* ಸುನೀಲ್ ವಲ್ಯಾಪುರೆಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ * ಚಿಂಚೋಳಿ ಬೈ ಎಲೆಕ್ಷನ್‌ನಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲು ಮನವಿ* ಯಡಿಯೂರಪ್ಪ ನಿವಾಸದ ಎದುರು ಸುನೀಲ್ ವಲ್ಯಾಪುರೆ ಪರ ಘೋಷಣೆ

ಬೆಂಗಳೂರು/ಕಲಬುರಗಿ, (ಜು.30): ದಲಿತ ಕೋಟಾದಡಿಯಲ್ಲಿ ಸುನೀಲ್ ವಲ್ಯಾಪುರೆಗೆ ಸಚಿವ ಸ್ಥಾನ ನೀಡುವಂತೆ ಭೋವಿ (ವಡ್ಡರ) ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಸಮುದಾಯದ ಮುಖಂಡರು ಇಂದು (ಶುಕ್ರವಾರ) ಬೆಂಗಳೂರಿನಲ್ಲಿ ಯಡಿಯೂರಪ್ಪ ನಿವಾಸದ ಎದುರು ಸುನೀಲ್ ವಲ್ಯಾಪುರೆ ಪರ ಘೋಷಣೆ ಕೂಗಿದರು.

ಚಿಂಚೋಳಿ ಉಪಚುನಾವಣೆಯ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರು ನುಡಿದಂತೆ ವಿಧಾನಪರಿಷತ್‌ ಸದಸ್ಯ ಸುನೀಲ್‌ ವಲ್ಯಾಪುರೆ ಅವರನ್ನು ದಲಿತ ಕೋಟಾದಡಿಯಲ್ಲಿ ಮಂತ್ರಿಸ್ಥಾನ ನೀಡಬೇಕು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭೋವಿ(ವಡ್ಡರ) ಸಮುದಾಯದ ಮುಖಂಡರು ಒತ್ತಾಯಿಸಿದರು.

ಬಸವರಾಜ್ ಮತ್ತಿಮೂಡ್‌ಗೆ ಸಚಿವ ಸ್ಥಾನ ನೀಡುವಂತೆ ಬೃಹತ್ ಪ್ರತಿಭಟನಾ ಮೆರವಣಿಗೆ

ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭೋವಿ (ವಡ್ಡರ) ಸಮುದಾಯವು ಬಿ.ಜೆ.ಪಿ. ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಭೋವಿ (ವಡ್ಡರ) ಸಮುದಾಯ ಬಿ.ಜೆ.ಪಿ. ಪಕ್ಷಕ್ಕೆ ನಿರಂತರವಾಗಿ ಬೆಂಬಲ ಸೂಚಿಸಿದೆ. 

ಈ ಭಾಗದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷದಿಂದ ಶಾಸಕರು ಮತ್ತು ಸಂಸದರಾಗಿ ಆಯ್ಕೆಯಾಗಲು ನಮ್ಮ ಸಮುದಾಯದ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ವಲ್ಯಾಪುರೆ ಅವರ ಕೊಡುಗೆ ಅಪಾರವಾಗಿದೆ ಎಂದರು. 

ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಸುನೀಲ್ ವಲ್ಯಾಪುರೆಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.