Asianet Suvarna News Asianet Suvarna News

ಪಕ್ಷಕ್ಕಾಗಿ ದುಡಿದ ನನ್ನನ್ನೇ ನಿರ್ಲಕ್ಷಿಸಿದರೆ ಹೇಗೆ?: ಕಾಂಗ್ರೆಸ್‌ ನಾಯಕ ಶಿವಶಂಕರ ರೆಡ್ಡಿ

ತಮ್ಮನ್ನು ಬಿಜೆಪಿ ನಾಯಕರು ಸಂಪರ್ಕಿಸಿದ ಬಗ್ಗೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಗೆ ವಿವರಿಸಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ 25 ವರ್ಷಗಳ ಕಾಲ ಶಾಸಕನಾಗಿ, ವಿಧಾನಸಭೆಯ ಉಪಾಧ್ಯಕ್ಷನಾಗಿ, ಕೃಷಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಶ್ರಮವಹಿಸಿ ದುಡಿದಿದ್ದೇನೆ ಎಂದ ಶಿವಶಂಕರ ರೆಡ್ಡಿ 

Former Minister NH Shivashankar Reddy Talks Over Congress grg
Author
First Published Mar 8, 2024, 12:45 PM IST

ಚಿಕ್ಕಬಳ್ಳಾಪುರ(ಮಾ.08):  ನಾನು ಕಾಂಗ್ರೆಸ್ ವರಿಷ್ಠರಿಗೆ ಬ್ಲಾಕ್ ಮೇಲ್ ಮಾಡಿಲ್ಲ. ಬದಲಾಗಿ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದೆ. ಅದರ ಪರಿಣಾಮವೇ ನನ್ನನ್ನು ಪಕ್ಷದ ಹಿರಿಯ ನಾಯಕರು ಕರೆಸಿ ಮಾತನಾಡಿಸಿದರು ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ನಗರದ ಹೊರವಲಯದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಬಿಜೆಪಿ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮನ್ನು ಬಿಜೆಪಿ ನಾಯಕರು ಸಂಪರ್ಕಿಸಿದ ಬಗ್ಗೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಗೆ ವಿವರಿಸಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ 25 ವರ್ಷಗಳ ಕಾಲ ಶಾಸಕನಾಗಿ, ವಿಧಾನಸಭೆಯ ಉಪಾಧ್ಯಕ್ಷನಾಗಿ, ಕೃಷಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಶ್ರಮವಹಿಸಿ ದುಡಿದಿದ್ದೇನೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನನ್ನ ಮಗನೂ ಪ್ರಬಲ ಆಕಾಂಕ್ಷಿ: ಶಾಸಕ ಎಸ್.ಆರ್.ವಿಶ್ವನಾಥ್

ಜಿಲ್ಲೆಯಲ್ಲಿ ಎಲ್ಲಾ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೇನೆ, ಇಷ್ಟೆಲ್ಲಾ ದುಡಿದ ನನ್ನನ್ನೇ ನಿರ್ಲಕ್ಷಿಸಿದರೆ ಹೇಗೆ? ಎಂದು ಕಾಂಗ್ರೆಸ್ ನಾಯಕರಿಗೆ ಶಿವಶಂಕರರೆಡ್ಡಿ ಪ್ರಶ್ನೆ ಮಾಡಿದರು.

ಬರುವ ಲೋಕಸಭಾ ಚುನಾವಣೆಯಲ್ಲಿ ನಾನೂ ಸಹ ಆಕಾಂಕ್ಷಿಯಾಗಿದ್ದೇನೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಹೈಕಮಾಂಡ್ ಗೆ ಒಬ್ಬರ ಹೆಸರು ಮಾತ್ರ ಹೋಗಿಲ್ಲ. ಬದಲಾಗಿ ಮೂವರು ಆಕಾಂಕ್ಷಿಗಳ ಹೆಸರು ಹೋಗಿದೆ. ಅದರಲ್ಲಿ ಮಾಜಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ, ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಮತ್ತು ನನ್ನ ಹೆಸರೂ ಹೋಗಿದೆ. ನಾನೂ ಕೂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದು ಹೇಳಿದರು.

ಮಾಜಿ ಸಚಿವ ಗೌರಿಬಿದನೂರಿನ ಎನ್‌.ಎಚ್‌.ಶಿವಶಂಕರ ರೆಡ್ಡಿಗೆ ಬಿಜೆಪಿ ಗಾಳ ಹಾಕಿದೆಯೆಂಬ ಮಾತು ಬಲವಾಗಿ ಕೇಳಿ ಬರುತ್ತಿತ್ತು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ರೆಡ್ಡಿ ಸೇರ್ಪಡೆ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.

ಲೋಕಸಭಾ ಚುನಾವಣೆ 2024: ಚಿಕ್ಕಬಳ್ಳಾಪುರ ಎಂಪಿ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಸಿದ್ಧತೆ..!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿ ಗೌಡ ವಿರುದ್ಧ ಸೋತ ಬಳಿಕ ಎನ್.ಎಚ್.ಶಿವಶಂಕರರೆಡ್ಡಿ ಕಾಂಗ್ರೆಸ್ ನಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳಿದ್ದರು. ಆದರೆ ಬಿಜೆಪಿ ನಾಯಕರು ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದರು.

ವರ್ಗಾವಣೆ, ನಿಗಮ ಮಂಡಳಿ, ನಾಮ ನಿರ್ದೇಶನಗಳಲ್ಲಿ ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ ಬೆಂಬಲಿಗರಿಗೆ ಕಾಂಗ್ರೆಸ್ ನಾಯಕರು ಹೆಚ್ಚಿನ ಅವಕಾಶ ಕಲ್ಪಿಸಿಕೊಡುತ್ತಿರುವುದು ಶಿವಶಂಕರ ರೆಡ್ಡಿ ಅವರನ್ನು ಕೆರಳಿಸಿತ್ತು.

ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಸಚಿವ ವಿ.ಮುನಿಯಪ್ಪ,ಮಾಜಿ ಶಾಸಕ ಎನ್.ಸಂಪಂಗಿ, ಮಾಜಿ ಜಿಪಂ ಅಧ್ಯಕ್ಷ ಗಂಗರೇ ಕಾಲುವೆ ನಾರಾಯಣಸ್ವಾಮಿ ಮತ್ತಿತರರು ಇದ್ದರು.
 

Follow Us:
Download App:
  • android
  • ios