*  ಇಡೀ ರಾಜ್ಯದಲ್ಲಿ ಹೋರಾಟ ಮಾಡಿ ಪಕ್ಷ ಅಧಿಕಾರಕ್ಕೆ ತರುತ್ತೇನೆ: ದೊಡ್ಡಗೌಡರು*  ಮೋದಿ ಜತೆ ಅಭಿವೃದ್ಧಿ ಕುರಿತು ಚರ್ಚೆ*  ನನ್ನ ಪಕ್ಷ ನಿಷ್ಠೆ ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ 

ತುಮಕೂರು(ಡಿ.04): ‘ನನಗೆ ಕಾಲು ನೋವು ಇದೆಯೆಂದು ಪ್ರಧಾನಿಯವರೇ(Narendra Modi) ಕರೆದುಕೊಂಡು ಹೋಗುತ್ತಾರೆ. ಇಂತಹ ಗೌರವ ಸಂಪಾದನೆ ಮಾಡುವ ಯೋಗ್ಯತೆ ಇವರಿಗೆ ಇದ್ಯಾ?’ ಎಂದು ತಮ್ಮ ವಿರುದ್ಧ ಲೋಕಸಭೆ ಚುನಾವಣೆ ವೇಳೆ ಅಪಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ(KN Rajanna) ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್(Shrinivas) ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(HD Devegowda) ಗುಡುಗಿದ್ದಾರೆ. 

ಹೇರೂರಿನಲ್ಲಿ ಜೆಡಿಎಸ್(JDS) ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡರಿಗೆ 89 ವರ್ಷವೆಂದು ಯೋಚಿಸಬೇಡಿ. ಇಡೀ ರಾಜ್ಯದಲ್ಲಿ(Karnataka) ಹೋರಾಟ ಮಾಡಿ ಪಕ್ಷ ಅಧಿಕಾರಕ್ಕೆ ತರುವುದಾಗಿ ಹೇಳಿದರು. ನಮ್ಮ ಸಮಾಜವನ್ನು ಒಡೆದು ನಮ್ಮ ಶಕ್ತಿ ನಾಶ ಮಾಡಲಿಕ್ಕೆ ಹೊರಟಿದ್ದಾರೆ. ನನ್ನ ಸಮಾಜ ಒಡೆಯುತ್ತಿರುವುದಕ್ಕೆ ನೋವಿದೆ. ನಾನು ಜೀವಂತವಾಗಿರುವವರೆಗೂ ಅದು ಆಗಬಾರದು ಎಂದು ಹೇಳಿದರು.

Modi meets HD Devegowda: ಹಾಲಿ ಮತ್ತು ಮಾಜಿ ಪಿಎಂ ಸಮಾಗಮ, ರಾಜಕಾರಣಕ್ಕೆ ಹೊಸ ಗಮ್ಯ

ನನ್ನ ಪಕ್ಷ ನಿಷ್ಠೆ ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ

ಚಿಕ್ಕಬಳ್ಳಾಪುರ(Chikkaballapur): ದೇಶದ ರಾಜಕಾರಣ(Politics) ತುಂಬ ಹದೆಗಟ್ಟಿದೆ. ಆದರೆ ನನ್ನ ರಾಜಕೀಯ ನಿಷ್ಠೆಯನ್ನು ಯಾವ ವ್ಯಕ್ತಿಯು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನನ್ನ ಆತ್ಮ, ಶರೀರ ಇರುವರೆಗೂ ನಾನು ಕಾಂಗ್ರೆಸ್‌, ಬಿಜೆಪಿ(BJP) ಸೇರುವ ವ್ಯಕ್ತಿ ಅಲ್ಲ. ಇಂದಿರಾ ಗಾಂಧಿಯೆ(Indira Gandhi) ನನ್ನನ್ನು ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನ ಮಾಡಿದರೂ ನಾನು ಹೋಗಲಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. 
ಹಾಸನದಲ್ಲಿ ರಾಹುಲ್‌ ಗಾಂಧಿ(Rahul Gandhi) ಮೂಲಕವೇ ಜೆಡಿಎಸ್‌, ಬಿಜೆಪಿ ಬಿ ಟೀಮ್‌ ಎಂದು ಹೇಳಿಸಿದವರೇ ಸೋನಿಯಾ ಗಾಂಧಿ(Sonia Gandhi), ರಾಹುಲ್‌ ಗಾಂಧಿ ಫಾರ್ಮಾನು ಪಡೆದು ನನ್ನ ಮನೆ ಬಾಗಿಲಿಗೆ ಬಂದು ಕುಮಾರಸ್ವಾಮಿಯನ್ನು(HD Kumaraswamy) ಸಿಎಂ ಮಾಡಿಯೆಂದು ಬೇಡಿಕೊಂಡರು ಎಂದು ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಜತೆ ಅಭಿವೃದ್ಧಿ ಕುರಿತು ಚರ್ಚೆ

ತಮ್ಮನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿರುವ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಮೋದಿ ಭೇಟಿ ಮಾಡಿದ್ದಕ್ಕೆ ನಾನು ಬಿಜೆಪಿಗೆ ಹೋಗುತ್ತೇನೆಂದು ಹೇಳಿದ್ದಾರೆ. ಏಳುವರೆ ವರ್ಷದಲ್ಲಿ ಮೋದಿ ಅವರನ್ನು 5 ಬಾರಿ ಮಾತ್ರ ಭೇಟಿ ನೀಡಿದ್ದೇನೆ. ಹಾಸನ ಸೇರಿದಂತೆ ರಾಜ್ಯದ ಅಭಿವೃದ್ಧಿ ಕುರಿತು ವಿಚಾರ ಮಾಡಿದ್ದೇನೆ ಹೊರತು ಸ್ವಂತ ಕೆಲಸಕ್ಕೆ ಎಂದೂ ಭೇಟಿ ಮಾಡಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾರು ಎಷ್ಟೇ ಒತ್ತಡ ತಂದರೂ ನನ್ನ ಜವಾಬ್ಧಾರಿಯಿಂದ ಹಿಂದೆ ಸರಿದಿಲ್ಲ ಎಂದರು.

1977 ರಲ್ಲಿ ಮೂರಾರ್ಜಿ ದೇಸಾಯಿ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ನನ್ನ ರಾಜಕೀಯ ನಿಷ್ಠೆ ಬದಲಿಸಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೇರುವ ಬಗ್ಗೆ ಟೀಕಿಸಿರುವ ಸಿದ್ದರಾಮಯ್ಯಗೆ ಜೆಡಿಎಸ್‌ ವರಿಷ್ಠ ದೇವೇಗೌಡ ತಿರುಗೇಟು ನೀಡಿದರು. ಮೋದಿಯವರುದ್ದು ಕೆಟ್ಟ ಸರ್ಕಾರ ಇರಬಹುದು. ಆದರೆ ನಾನು ಹೋದಾಗಲೆಲ್ಲಾ ಮೋದಿ ಅತ್ಯಂತ ಗೌರವದಿಂದ ನೋಡಿಕೊಂಡಿದ್ದಾರೆ. ಜೆಡಿಎಸ್‌ ಬಡವರ ಪಕ್ಷ, ಈ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಏನಾಗುತ್ತಿದೆಯೆಂದು ಎಲ್ಲರಿಗೂ ಗೊತ್ತಿದೆ ಎಂದರು.

Karnataka Politics: ನನ್ನ ಶರೀರ ಇರೋವರೆಗೂ ಕೈ, ಕಮಲ ಸೇರಲ್ಲ: ದೇವೇಗೌಡ

ಯಾವ ವ್ಯಕ್ತಿ ರಾಜ್ಯದಲ್ಲಿ 5 ವರ್ಷ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಜೆಡಿಎಸ್‌ ಮುಗಿಸುತ್ತೇವೆಂದು ಹೇಳಿದ್ದರು. ಆದರೆ ಬಳಿಕ ನಡೆದ ಚುನಾವಣೆಯಲ್ಲಿ(Election) 78 ಸೀಟು ಪಡೆದರು. ಅಕ್ಕಿ ಭಾಗ್ಯ ಸೇರಿ ಎಲ್ಲಾ ಭಾಗ್ಯಗಳ ಸುರಿಮಳೆಗೈದರೂ ಜನ ಅವರಿಗೆ ಬಹುಮತ ಕೊಡಲಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸೋತ ಪರಿಸ್ಥಿತಿಯನ್ನು ದೇವೇಗೌಡರು ನೆನಪಿಸಿದರು.

ಪ್ರಚಾರ ಸಭೆಯಲ್ಲಿ ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಎಂಎಲ್‌ಸಿ ಇಂಚರ ಗೋವಿಂದರಾಜು, ಮಾಜಿ ಎಂಎಲ್‌ಸಿ ತೂಪಲ್ಲಿ ಆರ್‌.ಚೌಡರೆಡ್ಡಿ, ಮಾಜಿ ಶಾಸಕ ಕೋಲಾರದ ಕೆ.ಪಿ.ಬಚ್ಚೇಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಮಟಮಪ್ಪ, ಅಭ್ಯರ್ಥಿ ವಕ್ಕಲೇರಿ ರಾಜು, ಯುವ ಮುಖಂಡ ಶಿಡ್ಲಘಟ್ಟದ ಮೇಲೂರು ರವಿಕುಮಾರ್‌ ಸೇರಿದಂತೆ ಮತ್ತಿತರರು ಇದ್ದರು.

ಉಸಿರು ಇರುವ ತನಕ ಪಕ್ಷ ಸಂಘಟನೆ

ಆ ಪುಣ್ಯಾತ್ಮನನ್ನು ನಾನೇ ಸ್ಪೀಕರ್‌ ಮಾಡಿದ್ದೆ. ಈಗ ಆತ ಮಹಾನ್‌ ನಾಯಕನಾಗಿದ್ದಾನೆ. ಇವರ ಬಂಡವಾಳ ನನಗೆ ಸಾಕಷ್ಟು ಗೊತ್ತಿದೆಯೆಂದು ಹೇಳುವ ಮೂಲಕ ಪಕ್ಕದ ಶ್ರೀನಿವಾಸಪುರದ ಕಾಂಗ್ರೆಸ್‌ ಶಾಸಕರಾದ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ವಿರುದ್ಧವೂ ಜೆಡಿಎಸ್‌ ವರಿಷ್ಠ ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ(Assembly Election) ವಕ್ಕಲೇರಿ ರಾಮುಗೆ ಕೊಟ್ಟಿದ್ದ ಪಕ್ಷದ ಬಿ.ಫಾರಂ ಕೊನೆ ಕ್ಷಣದಲ್ಲಿ ವಾಪಸ್ಸು ಪಡೆದು ಕೆ.ಶ್ರೀನಿವಾಸಗೌಡರಿಗೆ ಕೊಟ್ಟು ಗೆಲ್ಲಿಸಿದವು. ಈಗ ಅ ಮನುಷ್ಯ ಕೂಡ ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆ. ಯಾರೇ ಪಕ್ಷ ಬಿಡಲಿ ನನ್ನ ಉಸಿರು ಇರುವ ತನಕ ಜೆಡಿಎಸ್‌ ಪಕ್ಷವನ್ನು ಸಂಘಟಿಸುತ್ತೇನೆಂದು ಹೆಚ್‌.ಡಿ.ದೇವೇಗೌಡ ಶಪಥ ಮಾಡಿದರು.