Asianet Suvarna News Asianet Suvarna News

ಬಿಎಸ್‌ವೈ ಸರ್ಕಾರ ಕಿತ್ತೊಗೆದದ್ದೇ ಪೇಶ್ವೆ ವಂಶಸ್ತರು: ಎಚ್‌.ಡಿ.ಕುಮಾರಸ್ವಾಮಿ

ನಾನು 2006ರಲ್ಲಿ ಯಡಿಯೂರಪ್ಪ ಜೊತೆ ಕೈ ಜೋಡಿಸದಿದ್ದರೆ ಅವರು ನಿರ್ನಾಮ ಆಗುತ್ತಿದ್ದರು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕುಮಟಾದಲ್ಲಿ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ಸಿದ್ದಲಿಂಗಯ್ಯ ಎನ್ನುವವರು ನನಗೆ ಚೀಟಿ ನೀಡಿದ್ದರು. 

Former CM HD Kumaraswamy Talks About BS Yediyurappa At Karwar gvd
Author
First Published Feb 10, 2023, 1:20 AM IST | Last Updated Feb 10, 2023, 1:20 AM IST

ಕಾರವಾರ (ಫೆ.10): ನಾನು 2006ರಲ್ಲಿ ಯಡಿಯೂರಪ್ಪ ಜೊತೆ ಕೈ ಜೋಡಿಸದಿದ್ದರೆ ಅವರು ನಿರ್ನಾಮ ಆಗುತ್ತಿದ್ದರು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕುಮಟಾದಲ್ಲಿ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು. ಸಿದ್ದಲಿಂಗಯ್ಯ ಎನ್ನುವವರು ನನಗೆ ಚೀಟಿ ನೀಡಿದ್ದರು. ಯಡಿಯೂರಪ್ಪ ಅವರನ್ನು ಮಂತ್ರಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರಕ್ಕೆ ಒಪ್ಪಿಗೆ ನೀಡಿದ್ದೆ ಎಂದರು. ವೀರಶೈವರಿಗೆ ಏನು ಮಾಡಿದೆ ಎಂದು ವಿಜಯೇಂದ್ರ ಅವರಿಗೆ ಗೊತ್ತಿಲ್ಲ. 

ನಮ್ಮ ತಂದೆ ವಿಧಾನಸಭೆ ವಿಸರ್ಜನೆ ಮಾಡಲು ಹೋಗಿದ್ದರು. ಆಗ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಅಧಿಕಾರ ಇದ್ದ ವೇಳೆ ಬಿಜೆಪಿಗರನ್ನು ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿ ಆಗಿತ್ತು ಎಂದರು. ಪೇಶ್ವೆ ವಂಶಸ್ಥರೇ ಅಂದು ಯಡಿಯೂರಪ್ಪ ಅವರಿಗೆ ಅಧಿಕಾರವನ್ನು ಕೊಡಲು ಬಿಡಲಿಲ್ಲ. ಅವರೇ ಯಡಿಯೂರಪ್ಪ ಸರ್ಕಾರವನ್ನು ತೆಗೆದರು. ಎರಡನೇ ಬಾರಿ ಕಷ್ಟಪಟ್ಟು ಯಡಿಯೂರಪ್ಪ ಸಿಎಂ ಆದರೂ ಅವರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ನನ್ನಿಂದ ವೀರಶೈವ, ದಲಿತ ಸೇರಿದಂತೆ ಎಲ್ಲ ಸಮುದಾಯಕ್ಕೂ ಗೌರವ ದೊರಕಿದೆ ಎಂದರು.

ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!

ಮುಳುಗ್ತಾರಾ ಶಿವಲಿಂಗೇಗೌಡ?: ಹಾಸನ ಜಿಲ್ಲೆಯ ಅರಸೀಕೆರೆಯ ಶಾಸಕ ಶಿವಲಿಂಗೇಗೌಡರು, ತಾನು ಕಾಂಗ್ರೆಸ್‌ ಅಭ್ಯರ್ಥಿಯಾದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದಾಗಿ ಹೇಳಿರುವ ಆಡಿಯೋ ವೈರಲ್‌ ಆಗಿರುವ ಬಗ್ಗೆ ಪ್ರಸ್ತಾಪಿಸಿ, ಶಿವಲಿಂಗೇಗೌಡ ಬೆಳೆದು ಬಿಟ್ಟಿದ್ದಾರೆ. ಅವರು 50 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತಾರಾ ಅಥವಾ ಅವರನ್ನು ಜನರು 50 ಸಾವಿರ ಲೀಡ್‌ನಲ್ಲಿ ಮುಳುಗಿಸುತ್ತಾರಾ? ಕಾದು ನೋಡಬೇಕು ಎಂದರು.

‘ಕೈ’ ರೇಖೆ ಅಳಿಸಿದ ಜನತೆ: ಪಂಚರತ್ನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿದೆ. ಜೆಡಿಎಸ್‌ ಪಕ್ಷಕ್ಕೆ ಸ್ಪಷ್ಪವಾದ ಬಹುಮತ ನೀಡಿದರೆ ನೆಮ್ಮದಿ ಜೀವನ ಮಾಡುವುದನ್ನು ಸಾಬೀತು ಪಡಿಸಿ ತೋರಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ ತೆನೆ ಹೊಲದಲ್ಲಿ ಇರಲಿ ಎಂದಿದ್ದಾರೆ. ಹೊಲದಲ್ಲಿ ತೆನೆ ಇದ್ದರೆ ಕೈಗೆ ಕೆಲಸ. ‘ಕೈ’ ನಾಡಿನ ಜನತೆಗೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರೇಖೆ ಅಳಿಸಿದ್ದಾರೆ. ತೆನೆ ಜನರನ್ನು ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ. ಕಾಂಗ್ರೆಸ್‌ ವಿಫಲವಾಗಿದ್ದಕ್ಕೆ ಕೈ ಮೇಲೆ ಜನರು ರೇಖೆ ಎಳೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಆರ್‌.ಅಶೋಕ್‌, ಕುಮಾರಸ್ವಾಮಿ ಬ್ರಿಟಿಷರ ರೀತಿ ಒಡೆದಾಳುವ ನೀತಿ ಮಾಡುತ್ತೇನೆ ಎಂದಿದ್ದಾರೆ. ನಾವು ಒಡೆದಾಳುವ ನೀತಿ ಮಾಡಿಲ್ಲ, ನಾವು ಒಡೆಸಿಕೊಂಡಿದ್ದೇವೆ. ಒಡೆಯುವ ಕೆಲಸ ಬಿಜೆಪಿಗರು ಮಾಡಿದ್ದಾರೆ. ಕಟ್ಟುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು. ಬ್ರಾಹ್ಮಣ ಕುರಿತು ತಾವು ನೀಡಿದ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರವರೇ ಅರ್ಥ ಮಾಡಿಕೊಂಡು ಹೇಳಿಕೆ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಈ ಗೊಂದಲಕ್ಕೆ ತೆರೆ ಎಳೆಯುತ್ತೇನೆ ಎಂದರು.

ಫೆ.10ರಂದು ಯಾದಗಿರಿಗೆ ಪ್ರಜಾಧ್ವನಿ ಯಾತ್ರೆ ಆಗಮನ: ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ 'ಸಿದ್ಧು' ಅಸ್ತ್ರ!

ಸಿ.ಟಿ. ರವಿ ಜಾತಿಯ ತಳ ಇಟ್ಟುಕೊಂಡ ಪಕ್ಷ ಎಂದಿದ್ದಾರೆ. ಸಿ.ಟಿ.ರವಿಗೆ ಜಾತ್ಯತೀತದ ಅರ್ಥ ಗೊತ್ತಿದೆಯಾ? ಅವರಿಗೆ ಗೊತ್ತಿರುವುದು ನಾವೆಲ್ಲ ಮುಂದು, ನೀವೆಲ್ಲ ಹಿಂದು ಅಷ್ಟೇ. ಸರ್ಕಾರ ಬಂದ ತಕ್ಷಣ ಅವರು ಮಾತ್ರ ಮುಂದೆ ಹೋಗುತ್ತಾರೆ. ಬಿಜೆಪಿ ಪ್ರತಿಯೊಬ್ಬರಿಗೆ ಧ್ವನಿಯಾಗಿರುವ ಪಕ್ಷವಲ್ಲ. ತಮ್ಮ ಅವಧಿಯಲ್ಲಿ ಪ್ರತಿಯೊಂದು ಸಮಾಜದವರ ಜತೆ ಚೆಲ್ಲಾಟ ಆಡಿದ್ದಾರೆ. ನಮ್ಮ ಸರ್ಕಾರ ಅಧಿಕಾರ ಬಂದಿದ್ದಾಗ ಎಲ್ಲರಿಗೂ ಗೌರವ ಕೊಟ್ಟಿದ್ದೇವೆ. ಸಿ.ಟಿ.ರವಿಗೆ ಡಿಎನ್‌ಎ ಬಿಟ್ಟು ಏನೂ ಗೊತ್ತಿಲ್ಲ. ಚಿಕ್ಕಮಗಳೂರಿಂದ ಗೆದ್ದು ಸಹ ಶೃಂಗೇರಿ ಮಠ ಒಡೆದವರಿಗೆ ಬೆಂಬಲ ಕೊಡುತ್ತಿದ್ದಾರೆ. ಶೃಂಗೇರಿ ಮಠ ಉಳಿಸಿದವರನ್ನು ವಿಲನ್‌ ಮಾಡ್ತಾ ಇದ್ದಾರೆ ಎಂದು ಆಪಾದಿಸಿದರು.

Latest Videos
Follow Us:
Download App:
  • android
  • ios