ಮುಖ್ಯಮಂತ್ರಿ ಸಂಕಲ್ಪಕ್ಕಾಗಿ ಮಾಂಸಾಹಾರ ತ್ಯಜಿಸಿದ ದಿಗ್ಗಜರು: ನಾಟಿ ಕೋಳಿ, ಮಟನ್ ಊಟ ಬೇಡ
ಮಾಂಸಾಹಾರ ಪ್ರಿಯರಾಗಿದ್ದ ಇಬ್ಬರು ದಿಗ್ಗಜ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸಂಕಲ್ಪದೊಂದಿಗೆ ಮಾಂಸಾಹಾರವನ್ನು ತ್ಯಜಿಸಿದ್ದಾರೆ.
ಬೆಂಗಳೂರು (ಫೆ.08): ರಾಜ್ಯದಲ್ಲಿ ಮಾಂಸಾಹಾರ ಪ್ರಿಯರಾಗಿದ್ದ ಇಬ್ಬರು ದಿಗ್ಗಜ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಮುಖ್ಯಮಂತ್ರಿ ಆಗಲೇಬೇಕು ಎಂಬ ಸಂಕಲ್ಪದೊಂದಿಗೆ ಮಾಂಸಾಹಾರವನ್ನು ತ್ಯಜಿಸಿದ್ದಾರೆ. ಈ ಮೂಲಕ ಸಂಪೂರ್ಣ ಸಸ್ಯಾಹಾರಿಗಳಾಗಿ ಬದಲಾಗಿದ್ದಾರೆ.
ಹೌದು, ರಾಜ್ಯದ ಇಬ್ಬರು ದಿಗ್ಗಜ ನಾಯಕರು ಚುನಾವಣೆ ಹೊತ್ತಲ್ಲಿ ಮಾಂಸಹಾರ ತ್ಯಜಿಸಿದ್ದಾರೆ. ಈಗ ಸಸ್ಯಹಾರಿಗಳಾಗಿ ಬದಲಾಗಿ ಬಿಟ್ಟಿದ್ದಾರೆ. ಸದಾ ಮಾಂಸಹಾರವನ್ನು ಪ್ರೀತಿಸುವ ನಾಯಕರೇ ಈಗ ಮಾಂಸಹಾರದಿಂದ ದೂರ ಇದ್ದಾರೆ. ಆದರೆ, ಮಾಂಸಹಾರ ಸೇವಿಸುವುದನ್ನು ಬಿಟ್ಟಿರುವ ಮಾಜಿ ಮುಖ್ಯಮಂತ್ರಿಗಳು ಎನ್ನುವುದು ಮತ್ತೊಂದು ವಿಶೇಷವಾಗಿದೆ. ಮಾಂಸಹಾರ ಬೇಡವೇ ಬೇಡ ಅಂತ ಶಪಥ ಮಾಡಿದ್ದು, ಈಗಾಗಲೇ ಒಂದುವರೆ ತಿಂಗಳು ಕಳೆದಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಒಂದೂವರೆ ತಿಂಗಳಿಂದ ಮಾಂಸಹಾರ ಸೇವನೆ ಮಾಡಿಲ್ಲ. ಇನ್ನು ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಕಳೆದ ಎರಡು ತಿಂಗಳಿಂದ ನಾನ್ ವೆಜ್ ನಿಂದ ದೂರವಿದ್ದಾರೆ. ಇವರಿಬ್ಬರೂ ಈಗ ಸಸ್ಯಾಹಾರಿಗಳಾಗಿ ಬದಲಾಗಿದ್ದಾರೆ.
ನಾಟಿ ಕೋಳಿ ಸಾರಿನ ಪ್ರಿಯ ಸಿದ್ದರಾಮಯ್ಯ: ಸದಾಕಾಲ ನಾಟಿ ಕೋಳಿ ಸಾರು ಮುದ್ದೆ ಬಯಸುವ ಸಿದ್ದರಾಮಯ್ಯ ಈಗ ಸಂಪೂರ್ಣ ಸಸ್ಯಹಾರಿ ಆಗಿದ್ದಾರೆ. ಆದರೆ, ಅಸ್ಪತ್ರೆಗೆ ದಾಖಲಾಗಿ ಬಂದ ಬಳಿಕ ಮಾಂಸಹಾರ ಸೇವನೆ ಬಿಟ್ಟಿದ್ದಾರೆ. ನಂತರ ಹಗಲು ಮತ್ತು ರಾತ್ರಿ ವೇಳೆ ಸಸ್ಯಹಾರ ಮಾತ್ರ ಸೇವನೆ ಮಾಡುತ್ತಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಜಾಧ್ವನಿ ಯಾತ್ರೆಯ ವೇಳೆಯು ತಮ್ಮ ಊಟದ ಸ್ಥಳದಲ್ಲಿ ತಮಗೆ ಸಸ್ಯಾಹಾರವನ್ನೇ ಮಾಡುವಂತೆ ಸೂಚನೆ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಿಯೂ ಮಾಂಸಹಾರ ಮಾಡಬೇಡಿ ಅಂತ ಖಡಕ್ ಸಂದೇಶ ರವಾನಿಸಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಮಾಂಸಹಾರ ಸೇವನೆ ಬಿಟ್ಟಿರುವುದಕ್ಕೆ ಕೈಪಡೆಯಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಮಾಂಸಹಾರ ಸೇವನೆ ಮಾಡಿ ಪ್ರಜಾಧ್ವನಿ ಯಾತ್ರೆ ವೇಳೆ ದೇವಸ್ಥಾನಕ್ಕೆ ಹೋದರೆ ಬೇರೆ ಸಂದೇಶ ರವಾನೆ ಆಗುತ್ತದೆ. ಆದ್ದರಿಂದ ಅನಗತ್ಯ ಚರ್ಚೆ ಆಗೋದನ್ನು ತಡೆಯಲು ಸಿದ್ದರಾಮಯ್ಯ ಮಾಂಸಹಾರ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ.
ಯಾತ್ರೆ ಆರಂಭದಿಂದ ಮಾಂಸಾಹಾರ ನಿಷಿದ್ಧ: ರಾಜ್ಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭ ಆದಾಗಿನಿಂದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾಂಸಹಾರ ತ್ಯಜಿಸಿದ್ದಾರೆ. ಯಾತ್ರೆಯ ವೇಳೆ ಕಾರ್ಯಕರ್ತರ ಮನೆಯಲ್ಲಿ ಕೇವಲ ಸಸ್ಯಹಾರ ಮಾತ್ರ ಸೇವನೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಾಂಸಾಹಾರ ಮಾಡದಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಮಾಡಿದ್ದರೂ ತಾವು ಮಾಂಸಾಹಾರ ಸೇವಿಸುವುದಿಲ್ಲ ಎಂದು ಸಸ್ಯಾಹಾರದ ಊಟವನ್ನು ಮಾತ್ರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಊಟ ಮಾಡಲು ಹೋದಾಗ ಮಾಂಸಹಾರ ಸೇವನೆಗೆ ಕೊಡುವ ಕಾರ್ಯಕರ್ತರ ಮನೆಯಲ್ಲಿ ಸಮಸ್ಯೆ ಆಗುವ ಆತಂಕವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಇನ್ನು ಕಾರ್ಯಕರ್ತರ ಪ್ರೀತಿಗೆ ಮಾಂಸಹಾರ ಸೇವನೆ ಜಾಸ್ತಿಯಾಗುವ ಆತಂಕವೂ ಎದುರಾಗಿದೆ. ಆರೋಗ್ಯದ ದೃಷ್ಟಿಯಿಂದ ಮಾಂಸಹಾರಕ್ಕೆ ಬದಲಾಗಿ ಸಸ್ಯಹಾರ ಸೂಕ್ತ ಎಂದು ತಿರ್ಮಾನಿಸಿದ್ದಾರೆ.
ಕರ್ನಾಟಕದಲ್ಲಿ ಅಲಿಬಾಬಾ ಸರ್ಕಾರವಿದೆ: ಸಿದ್ದರಾಮಯ್ಯ
ಆರೋಗ್ಯ ಭಯದಿಂದ ಸಸ್ಯಾಹಾರ ಸೇವನೆ: ಆದರೆ, ಮಾಜಿ ಮುಖ್ಯಮಂತ್ರಿಗಳು ಇಬ್ಬರೂ ಚುನಾವಣೆ ವೇಳೆ ಆರೋಗ್ಯ ಕಾಪಾಡಿಕೊಳ್ಳುವ ಭಯಕ್ಕೆ ಬಿದ್ದಿದ್ದಾರೆ ಎನ್ನುವುದು ಇಲ್ಲಿ ಕಂಡುಬರುತ್ತಿದೆ. ಪ್ರಯಾಣ, ಯಾತ್ರೆ, ಸಮಾವೇಶ ಮತ್ತು ವೇದಿಕೆ ಕಾರ್ಯಕ್ರಮಗಳ ವೇಳೆ ಮಾಂಸಹಾರಕ್ಕೆ ಬದಲಾಗಿ ಸಸ್ಯಹಾರವೇ ಸೂಕ್ತ ಎಂದು ತೀರ್ಮಾನಿಸಿದ್ದಾರೆ. ಈ ಬಗ್ಗೆ ಏನೇ ಚರ್ಚೆ ನಡೆದರೂ ಸಸ್ಯಹಾರಿಗಳಾಗಿ ಬದಲಾದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ಸಸ್ಯಾಹಾರ ಸೇವನೆ ಮಾಡಿಕೊಂಡು ಯಾತ್ರೆ ಮಾಡುತ್ತಿರುವುದು ಸತ್ಯವಾಗಿದೆ.