. ಅದೆಲ್ಲಾ ಈಗ ಮುಗಿದು ಹೋದ ಅಧ್ಯಾಯ. ಕಾಂಗ್ರೆಸ್‌ನಿಂದ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಅದರಿಂದ ಜನರಿಗೆ ಯಾವ ಉಪಯೋಗವೂ ಆಗಲಿಲ್ಲ. ಉತ್ತಮ ಆಡಳಿತ ನೀಡಲು ಸಾಧ್ಯತವಾಗದೆ ಕೆಟ್ಟಹೆಸರು ತೆಗೆದುಕೊಂಡರು. ಹೀಗೆಲ್ಲಾ ಮಾಡಿ ಎಂದು ನಾವು ಹೇಳಿದ್ದೆವಾ ಎಂದು ಪ್ರಶ್ನಿಸಿದರು. ಬಿಜೆಪಿಯವರ ಕೆಟ್ಟಆಡಳಿತದಿಂದ ರೋಸಿಹೋದ ಜನರು 135 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ ಸ್ಥಿರ ಸರ್ಕಾರವನ್ನು ಕೊಟ್ಟಿದ್ದಾರೆ. ಅದನ್ನು ಸಹಿಸಲಾಗದೆ ಕಾಂಗ್ರೆಸ್‌ ಬಗ್ಗೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ದೂಷಿಸಿದರು.

ಪಟೇಲ್‌ ಮಾತು ಅನ್ವಯ: ಡಿಸೆಂಬರ್‌ಗೆ ಕಾಂಗ್ರೆಸ್‌ ಸರ್ಕಾರ ಬಿದ್ದೋಗುತ್ತೆ ಎಂಬ ಮಾಲಿಕಯ್ಯ ಗುತ್ತಿಗೆದಾರ ಹೇಳಿಕೆಗೆ, ಏನ್‌ ಜೋಕಾ ಎನ್ನುತ್ತಲೇ ಬಿಜೆಪಿ ನಾಯಕರಿಗೆ ಟಾಂಗ್‌ ಕೊಟ್ಟಸಚಿವ ಚಲುವರಾಯಸ್ವಾಮಿ. ಜೆ.ಎಚ್‌.ಪಟೇಲ್‌ ಒಂದು ಮಾತು ಹೇಳಿದ್ದರು. ಅದನ್ನು ಹೇಳೋಕೆ ಹೋದರೆ ಸರಿಹೋಗೋಲ್ಲ. ಅದನ್ನ ಹಿರಿಯರಾದವರು ಹೇಳಿದರೇನೇ ಚೆನ್ನ. ನಾನು ಆ ಮಾತು ಹೇಳುವುದಿಲ್ಲ ಎಂದರು.

Ramanagara: ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ

ರಮ್ಯಾ ಬರುವುದು ತೀರ್ಮಾನವಾಗಿಲ್ಲ: ನಟಿ ರಮ್ಯಾ ಮಂಡ್ಯ ಲೋಕಸಭೆಗೆ ಮತ್ತೆ ಬರ್ತಾರಾ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ, ಇನ್ನೂ ಅಂತಿಮವಾಗಿ ತೀರ್ಮಾನ ಮಾಡಿಲ್ಲ. ಇಲ್ಲಿಯೇ ಬಹಳಷ್ಟುಜನ ಲೋಕಸಭೆಗೆ ಆಕಾಂಕ್ಷಿತರಿದ್ದಾರೆ. ಹೊರಗಡೆಯಿಂದ ಅಭ್ಯರ್ಥಿಯನ್ನು ತರುವ ಅವಶ್ಯಕತೆ ಇಲ್ಲ. ಎಲ್ಲರೂ ಕೂತು ಇಲ್ಲಿಯೇ ಒಂದು ತೀರ್ಮಾನ ಮಾಡುತ್ತೇವೆ. ಹೊಂದಾಣಿಕೆಯಾದರೂ ನಮ್ಮ ಅಭ್ಯರ್ಥಿಯನ್ನು ಹಾಕಿ ಗೆಲ್ಲಿಸುತ್ತೇವೆ ಎಂದು ದೃಢವಾಗಿ ಹೇಳಿದರು.

Follow Us:
Download App:
  • android
  • ios