ಜಗದೀಶ ಶೆಟ್ಟರ ಅವರನ್ನೇ ಮುಂದಿಟ್ಟುಕೊಂಡು ಲಿಂಗಾಯತ ಸಮುದಾಯವನ್ನು ಬೇರೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರ ಈ ಆಟ ರಾಜ್ಯದಲ್ಲಿ ಹೆಚ್ಚು ದಿನ ನಡೆಯುವುದಿಲ್ಲ: ಮಾಜಿ ಸಚಿವ ಮುರುಗೇಶ ನಿರಾಣಿ 

ಬೀಳಗಿ(ಮೇ.16): ಕಾಂಗ್ರೆಸ್‌ ಪಕ್ಷ ರಾಜಕೀಯ ಲಾಭಕ್ಕಾಗಿ ಲಿಂಗಾಯತರು ಮತ್ತು ವೀರಶೈವ ಲಿಂಗಾಯತರೆಂದು ಒಂದು ದೊಡ್ಡ ಸಮುದಾಯವನ್ನು ಒಡೆದಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಆರೋಪಿಸಿದರು. ಬೀಳಗಿಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗದೀಶ ಶೆಟ್ಟರ ಅವರನ್ನೇ ಮುಂದಿಟ್ಟುಕೊಂಡು ಲಿಂಗಾಯತ ಸಮುದಾಯವನ್ನು ಬೇರೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರ ಈ ಆಟ ರಾಜ್ಯದಲ್ಲಿ ಹೆಚ್ಚು ದಿನ ನಡೆಯುವುದಿಲ್ಲ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ಮೊದಲು ಲಿಂಗಾಯರನ್ನು ಒಂದುಗೂಡಿಸಿದ ಕೀರ್ತಿ ವಿರೇಂದ್ರ ಪಾಟೀಲರಿಗೆ ಸಲ್ಲುತ್ತದೆ. ನಂತರಲ್ಲಿ ಮತ್ತೆ ಛಿದ್ರವಾದ ಸಮುದಾಯವನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ಒಟ್ಟುಗೂಡಿಸಿದ್ದರು. ಈಗ ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿ ನೀಡುತ್ತ ಕಾಂಗ್ರೆಸ್‌ ನಾಯಕರು ಮತ್ತೆ ಒಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

KARNATAKA ELECTION RESULT 2023: ಬಾದಾಮಿ ಋಣ ತೀರಿಸಿ ಭೀಮಸೇನ ಚಿಮ್ಮನಕಟ್ಟಿ ಗೆಲ್ಲಿಸಿಕೊಟ್ಟ ಸಿದ್ದರಾಮಯ್ಯ

ಲಿಂಗಾಯತ ಮತದಾರರನ್ನು ಯಾಮಾರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ. ಆದರೆ, ವೀರಶೈವರು ದಡ್ಡರಲ್ಲ. ಪ್ರಜ್ಞಾವಂತರಿದ್ದಾರೆ. ಎಚ್ಚೆತ್ತುಕೊಂಡು ಸಮಾಜಕ್ಕೆ ಗಟ್ಟಿಯಾಗಿ ನಿಲ್ಲುತ್ತಾರೆ. ಲಿಂಗಾಯತ ಸಮಾಜದ ಬಗ್ಗೆ ಕುತಂತ್ರ ಬುದ್ದಿ ತೋರಿದ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ ಹಿಂಬಾಗಿಲ ಮೂಲಕ ರಾಜಕೀಯ ಮಾಡಿದ್ದಾರೆ. ಅನುಭವಿ ರಾಜಕಾರಣಿ ಜಗದೀಶ ಶಟ್ಟರ್‌ ಹಾಗೂ ಆರೇಳು ಬಾರಿ ಆಯ್ಕೆಯಾದ ಎಂ.ಬಿ.ಪಾಟೀಲರು ಮತ್ತು ಸಮಾಜದ ಹಿರಿಯರಾದ ಶಾಮನೂರ ಶಿವಶಂಕರಪ್ಪ ಅವರು ಕಾಂಗ್ರೆಸ್ಸಲ್ಲಿದ್ದರೂ ಲಿಂಗಾಯತರ ವಿರುದ್ಧ ಮಾತನಾಡಿದವರನ್ನು ಏಕ ಗಮನಿಸಿಲ್ಲ? ರಾಜಕೀಯ ಲಾಭಕ್ಕಾಗಿ ಮಾತ್ರ ಲಿಂಗಾಯತರನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ಸಿಗರು ಸುಳ್ಳು ಭರವಸೆ ನೀಡಿ ಮತದಾರರನ್ನು ಯಾಮಾರಿಸಿದ್ದಾರೆ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಬೇಡಿಕೆಗಳನ್ನು ಈಡೇರಿಸಲು ಅವರಿಂದ ಸಾಧ್ಯವಿಲ್ಲ. ಕೆಲವೇ ದಿನಗಳಲ್ಲಿ ಅವರ ಕುತಂತ್ರ ಬುದ್ಧಿಯ ಮುಖವಾಡ ಕಳಚಲಿದೆ. ಮುಂದೆ ಬರುವ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ನಿರಾಣಿ ಹೇಳಿದರು.