ಜೆಡಿಎಸ್‌ ಪಕ್ಷವನ್ನು ಪುಟ್ಗೋಸಿ ಪಕ್ಷ ಎನ್ನುವವರು ಮೊದಲು ತಮ್ಮ ಪಕ್ಷದ ನಾಯಕನ ಪುಟ್ಗೋಸಿ ನೋಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು. 

ಮಂಡ್ಯ (ಮಾ.20): ಜೆಡಿಎಸ್‌ ಪಕ್ಷವನ್ನು ಪುಟ್ಗೋಸಿ ಪಕ್ಷ ಎನ್ನುವವರು ಮೊದಲು ತಮ್ಮ ಪಕ್ಷದ ನಾಯಕನ ಪುಟ್ಗೋಸಿ ನೋಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿ.ಸಿ. ಫಾರಂ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿದ ಬಳಿಕ ಯಾವುದು ಪುಟ್ಗೋಸಿ ಪಕ್ಷ ಎನ್ನುವುದು ಗೊತ್ತಾಗುತ್ತೆ. ಜನರು ಇವರನ್ನೆಲ್ಲ ಎಲ್ಲಿಗೆ ಕಳುಹಿಸುತ್ತಾರೆ ಎನ್ನುವುದು ಗೊತ್ತಾಗುತ್ತೆ ಎಂದರು. 

ಚುನಾವಣೆ ಸಮೀಪಿಸಿದರೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನನ್ನು ಎಲ್ಲಿ ನಿಲ್ಲಿಸಬೇಕು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅವರಿಗೆ ಕ್ಷೇತ್ರವೇ ಸಿಗದೇ ಅಲೆದಾಡುತ್ತಿದ್ದಾರೆ. ಅಂತವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಮೊದಲು ಅವರ ನಾಯಕನ ಪುಟ್ಗೋಸಿ ಹೇಗಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದು ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿವಿಳಂಬವಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಇದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅವರು ಯಾವಾಗ ಬಿಡುಗಡೆ ಮಾಡುವರೋ, ಹೇಗೆ ಮಾಡುತ್ತಾರೋ ಗೊತ್ತಿಲ್ಲ. 

ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ಅದರ ಬಗ್ಗೆ ನಾನೇನು ಹೇಳಲಾರೆ. ಚುನಾವಣೆಯಲ್ಲಿ ಹಾಯ್‌.. ಆಯ್ಯ.. ಪಕ್ಷಗಳು ಹೋರಾಟ ಮಾಡಬೇಕು ಅಷ್ಟೇ ಎಂದು ಉತ್ತರಿಸಿದರು. ಕಾಂಗ್ರೆಸ್‌ ಮತ್ತು ಬಿಜೆಪಿ ಟಿಕೆಚ್‌ ಆಕಾಂಕ್ಷಿಗಳನ್ನು ಸೆಳೆಯುವುದಕ್ಕೆ ನಾನೇನು ಆಯಸ್ಕಾಂತನಾ. ನಾನು ಮ್ಯಾಗ್ನೆಟ್‌ ಅಂತೂ ಅಲ್ಲ ಎಂದು ಎರಡೂ ಪಕ್ಷಗಳ ಆರೋಪಕ್ಕೆ ಟಾಂಗ್‌ ನೀಡಿದರು. ಹಾಸನ ಟಿಕೆಚ್‌ ಅನ್ನು ರಾಜೇಗೌಡರಿಗೆ ನೀಡುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಅವರು ಉತ್ತರಿಸಲು ನಿರಾಕರಿಸಿದರು.

ರಾಜ್ಯದ ಅಭಿವೃದ್ಧಿಗೆ ಜೆಡಿಎಸ್‌ ಬೆಂಬಲಿಸಿ: ಸ್ವಹಿತಕ್ಕಾಗಿ ಎಂದಿಗೂ ರಾಜಕಾರಣ ಮಾಡಿದ ವ್ಯಕ್ತಿ ನಾನಲ್ಲ. ಜನರ ಅಭಿವೃದ್ಧಿಗಾಗಿ, ಬಡಜನರ ಕಲ್ಯಾಣಕ್ಕಾಗಿ ಶಾಲಾ ಮಕ್ಕಳಿಗಾಗಿ, ವೃದ್ಧರಿಗಾಗಿ, ರೈತರಿಗಾಗಿ, ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಜೆಡಿಎಸ್‌ ಬೆಂಬಲಿಸಿ. ಒಮ್ಮೆ ಸ್ವಂತ ಬಲದ ಅಧಿಕಾರವನ್ನು ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು. ಬನ್ನೂರು ಪಟ್ಟಣದ ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲಿ ರೋಡ್‌ ಶೋ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕ್ರೆಡಿಟ್‌ ತೆಗೆದುಕೊಳ್ಳೋದು ಎಚ್ಡಿಕೆಗೆ ಹೊಸತೇನಲ್ಲ: ಸಿ.ಪಿ.ಯೋಗೇಶ್ವರ್‌

ಇಂದಿನ ರಾಜ್ಯ ರಾಜಕಾರಣದಲ್ಲಿ ಅನ್ಯ ಪಕ್ಷಗಳ ಒಡೆತಕ್ಕೆ ಸಿಲುಕಿ ರಾಜ್ಯ ನಲುಗುತ್ತಿದೆ. ರಾಜ್ಯದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತಮ್ಮದೇ ಆದ ಹತ್ತಾರು ಕನಸುಗಳನ್ನು ಹೊಂದಿದ್ದು, ಅದನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಎಲ್ಲಾ ಪಕ್ಷಗಳಿಗೂ ಅಧಿಕಾರ ನೀಡಿದ್ದೀರಿ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸ್ವಂತ ಬಲದಿಂದ ಸರ್ಕಾರ ರಚಿಸಲು ಅವಕಾಶ ಮಾಡಿಕೊಡುವಂತೆ ಮನವಿಯನ್ನು ಮಾಡಿದ ಅವರು, ಟಿ. ನರಸೀಪುರ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವಂತೆಯೂ ಜನರಲ್ಲಿ ಕೋರಿದರು.