ಜೆಡಿಎಸ್ಗೆ ಜನಬೆಂಬಲ ನೋಡಿ ಬಿಜೆಪಿ, ಕಾಂಗ್ರೆಸ್ ತಲ್ಲಣ: ಕುಮಾರಸ್ವಾಮಿ
ನಾವು ಯಾವುದೇ ಪಕ್ಷದ ಟೀಂ ಅಲ್ಲ. ಜನತೆಯ ಟೀಂ ಆಗಿ ಕೆಲಸ ಮಾಡುತ್ತೇವೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಪಕ್ಷದ ಬಗ್ಗೆ ಹೆಚ್ಚಿನ ಪ್ರೀತಿ ಆಗಿದೆ. ರಾಜ್ಯ ಸರ್ಕಾರವು ಮಂಡಿಸಿರುವ ಬಜೆಟ್ಗೆ ಯಾವ ಮೌಲ್ಯ ಇಲ್ಲ. ಜಾತ್ರೆ ಮುಗಿದ ಮೇಲೆ ಉಳಿದ ವಸ್ತುಗಳಿಗೆ ಡಿಸ್ಕೌಂಟ್ ಇಟ್ಟು ಬನ್ನಿ ಎಂದು ಕರೆಯುವಂತೆ ಬಜೆಟ್ ಇದೆ. ಇದೊಂದು ಡಿಸ್ಕೌಂಟ್ ಸೇಲ್ ಬಜೆಟ್ ಅಷ್ಟೇ ಎಂದು ವ್ಯಂಗ್ಯವಾಡಿದ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು(ಫೆ.19): ರಾಜ್ಯದಲ್ಲಿ ಜೆಡಿಎಸ್ಗೆ ಜನಬೆಂಬಲ ಸಿಗುತ್ತಿರುವುದನ್ನು ಗಮನಿಸಿದ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ಗೆ ತಲ್ಲಣ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಯಾವುದೇ ಪಕ್ಷದ ಟೀಂ ಅಲ್ಲ. ಜನತೆಯ ಟೀಂ ಆಗಿ ಕೆಲಸ ಮಾಡುತ್ತೇವೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಪಕ್ಷದ ಬಗ್ಗೆ ಹೆಚ್ಚಿನ ಪ್ರೀತಿ ಆಗಿದೆ. ರಾಜ್ಯ ಸರ್ಕಾರವು ಮಂಡಿಸಿರುವ ಬಜೆಟ್ಗೆ ಯಾವ ಮೌಲ್ಯ ಇಲ್ಲ. ಜಾತ್ರೆ ಮುಗಿದ ಮೇಲೆ ಉಳಿದ ವಸ್ತುಗಳಿಗೆ ಡಿಸ್ಕೌಂಟ್ ಇಟ್ಟು ಬನ್ನಿ ಎಂದು ಕರೆಯುವಂತೆ ಬಜೆಟ್ ಇದೆ. ಇದೊಂದು ಡಿಸ್ಕೌಂಟ್ ಸೇಲ್ ಬಜೆಟ್ ಅಷ್ಟೇ ಎಂದು ವ್ಯಂಗ್ಯವಾಡಿದರು.
ಚುನಾವಣೆ ಹಿನ್ನೆಲೆಯಲ್ಲಿ ಇನ್ನು ಎರಡು ತಿಂಗಳು ನಿರಂತರ ಸಭೆಗಳನ್ನು ಬಿಜೆಪಿ ಮಾಡುತ್ತದೆ. ಅಲ್ಲಿ ಕೇಂದ್ರ, ರಾಜ್ಯ ಎಂದು ದೊಡ್ಡ ನಾಯಕರ ದಂಡೇ ಇದೆ. ಆದರೂ ಯಾವುದೇ ಉಪಯೋಗ ಇಲ್ಲ. ಜನತಾದಳ ಜನರ ಹೃದಯಕ್ಕೆ ಹೋಗಿದೆ ಎಂದ ಅವರು, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಕೇವಲ ಚುನಾವಣಾ ಗಿಮಿಕ್. ರಾಮನಗರದಲ್ಲಿ ಸ್ಥಳ ಗುರುತು ಆಗಿಲ್ಲ. ಕೆಲವು ಅರಣ್ಯ ಜಾಗ ಇದೆ. ಅದನ್ನೆಲ್ಲಾ ಕ್ಲಿಯರ್ ಮಾಡಿಕೊಂಡು ಬರಬೇಕಿದೆ. ಮೂರು ವರ್ಷದ ಹಿಂದೆ ನಿರ್ಮಿಸಿದ್ದರೆ ಅಭಿನಂದನೆ ಮಾಡಬಹುದಿತ್ತು. ಚುನಾವಣೆಗೆ ಒಂದು ತಿಂಗಳು ಇದೆ. ಒಂದು ತಿಂಗಳಲ್ಲಿ ಏನು ಮಾಡುತ್ತಾರೆ. ಕಾಟಾಚಾರಕ್ಕೆ ಗುದ್ದಲಿ ಪೂಜೆ ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
Karnataka Politics : 500ಕ್ಕೂ ಅಧಿಕ ಮಂದಿ ಬಿಜೆಪಿ ನಾಯಕರು ಜೆಡಿಎಸ್ಗೆ
ಇನ್ನು, ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನನ್ನ ಕೂಸು. 2006ರಲ್ಲಿಯೇ ವೈದ್ಯಕೀಯ, ನರ್ಸಿಂಗ್, ಆಸ್ಪತ್ರೆಯ ನೀಲನಕ್ಷೆ ಮಾಡಿದ್ದೆ. ಆಗ ಕೆಲವು ಜಮೀನಿನ ಸಮಸ್ಯೆ ಎದುರಾಯಿತು. ಅಲ್ಲದೇ, ವಿಶ್ವವಿದ್ಯಾಲಯದಲ್ಲಿ ಹಣ ಎಲ್ಲಿದೆ ಎಂದು ತಕರಾರು ಮಾಡಲಾಯಿತು. ನಮ್ಮ ಸರ್ಕಾರದ ಅವಧಿಯಲ್ಲಿಯೇ ಮಾಡಲು ಪ್ರಯತ್ನ ಪಟ್ಟರೂ ಆಗಲಿಲ್ಲ. ಇದೇ ಬಿಜೆಪಿಯವರು ರಾಜ್ಯಪಾಲರಿಂದ ಮತ್ತು ಸಿಂಡಿಕೇಟ್ನಿಂದ ಅಡ್ಡಗಾಲು ಹಾಕಿಸಿದ್ದರು. ಈಗ ತರಾತುರಿಯಲ್ಲಿ 600 ಕೋಟಿ ರು. ಕಟ್ಟಡ ನಿರ್ಮಿಸಲು ವರ್ಗಾವಣೆ ಮಾಡಿದ್ದಾರೆ. ಮೊದಲು 300 ಕೋಟಿ ರು. ಬಿಡುಗಡೆ ಮಾಡುತ್ತಿದ್ದಾರೆ. 24 ಗಂಟೆಯಲ್ಲಿ ಹಣ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆ ಮಾಡಲು ತಿಳಿಸಿದ್ದಾರೆ. ಇದರ ಗುದ್ದಲಿ ಪೂಜೆಗೆ ತರಾತುರಿಯಲ್ಲಿ ಪ್ರಧಾನಿಯವರನ್ನು ಕರೆಸುತ್ತಾರೋ ಗೊತ್ತಿಲ್ಲ. ಬಿಜೆಪಿದು ಎಲ್ಲಾ ಚುನಾವಣೆ ಗಿಮಿಕ್ ಅಷ್ಟೆ. ಇದಕ್ಕೆಲ್ಲಾ ಮನ್ನಣೆ ನೀಡಬೇಕಾದ ಅಗತ್ಯ ಇಲ್ಲ ಎಂದರು.