ಸಂಪುಟ ವಿಸ್ತರಣೆ: ಯಾರಿಗೆ ಚಾನ್ಸ್, ಯಾರಿಗಿಲ್ಲ? ಕಡ್ಡಿ ಮುರಿದಂತೆ ಹೇಳಿದ ಅಶೋಕ್
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸದ್ಯ ರಾಜ್ಯ ಬಿಜೆಪಿಯಲ್ಲಿ ಸಿಹಿ-ಕಹಿಯ ರಾಜಕಾರಣ ಜೋರಾಗಿದೆ. ಸಿಎಂ ಭರವಸೆ ಗೆದ್ದವರಿಗೆ ಬೂಸ್ಟ್ ನೀಡಿದ್ರೆ, ಸಚಿವರ ಮಾತು ಸೋತವರನ್ನ ಮೌನಿಯಾಗಿಸುವಂತೆ ಮಾಡಿದೆ. ಅದರಲ್ಲೂ ಸಚಿವ ಅಶೋಕ್ ಯಾರಿಗೆ ಚಾನ್ಸ್, ಯಾರಿಗಿಲ್ಲ ಎನ್ನುವುದರ ಬಗ್ಗೆ ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ.
ಬೆಂಗಳೂರು, (ಜ.26): ಉಪ ಚುನಾವಣೆಯಲ್ಲಿ ಗೆದ್ದ 12ರ ಪೈಕಿ 11 ನೂತನ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಚರ್ಚಗಳು ನಡೆದಿವೆ.
ಮತ್ತೊಂದೆಡೆ ಯಡಿಯೂರಪ್ಪನವರ ಕರ್ಚಿ ಕಟ್ಟಿಗೊಳಿಸಿದ 17 ಜನಕ್ಕೂ ಸೂಕ್ತ ಸ್ಥಾನ ಮಾನ ನೀಡಬೇಕೆನ್ನುವುದು ಕೆಲವರ ಮಾತು. ಆದ್ರೆ, ಉಪಚುನಾಣೆಯಲ್ಲಿ ಗೆದ್ದವರ ಪೈಕಿ 11 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳುಲು ಮನಸ್ಸು ಮಾಡಿದ್ದಾರೆ.
ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರು ಬಹಿರಂಗಗೊಳಿಸಿದ ಸಿಎಂ
ಪಕ್ಷಾಂತರ ಮಾಡಿ ಉಪಚುನಾವಣೆಯಲ್ಲಿ ಸೋಲು ಕಂಡಿರುವ ಎಚ್.ವಿಶ್ವನಾಥ್ ಹಾಗೂ ಎಂಬಿಟಿ ನಾಗರಾಜ್ ಅವರನ್ನು ಸದ್ಯಕ್ಕೆ ಕೈಬಿಟ್ಟು ಮುಂದೆ ನೋಡೋಣ ಎನ್ನುವ ತೀರ್ಮಾನಕ್ಕೆ ಬಿಎಸ್ವೈ ಬಂದಿದ್ದಾರೆ.
ಇದಕ್ಕೆ ಪೂಕರವೆಂಬಂತೆ ಮೂಲ ಬಿಜೆಪಿಗರು ಸಹ ಗೆದ್ದವರಿಗೆ ಮಾತ್ರ, ಸೋತವರಿಗೆ ಮುಂದೆ ನೋಡೋಣ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲೂ ಕಂದಾಯ ಸಚಿವ ಆರ್.ಅಶೋಕ್, ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಸದ್ಯಕ್ಕೆ ಗೆದ್ದವರಿಗೆ ಮೊದಲ ಆದ್ಯತೆ. ಸೋತವರ ಬಗ್ಗೆ ಸಿಎಂ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಇಂದು (ಭಾನುವಾರ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಯಡಿಯೂರಪ್ಪನವರಿಗೆ ಗೊತ್ತಿದೆ. ಯಾರನ್ನು ಮಂತ್ರಿ ಮಾಡಬೇಕು, ಇದನ್ನು ಯಾವ ರೀತಿ ನಿಭಾಯಿಸಬೇಕೆಂದು ಸಿಎಂಗೆ ಗೊತ್ತಿದೆ ಎಂದರು.
ಗೆದ್ದಿರುವ ಶಾಸಕರಿಗೆ ನಾವು ಮೊದಲು ಆದ್ಯತೆ ನೀಡುತ್ತೇವೆ. ಸದ್ಯಕ್ಕೆ ಸೋತವರಿಗೆ ಸ್ಥಾನಮಾನವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಒಟ್ಟಾರೆ ಕೇಸರಿ ಪಾಳಯದಲ್ಲಿ ಒಂದು ಕಡೆ ಸಂಪುಟ ಸಂಕಟ ಶುರುವಾಗಿದ್ರೆ, ಇನ್ನೊಂದು ಕಡೆ ತ್ಯಾಗದ ರಾಜಕಾಣದ ಸದ್ದು ಮುನ್ನೆಲೆಗೆ ಬಂದಿದೆ. ಹೀಗಾಗಿ ಸಿಎಂ ಬಿಎಸ್ವೈ ಈ ಎಲ್ಲಾ ಗೊಂದಲಕ್ಕೆ ಅದ್ಯಾವ ಮುಲಾಮು ಹಚ್ಚುತ್ತಾರೋ ಕಾದು ನೋಡಬೇಕಿದೆ.