Asianet Suvarna News Asianet Suvarna News

ಕೊರಟಗೆರೆ: ಪ್ರಚಾರ ವೇಳೆ ಪರಂ ತಲೆಗೆ ಗಾಯ

ಕೊರಟಗೆರೆ ತಾಲೂಕು ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರ ಸಂದರ್ಭದಲ್ಲಿ ಅಭಿಮಾನಿಗಳು ಪರಮೇಶ್ವರ್‌ರನ್ನು ಎತ್ತಿ ಕುಣಿಸುತ್ತಿದ್ದ ವೇಳೆ ಅವರು ತಲೆ ಭಾಗ ಹಿಡಿದು ಕೆಳಗಿಳಿದರು. ಈ ವೇಳೆ ಅವರ ತಲೆಗೆ ಪೆಟ್ಟು ಬಿದ್ದಿದ್ದು ಬೆಳಕಿಗೆ ಬಂದಿದೆ. ಕೂಡಲೇ ಅವರಿಗೆ ಸಮೀಪದ ಅಕ್ಕಿರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಸಿದ್ದಾರ್ಥ ನಗರದ ಅವರ ಮನೆಯಲ್ಲೇ ಮುಂದಿನ ಚಿಕಿತ್ಸೆ ನೀಡಲಾಯಿತು. ಪರಮೇಶ್ವರ್‌ ಅವರಿಗೆ ಗಂಭೀರ ಏಟು ಬಿದ್ದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Former DCM G. Parameshwar Injury During Election Campaign in Tumakuru grg
Author
First Published Apr 29, 2023, 11:18 AM IST

ತುಮಕೂರು(ಏ.29):  ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ತಲೆಗೆ ಏಟು ಬಿದ್ದ ಘಟನೆ ಶುಕ್ರವಾರ ನಡೆದಿದೆ. ಬಾವುಟದ ಕೋಲು ತಗುಲಿ ಈ ಘಟನೆ ನಡೆದಿದೆ ಎಂದು ಕೆಲವರು ಹೇಳಿದರೆ, ಕಲ್ಲು ತೂರಾಟದಿಂದಾಗಿ ಪರಮೇಶ್ವರ್‌ರಿಗೆ ಗಾಯವಾಗಿದೆ ಎಂದು ಮತ್ತೆ ಕೆಲವರು ಆರೋಪಿಸಿದ್ದಾರೆ. ಆದರೆ, ಈವರೆಗೂ ಪರಮೇಶ್ವರ್‌ ಅವರಿಗೆ ಪೆಟ್ಟು ಬಿದ್ದದ್ದು ಹೇಗೆಂಬುದು ಖಚಿತವಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊರಟಗೆರೆ ತಾಲೂಕು ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರ ಸಂದರ್ಭದಲ್ಲಿ ಅಭಿಮಾನಿಗಳು ಪರಮೇಶ್ವರ್‌ರನ್ನು ಎತ್ತಿ ಕುಣಿಸುತ್ತಿದ್ದ ವೇಳೆ ಅವರು ತಲೆ ಭಾಗ ಹಿಡಿದು ಕೆಳಗಿಳಿದರು. ಈ ವೇಳೆ ಅವರ ತಲೆಗೆ ಪೆಟ್ಟು ಬಿದ್ದಿದ್ದು ಬೆಳಕಿಗೆ ಬಂದಿದೆ. ಕೂಡಲೇ ಅವರಿಗೆ ಸಮೀಪದ ಅಕ್ಕಿರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಸಿದ್ದಾರ್ಥ ನಗರದ ಅವರ ಮನೆಯಲ್ಲೇ ಮುಂದಿನ ಚಿಕಿತ್ಸೆ ನೀಡಲಾಯಿತು. ಪರಮೇಶ್ವರ್‌ ಅವರಿಗೆ ಗಂಭೀರ ಏಟು ಬಿದ್ದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಅಭಿವೃದ್ಧಿಗಳೇ ನಾಳೆಯ ಅಧಿಕಾರಕ್ಕೆ ದಾರಿ: ಡಾ.ಜಿ.ಪರಮೇಶ್ವರ್‌

ಪ್ರಚಾರದ ವೇಳೆ ಭಾರೀ ಗಾತ್ರದ ಹಾರ ಮಾಡಿಸಿ ಜೆಸಿಬಿಯಿಂದ ಹೂವು ಹಾಕುವಾಗ ಬಾವುಟದ ಕೋಲು ತಗುಲಿ ಪೆಟ್ಟಾಯಿತು ಎಂದು ಪ್ರತ್ಯಕ್ಷದರ್ಶಿಗಳಲ್ಲಿ ಕೆಲವರು ಹೇಳಿದರೆ, ಈ ಹಿಂದೆ ಪ್ರಚಾರ ಸಭೆಯಲ್ಲಿ ನಡೆದಂತೆ ಕಿಡಿಗೇಡಿಗಳು ಕಲ್ಲು ತೂರಿರಬಹುದು ಎಂದು ಮತ್ತೆ ಕೆಲವರು ವ್ಯಾಖ್ಯಾನಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೊರಟಗೆರೆ ಕಾರ್ಯಕರ್ತರು ತುಮಕೂರಿನ ಸಿದ್ದಾರ್ಥ ನಗರದ ಅವರ ಮನೆಗೆ ಆಗಮಿಸಿ ಆರೋಗ್ಯ ವಿಚಾರಿಸಿದರು.

ಕಲ್ಲು ಪ್ರದರ್ಶನ: 

ಘಟನೆ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಕಲ್ಲೊಂದನ್ನು ತಂದು ಇದೇ ಕಲ್ಲು ಅವರ ತಲೆ ಮೇಲೆ ಬಿದ್ದಿದ್ದು ಎಂದು ತೋರಿಸಿದರು. ಆ ಜಲ್ಲಿ ಕಲ್ಲಿಗೆ ಹೂವಿನ ಎಸಳುಗಳು ಅಂಟಿಕೊಂಡಿದ್ದು ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಈ ಬಾರಿಯೂ ರಾಜ್ಯದಲ್ಲಿ ಸ್ಪಷ್ಟಬಹುಮತ ಬರುವ ಭರವಸೆಯಿಲ್ಲ: ಎಚ್‌ಡಿಕೆ

ಎಸ್ಪಿ ಭೇಟಿ:

ಪರಮೇಶ್ವರ್‌ ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಎಸ್ಪಿ ರಾಹುಲ್‌ ಕುಮಾರ್‌ ಶಹಪೂರ್‌ ವಾಡ್‌ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಪರಮೇಶ್ವರ್‌ ಬೆಂಬಲಿಗರು ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದರು. ಅಲ್ಲದೆ ಕೊರಟಗೆರೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ದೂರಿದರು.

ಹೊಲಿಗೆ ಹಾಕುವಂಥ ಏಟು ಆಗಿಲ್ಲ: ವೈದ್ಯರು

ಪರಮೇಶ್ವರ್‌ ಆರೋಗ್ಯ ಸ್ಥಿರವಾಗಿದೆ. ಹೊಲಿಗೆ ಹಾಕುವಂಥ ಪೆಟ್ಟು ಆಗಿಲ್ಲ. ಬ್ಯಾಂಡೇಜ್‌ ಹಾಕಲಾಗಿದೆ. ಅವರು ಬೇಗ ಚೇತರಿಸಿಕೊಳ್ಳಲಿದ್ದು ಶನಿವಾರ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡುತ್ತೇನೆ ಅಂತ ಚಿಕಿತ್ಸೆ ನೀಡಿದ ವೈದ್ಯ ಡಾ.ಮುದ್ದುರಂಗಪ್ಪ ತಿಳಿಸಿದ್ದಾರೆ.  

Follow Us:
Download App:
  • android
  • ios