ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮೇಯರ್ ಗಂಗಾಬಿಕೆ ಕಾಂಗ್ರೆಸ್ ಅಭ್ಯರ್ಥಿಯಾಗೋ ಭರವಸೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಕ್ಷೇತ್ರದ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರೋ ಕೆಜಿಎಫ್ ಬಾಬು ಪತ್ನಿ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ವರದಿ: ರಕ್ಷಾ, ಕಟ್ಟೆಬೆಳಗುಳಿ, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಏ.13): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರ್ತಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.‌ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ರಣಕಹಳೆ ಊದಲು ಸಿದ್ದರಾಗ್ತಿದ್ದಾರೆ.‌ ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆ ಆಗದೇ ಇದ್ರೂ ಕೂಡ ಇಬ್ಬರು ಆಕಾಂಕ್ಷಿಗಳು ಒಂದೇ ಕ್ಷೇತ್ರದಲ್ಲಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸೋ ಮೂಲಕ ಚುನಾವಣಾ ರಾಜಕೀಯ ಶುರು ಮಾಡಿದ್ದು, ಅವರ ನಡೆ ಗಮನ ಸೆಳೆದಿದೆ.

ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮೇಯರ್ ಗಂಗಾಬಿಕೆ ಕಾಂಗ್ರೆಸ್ ಅಭ್ಯರ್ಥಿಯಾಗೋ ಭರವಸೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಘೋಷಣೆ ಆಗದೇ ಇದ್ರೂ ಇವತ್ತು ಅವರಿಗೆ ಉತ್ತಮ ದಿನ ಅನ್ನೋ ಕಾರಣಕ್ಕೆ ನಾಮಪತ್ರ ಸಲ್ಲಿಕೆ‌ ಮಾಡಿದ್ದಾರೆ. ಗಂಗಾಂಬಿಕೆ ಮಾತ್ರವಲ್ಲದೇ ಇದೇ ಕ್ಷೇತ್ರದ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರೋ ಕೆಜಿಎಫ್ ಬಾಬು ವಿಭಿನ್ನ ಯತ್ನ ನಡೆಸಿದ್ದಾರೆ. ತಮ್ಮ ಪತ್ನಿ ಶಾಜಿಯಾ ತರನುಂ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆಜಿಎಫ್ ಬಾಬು ಹಾಗು ಗಂಗಾಬಿಕೆ ಇಬ್ಬರೂ ಕಾಂಗ್ರೆಸ್ ನಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದು ಮಾಜಿ ಶಾಸಕ ಆರ್ ವಿ ದೇವರಾಜ್ ಅವ್ರಿಗೆ ಟಿಕೆಟ್ ನೀಡಿದ್ರೆ ಬಂಡಾಯ ಏಳೋ ಸೂಚನೆಗಳನ್ನ ನಾಮಪತ್ರ ಸಲ್ಲಿಸೋ ಮೂಲಕ ತೋರಿಸಿದ್ದಾರೆ.

ನಮ್ಮಿಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದ್ರೂ ಒಟ್ಟಾಗಿ ಇರ್ತೀವಿ ಅಂತ ಗಂಗಾಂಬಿಕೆ ಮತ್ತು ಕೆಜಿಎಫ್‌ ಬಾಬು ಹೇಳಿದ್ದಾರೆ. ಸಾವಿರಾರು ಕಾರ್ಯಕರ್ತರನ್ನ ಸೇರಿಸಿಕೊಂಡು ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆಯಲ್ಲಿ ಸಾಗಿ ತಮ್ಮ ಶಕ್ತಿಯ ಪ್ರದರ್ಶನವನ್ನ ಸಹ ಮಾಡಿದ್ದು ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನೀಡುವಂತೆ ಒತ್ತಡ ಹಾಕಿದ್ದಾರೆ. ಗಂಗಾಬಿಕೆ ಹಾಗು ಕೆಜಿಎಫ್ ಬಾಬು ಪತ್ನಿ ಎರಡೆರಡು ಪ್ರತಿ ನಾಮಪತ್ರ ಸಲ್ಲಿಸಿದ್ದಾರೆ. ಗಂಗಾಂಬಿಕೆ ಕಾಂಗ್ರೆಸ್ ಅಭ್ಯರ್ಥಿ ಎಂದು ಒಂದು ನಾಮಪತ್ರ ಮತ್ತು ಸ್ವತಂತ್ರ ಅಭ್ಯರ್ಥಿ ಎಂದು ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಗಂಗಾಂಬಿಕೆ. ಕಾಂಗ್ರೆಸ್ ಪಕ್ಷ ನಮಗೆ ಅವಕಾಶ ಮಾಡಿಕೊಡುತ್ತೆ ಅನ್ನೋ ವಿಶ್ವಾಸವಿದೆ.‌ ಪಕ್ಷದಿಂದ ಟಿಕೆಟ್ ಘೋಷಣೆ ಆಗದೇ ಇದ್ರೇ ಮುಂದಿನ ನಿರ್ಧಾರ ಏನು ಅನ್ನೋದನ್ನ ತಿಳಿಸುತ್ತೇನೆ ‌ಎಂದು‌ ಹೇಳಿದ್ದಾರೆ.

ಹಳೆಗಂಡನ ಪಾದವೇ ಗತಿ ಮರಳಿ ಜೆಡಿಎಸ್‌ಗೆ ವೈಎಸ್‌ವಿ ದತ್ತಾ, ಏ.18 ನಾಮಪತ್ರ ಸಲ್ಲಿಕೆ

ಒಟ್ನಲ್ಲಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಲಭಿಸಲಿದೆ. ‌ ಟಿಕೆಟ್ ನಮಗೆ ನೀಡಬೇಕು ಅನ್ನೋ ಸಂದೇಶ ಸಾರಲು ಮಾಜಿ ಮೇಯರ್ ಗಂಗಾಂಬಿಕೆ ಮತ್ತು ಕೆಜಿಎಫ್ ಬಾಬು ನಾಮಪತ್ರ ಸಲ್ಲಿಸೋ ಮೂಲಕ ಗಮನ ಸೆಳೆದಿದ್ರೆ, ಕಾಂಗ್ರೆಸ್ ಪಕ್ಷ ತನ್ನ ತೀರ್ಮಾನವನ್ನು ಕಾಯ್ದಿಟ್ಟುಕೊಂಡಿದೆ. ಅದೇನೇ ಇರಲಿ, ಈ ಬಾರಿ ಚಿಕ್ಕಪೇಟೆಯಲ್ಲಿ ಟೈಟ್ ಫೈಟ್ ಇರೋದಂತೂ ಖಾತರಿಯಾಗಿದೆ.

ಅಂದು ಭವಾನಿ ರೇವಣ್ಣಗಾಗಿ ಇಂದು ವೈಎಸ್‌ವಿ ದತ್ತಾಗಾಗಿ, ದಳಪತಿಗಳ ನಡುವೆ ಕಿಚ್ಚು!

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.